ಟಿಪ್ಪು ಜಯಂತಿ: ಸಂಭವನೀಯ ಮುಜುಗರದಿಂದ ತಪ್ಪಿಸಿಕೊಂಡ ಸರಕಾರ
ಶಿರಸಿ, ನವೆಂಬರ್ 7: ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿಚಾರವಾಗಿ ರಾಜ್ಯ ಸರಕಾರವು ಸಂಭವನೀಯ ಮುಜುಗರವೊಂದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ. ಆಮಂತ್ರಣ ಪತ್ರಿಕೆ ವಿಚಾರವಾಗಿ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ರಾಜ್ಯ ಸರಕಾರದಿಂದ ನಿರ್ದೇಶನ ಬಂದಿದ್ದು, ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ನಮೂದಿಸದಂತೆ ಆದೇಶ ನೀಡಲಾಗಿದೆ.
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬಳಸಬೇಡಿ: ಅನಂತಕುಮಾರ ಹೆಗಡೆ
ಆಮಂತ್ರಣ ಪತ್ರಿಕೆಯಲ್ಲಿ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ನಮೂದಿಸುವ ಕುರಿತು ಸರಕಾರದ ನಿರ್ದೇಶನ ಬಯಸಿದ್ದ ಜಿಲ್ಲಾಡಳಿತಕ್ಕೆ ನವೆಂಬರ್ ಏಳರಂದು ಸರಕಾರದ ಮುಖ್ಯ ಕಾರ್ಯದರ್ಶಿಯಿಂದ ಆದೇಶದ ಪತ್ರ ಬಂದಿದ್ದು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ನಮೂದಿಸುವುದು ಬೇಡ ಎಂದು ಸೂಚಿಸಲಾಗಿದೆ.
ಶಿಷ್ಟಾಚಾರದಂತೆ ರಾಜ್ಯ ಸರಕಾರವು ಆಹ್ವಾನ ಪತ್ರಿಕೆಯಲ್ಲಿ ಜನಪ್ರತಿನಿಧಿಗಳ ಹೆಸರನ್ನು ನಮೂದಿಸಬೇಕಾಗಿದ್ದರೂ ಕೆಲವು ಪ್ರಕರಣಗಳಲ್ಲಿ ಜನಪ್ರತಿನಿಧಿಗಳೇ ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ನಮೂದಿಸದಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಿದಲ್ಲಿ ಅಂತಹ ಜನಪ್ರತಿನಿಧಿಗಳ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕುವುದು ಬೇಡ ಎಂದು ನಿರ್ದೇಶನ ನೀಡಲಾಗಿದೆ.