India vs Pakistan: ಏಷ್ಯಾಕಪ್ ಪಂದ್ಯಾವಳಿ ಮುಂದೂಡಿಕೆ! ಮಹಿಳಾ ವಿಶ್ವಕಪ್, ಟಿ20 ವಿಶ್ವಕಪ್ ಪರಿಸ್ಥಿತಿ ಏನು?
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ಶುರುವಾಗಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್ ವಿರುದ್ಧ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ಮಾಡುತ್ತಿದೆ. ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದ್ದು, ಬಳಿಕ ವಿವಿಧ ಸ್ಥಳಗಳಲ್ಲಿ ಡ್ರೋನ್ ದಾಳಿ ಮುಂದುವರೆಸಿದೆ. ಈಗಾಗಲೇ ಎರಡೂ ದೇಶಗಳ ನಡುವಿನ ಸಂಬಂಧ ಹಾಳಾಗಿದ್ದು ಮುಂಬರುವ ಏಷ್ಯಾಕಪ್ ಪಂದ್ಯಾವಳಿ ಮೇಲೆ ಪರಿಣಾಮ ಬೀರಿದೆ.
2025 ರ ಆಗಸ್ಟ್-ಸೆಪ್ಟೆಂಬರ್ನಲ್ಲಿ ಏಷ್ಯಾ ಕಪ್, ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಮಹಿಳಾ ಏಕದಿನ ವಿಶ್ವಕಪ್ ಮತ್ತು 2026 ರ ಫೆಬ್ರವರಿ-ಮಾರ್ಚ್ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು ಈ ಮೂರು ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಭಾರತ ಪಾಕಿಸ್ತಾನ ನಡುವಿನ ಸಂಘರ್ಷದ ಬಳಿಕ ಇದೀಗ ಮೂರು ಪಂದ್ಯಾವಳಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಬಿಸಿಸಿಐ ಅಥವಾ ಐಸಿಸಿ ದೃಢಪಡಿಸಿಲ್ಲ ಇನ್ನೂ ಈ ಬಗ್ಗೆ ದೃಢಪಡಿಸಿಲ್ಲವಾದರೂ ಮಾಜಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಐಸಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ನೇತೃತ್ವ ವಹಿಸಿದ್ದಾರೆ, ಅವರು ಕ್ಯಾಬಿನೆಟ್ ಸಚಿವರೂ ಆಗಿದ್ದಾರೆ.
"ಪರಿಸ್ಥಿತಿ ಇನ್ನೂ ಗಂಭೀರವಾಗುತ್ತಿದೆ. ಮುಂದೆ ಏನಾಗುತ್ತದೆ ಎನ್ನುವುದು ನಮಗೆ ತಿಳಿದಿಲ್ಲ. ಏಷ್ಯಾ ಕಪ್ ಮತ್ತು ಮಹಿಳಾ ವಿಶ್ವಕಪ್ಗೆ ನಮಗೆ ಇನ್ನೂ 4-5 ತಿಂಗಳು ಸಮಯವಿದೆ. ಸ್ಥಳ ಬದಲಾವಣೆ ಅಥವಾ ಪಂದ್ಯಾವಳಿ ಮುಂದೂಡುವ ಬಗ್ಗೆ ಐಸಿಸಿಯೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಐಸಿಸಿ ಕೂಡ ಗಮನಿಸುತ್ತಿದೆ. ಸಮಯಕ್ಕೆ ಸರಿಯಾಗಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
2008 ರಲ್ಲಿ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ನಂತರ, ಭಾರತವು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಜೊತೆ ಆಡಿತು. ಆದರೆ 2008 ರಿಂದ, ಭಾರತವು ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಪಾಕಿಸ್ತಾನದೊಂದಿಗೆ ಆಡಿಲ್ಲ. ಭಾರತ vs ಪಾಕಿಸ್ತಾನ ಕೇವಲ ಎಸಿಸಿ, ಐಸಿಸಿ ಪಂದ್ಯಾವಳಿಯಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
ಏಷ್ಯಾ ಕಪ್ 2025 ಮುಂದೂಡಿಕೆ?
ಏಷ್ಯಾ ಕಪ್ 2025 ಅನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಆಗಸ್ಟ್-ಸೆಪ್ಟೆಂಬರ್ನಲ್ಲಿ ಪಂದ್ಯಾವಳಿ ನಡೆಯಬೇಕಿದೆ. ಆದರೆ ಎರಡೂ ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಪಂದ್ಯಾವಳಿ ವೇಳಾಪಟ್ಟಿಯ ಪ್ರಕಾರ ನಡೆಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಬಿಸಿಸಿಐ ಮತ್ತು ಪಿಸಿಬಿ ನಡುವಿನ ಒಪ್ಪಂದದ ಪ್ರಕಾರ, ಭಾರತ vs ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಿಸಲಾಗುತ್ತದೆ. ಆದಾಗ್ಯೂ, ಮೊಹ್ಸಿನ್ ನಖ್ವಿ ಎಸಿಸಿಯ ಉಸ್ತುವಾರಿ ವಹಿಸಿರುವುದರಿಂದ, ಏಷ್ಯಾ ಕಪ್ನಲ್ಲಿ ಯಾವುದೇ ತಟಸ್ಥ ಸ್ಥಳದ ಆಯ್ಕೆ ಇರುವುದಿಲ್ಲ ಎನ್ನಲಾಗಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಮಾಜಿ ಖಜಾಂಚಿ ಆಶಿಶ್ ಶೆಲಾರ್ ಎಸಿಸಿ ಮಂಡಳಿಯ ಸದಸ್ಯರಾಗಿದ್ದಾರೆ. ನಮ್ಮ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿಲುವನ್ನು ನಾವು ಬೆಂಬಲಿಸುತ್ತೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications