RCB vc CSK: ಮಾರ್ಚ್ 28ರಂದು ನೋಡ್ಕೊತಿವಿ! ಆರ್ಸಿಬಿ ಬ್ಯಾಟರ್ ವಿರುದ್ಧ ಉರಿದುಬಿದ್ದ ಸಿಎಸ್ಕೆ ಅಭಿಮಾನಿಗಳು
ಮಾರ್ಚ್ 28ರಂದು ಶುಕ್ರವಾರ ಐಪಿಎಲ್ 2025ರ ಬಹುನಿರೀಕ್ಷಿತ ಪಂದ್ಯ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಮುನ್ನ ಸಿಎಸ್ಕೆ ಅಭಿಮಾನಿಗಳು ಆರ್ಸಿಬಿ ಬ್ಯಾಟರ್ ವಿರುದ್ಧ ಉರಿದುಬಿದ್ದಿದ್ದಾರೆ, ಪಂದ್ಯದ ದಿನ ನಿಮ್ಮನ್ನು ನೋಡಿಕೊಳ್ತಿವಿ ಎಂದಿದ್ದಾರೆ.
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಆರ್ಸಿಬಿ ಎರಡನೇ ಪಂದ್ಯಕ್ಕಾಗಿ ಚೆನ್ನೈಗೆ ಆಗಮಿಸಿದ್ದು ಭರ್ಜರಿ ಅಭ್ಯಾಸ ನಡೆಸುತ್ತಿದೆ. ತಂಡ ಚೆನ್ನೈಗೆ ಬಂದ ಬಳಿಕ ಆರ್ ಸಿಬಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಸಿಎಸ್ಕೆ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

ಜಿತೇಶ್ ಹೇಳಿಕೆಗೆ ಸಿಟ್ಟಾದ ಸಿಎಸ್ಕೆ ಫ್ಯಾನ್ಸ್
ಆರ್ ಸಿಬಿ ಆಟಗಾರರನ್ನು ಚೆನ್ನೈ ಎಂದರೆ ನಿಮಗೆ ಏನು ನೆನಪಾಗುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ಕೊಟ್ಟಿರುವ ಆರ್ಸಿಬಿ ಸ್ಫೋಟಕ ಬ್ಯಾಟರ್ ಜಿತೇಶ್ ಶರ್ಮಾ, ಇಡ್ಲಿ, ಸಾಂಬಾರ್, ದೋಸೆ ಚಟ್ನಿ.. ಚಟ್ನಿ ಎಂದಿದ್ದಾರೆ. ಇದೊಂದು ಮಾತು ಸಿಎಸ್ಕೆ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ತಮಿಳುನಾಡು ಆಹಾರ ಪದ್ಧತಿಯನ್ನು ಅಣಕ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟಲ್ಲದೆ ಸಿಎಸ್ಕೆ ವಿರುದ್ಧ 9 ಅಥವಾ 10 ಬಾಲ್ನಲ್ಲಿ 50 ರನ್ ಹೊಡೆದು ಬೇಗನೆ ಪಂದ್ಯ ಮುಗಿಸಬೇಕು ಎಂದು ಜಿತೇಶ್ ಹೇಳಿದ್ದು ಸಿಎಸ್ಕೆ ಅಭಿಮಾನಿಗಳಿಗೆ ಸಿಟ್ಟು ಬರಿಸಿದೆ. 2019 ರಿಂದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರ್ ಸಿಬಿ ಸಿಎಸ್ಕೆ ವಿರುದ್ಧ ಗೆದ್ದೇ ಇಲ್ಲ, ಈ ವರ್ಷವೂ ನಿಮಗೆ ಸೋಲು ಖಚಿತ ಎಂದಿದ್ದಾರೆ. ಇದೇ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಎಸ್ಕೆ ಆರ್ ಸಿಬಿ ಅಭಿಮಾನಿಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.
ಬಹುನಿರೀಕ್ಷಿತ ಪಂದ್ಯಕ್ಕೆ ಸಿದ್ಧತೆ
ಶುಕ್ರವಾರ ಸಿಎಸ್ಕೆ ವಿರುದ್ಧ ಆರ್ ಸಿಬಿ ಸೆಣೆಸಲು ಸಜ್ಜಾಗಿದ್ದು ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 2018ರ ಬಳಿಕ ತವರಿನಲ್ಲೇ ಸಿಎಸ್ಕೆ ಸೋಲಿಸುವ ವಿಶ್ವಾಸದಲ್ಲಿ ಆರ್ ಸಿಬಿ ಇದ್ದರೆ, ಗೆಲುವಿನ ಸರಣಿ ಮುಂದುವರೆಸುವ ವಿಶ್ವಾಸದಲ್ಲಿದೆ ಸಿಎಸ್ಕೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆರ್ ಸಿಬಿ ತಂಡದ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ. ಸಿಎಸ್ಕೆ ಸ್ಪಿನ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು ಸಿಎಸ್ಕೆ ವಿರುದ್ಧ ಹೋರಾಟ ಕೊಡಲು ಆರ್ ಸಿಬಿ ಸಜ್ಜಾಗಿದೆ. ಶುಕ್ರವಾರ ಮಾತ್ರ ಅಭಿಮಾನಿಗಳಿಗೆ ಮನರಂಜನೆ ಸಿಗುವುದು ಖಚಿತವಾಗಿದೆ.












Click it and Unblock the Notifications