ಪರೇಶ್ ಹತ್ಯೆ : ಉತ್ತರ ಕನ್ನಡ ಜಿಲ್ಲೆಯಲ್ಲಿ 3 ದಿನ ನಿಷೇಧಾಜ್ಞೆ
ಶಿರಸಿ, ಡಿಸೆಂಬರ್ 11 : ಚಿತ್ರಹಿಂಸೆ ನೀಡಿ, ಕಾದ ಎಣ್ಣೆ ಸುರಿದು 21 ವರ್ಷದ ಪರೇಶ್ ಮೆಸ್ತಾನನ್ನು ಹತ್ಯೆಗೈದ ನಂತರ ಕೋಮದ್ವೇಷ ತಾರಕಕ್ಕೇರಿದ್ದು, ಕುಮಟಾದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಯಾದ್ಯಂತ 3 ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಡಿಸೆಂಬರ್ 12ರಿಂದ 14ರವರೆಗೆ ಮೂರು ದಿನಗಳು ಉತ್ತರ ಕನ್ನಡ ಜಿಲ್ಲಾದ್ಯಂತ ಯಾವುದೇ ಸಭೆ, ಸಮಾರಂಭ, ಮೆರವಣಿಗಳನ್ನು ನಡೆಸುವಂತಿಲ್ಲ. ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸೋಮವಾರ ಆದೇಶ ಹೊರಡಿಸಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದುವೆ, ಮುಂಜಿ, ಇತ್ಯಾದಿ ವೈಯಕ್ತಿಕ ಕಾರ್ಯಕ್ರಮ ಹೊರತುಪಡಿಸಿ, ಉತ್ತರ ಕನ್ನಡ ಜಿಲ್ಲಾದ್ಯಂತ 11 ತಾಲೂಕುಗಳಲ್ಲಿ ಯಾವುದೇ ಸಭೆ, ಸಮಾರಂಭ, ಮೆರವಣಿಗೆಗಳು, ಬೈಕ್ rallyಗಳಿಗೆ ನಿಷೇಧ ಹೇರಲಾಗಿದೆ.
ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆಗಾಗಿ ಶಾಂತಿ ಕಾಪಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದು, ಇದರ ಬೆನ್ನಲ್ಲೇ ಮಂಗಳವಾರ ಶಿರಸಿ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ. ಈ ಸಂದರ್ಭದಲ್ಲಿಯೇ ಮುಸ್ಲಿಂ ಯುವಕನೋರ್ವ ಕಾಣೆಯಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.
ಡಿಸೆಂಬರ್ 6ರಂದು, ಬಾಬ್ರಿ ಮಸೀದಿ ಧ್ವಂಸವಾದ 25ನೇ ವರ್ಷದ ದಿನದಂದು, 21 ವರ್ಷದ ಯುವಕರ ಪರೇಶ್ ಮೇಸ್ತಾ ನಿಗೂಢವಾಗಿ ಕಣ್ಮರೆಯಾಗಿದ್ದ. ಎರಡು ದಿನಗಳ ನಂತರ ಆತನ ಶವ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಆತನ ಮೇಲೆ ಮಚ್ಚಿನಿಂದ ಕೊಚ್ಚಿದ ಗುರುತುಗಳಿದ್ದವು, ಕಾದ ಎಣ್ಣೆಯನ್ನೂ ಆತನ ಮೇಲೆ ಚೆಲ್ಲಲಾಗಿತ್ತು.
ಈ ಹತ್ಯೆಯ ಹಿಂದೆ ಮತೀಯ ಶಕ್ತಿಗಳ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಈ ಘಟನೆ ನಡೆದ ನಂತರ ಹೊನ್ನಾವರ ಹೊತ್ತಿ ಉರಿಯುತ್ತಿದೆ. ಕುಮಟಾದಲ್ಲಿ ಕಾನೂನು ಸುವ್ಯವಸ್ಥೆಗೆ ಹೆಣಗುತ್ತಿದ್ದ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರವಾರದಲ್ಲಿ ಕೂಡ ಟೈರುಗಳಿಗೆ ಬೆಂಕಿ ಹಚ್ಚಿ ಹಿಂದೂಪರ ಸಂಘಟನೆಗಳು ಸಿಟ್ಟು ಹೊರಹಾಕಿವೆ. ನಗರದಾದ್ಯಂತ ಮೆರವಣಿಗೆ ನಡೆಸಿ ಮೂರು ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಿದ್ದರು. ಮುಂಡಗೋಡದಲ್ಲಿಯೂ ಹಿಂದೂಪರ ಸಂಘಟನೆಗಳು ಬಂದ್ ಮಾಡಿದ್ದರು.












Click it and Unblock the Notifications