Rahul Dravid: ವಿಶ್ವಕಪ್ ಬಳಿಕ ಕೋಚ್ ಸ್ಥಾನದಿಂದ ಕೆಳಗಿಳಿಯಲಿರುವ ದ್ರಾವಿಡ್! ಮುಂದಿನ ಕೋಚ್ ಯಾರು
ಏಕದಿನ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿರುವ ಭಾರತ ತಂಡ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ವಿಶ್ವಕಪ್ ಬಳಿಕ ಭಾರತ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಅದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೂರು ಪಂದ್ಯಗಳ ಟಿ20 ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಏಕದಿನ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಮತ್ತು ಅವರ ಕೋಚಿಂಗ್ ಸಿಬ್ಬಂದಿಯ ಒಪ್ಪಂದ ಮುಗಿಯಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದ್ರಾವಿಡ್ ಅವರ ಭವಿಷ್ಯದ ಬಗ್ಗೆ ಇನ್ನೂ ಯಾವ ಚರ್ಚೆ ನಡೆಸಿಲ್ಲ.

ಏಕದಿನ ವಿಶ್ವಕಪ್ನ ಫಲಿತಾಂಶ ಏನೇ ಆದರೂ ಕೋಚಿಂಗ್ ಸ್ಥಾನದಿಂದ ಕೆಳಗಿಳಿಯಲು ದ್ರಾವಿಡ್ ಬಯಸಿದ್ದರು. ನವೆಂಬರ್ 23 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ವಿವಿಎಸ್ ಲಕ್ಷ್ಮಣ್ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕವಾಗಲಿದ್ದಾರೆ.
ಮುಂದುವರೆಸಲು ಬಿಸಿಸಿಐ ಆಸಕ್ತಿ
ಬಿಸಿಸಿಐ ರಾಹುಲ್ ದ್ರಾವಿಡ್ ಮತ್ತು ಅವರ ತಂಡದ ಅವಧಿಯನ್ನು ವಿಸ್ತರಿಸಲು ಆಸಕ್ತಿಯನ್ನು ಹೊಂದಿದೆ. ಆದರೆ ರಾಹುಲ್ ದ್ರಾವಿಡ್ ಈ ಬಗ್ಗೆ ಅಂತಿಮವಾಗಿ ನಿರ್ಧರಿಸಬೇಕಾಗುತ್ತದೆ. ಏಷ್ಯಾಕಪ್ 2022, ಟಿ20 ವಿಶ್ವಕಪ್ 2022 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2023ರ ಸೋತ ಬಳಿಕ ಬಿಸಿಸಿಐ ದ್ರಾವಿಡ್ ಬಗ್ಗೆ ಅಸಮಾಧಾನ ಹೊಂದಿತ್ತು, ಆದರೆ 2023ರ ಏಷ್ಯಾಕಪ್ನಲ್ಲಿ ಭಾರತ ಚಾಂಪಿಯನ್ ಆಗಿದ್ದು, ಸದ್ಯ ಏಕದಿನ ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಪರಿಸ್ಥಿತಿ ಬದಲಾಗಿದೆ.
ಕೋಚ್ ಅವಧಿ ವಿಸ್ತರಣೆ ಅಥವಾ ನವೀಕರಣದ ಕುರಿತು ರಾಹುಲ್ ಅವರೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಸಮಯದಲ್ಲಿ ನಾವೆಲ್ಲರೂ ವಿಶ್ವಕಪ್ ಮೇಲೆ ಗಮನಹರಿಸಿದ್ದೇವೆ. ಅವರು ಕೋಚ್ ಆಗಿ ಮುಂದುವರೆಯುವುದಿಲ್ಲ ಎಂದು ಹೇಳಿದ್ದಾರೆ, ನಮಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇನ್ಸೈಡ್ಸ್ಪೋರ್ಟ್ ವರದಿ ಮಾಡಿದೆ.
ಕ್ರಿಕ್ಬಜ್ ವರದಿಯ ಪ್ರಕಾರ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಒಪ್ಪಂದವನ್ನು ವಿಸ್ತರಿಸಲಿದ್ದಾರೆ ಎಂದು ಹೇಳಲಾಗಿದೆ.
ಟಿ20 ವಿಶ್ವಕಪ್ 2024ರ ಆರಂಭಕ್ಕೆ ಇನ್ನೂ ಆರು ತಿಂಗಳಿದೆ, ಭಾರತ ತಂಡ ಇದಕ್ಕಾಗಿ ಸಜ್ಜಾಗಬೇಕಿದೆ. ಇದಕ್ಕಾಗಿ ದ್ರಾವಿಡ್ ಪಾತ್ರ ಕೂಡ ಮುಖ್ಯವಾಗಲಿದೆ. ಟಿ20 ವಿಶ್ವಕಪ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡದೇ ಇದ್ದರೂ, ತಂಡದ ವಿಶ್ವಾಸ ಗೆಲ್ಲುವಲ್ಲಿ ದ್ರಾವಿಡ್ ಯಶಸ್ವಿಯಾಗಿದ್ದಾರೆ.
ವಿಶ್ವಕಪ್ ಬಳಿಕ ವಾರದ ವಿರಾಮದ ನಂತರ ರಾಹುಲ್ ದ್ರಾವಿಡ್ ಅವರೊಂದಿಗೆ ಬಿಸಿಸಿಐ ಚರ್ಚಿಸಲಿದೆ. ಮತ್ತು ನವೆಂಬರ್ ಅಂತ್ಯದ ವೇಳೆಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications