ಭಟ್ಕಳಕ್ಕೆ ಬಂದ 'ಲೈಫ್ ಲೈನ್ ಎಕ್ಸ್ಪ್ರೆಸ್' ರೈಲಾಸ್ಪತ್ರೆ
ಭಟ್ಕಳ, ಆಗಸ್ಟ್, 07: ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಆರೋಗ್ಯ ಭಾಗ್ಯ ಕರುಣಿಸಲು ಸಂಚಾರಿ ರೈಲ್ವೇ ಆಸ್ಪತ್ರೆ "ಲೈಫ್ ಲೈನ್ ಎಕ್ಸಪ್ರೆಸ್" ಭಟ್ಕಳ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದೆ. ಆಗಸ್ಟ್ 1ರಿಂದ ಜನತೆಗೆ ವಿವಿಧ ರೀತಿಯ ಚಿಕಿತ್ಸೆ ಹಾಗೂ ಔಷಧಿಯನ್ನು ಉಚಿತವಾಗಿ ನೀಡುವುದರೊಂದಿಗೆ ಚಿಕಿತ್ಸೆಗೆ ಆಗಮಿಸುವವರಿಗೆ ಉಚಿತವಾಗಿ ವಸತಿ ಮತ್ತು ಊಟೋಪಚಾರವನ್ನು ಸಹ ನೀಡುತ್ತಿದೆ.
ದೇಶದ ಪ್ರಸಿದ್ಧ ವೈದ್ಯರ ತಂಡವೇ ಇದ್ದು ಆರೋಗ್ಯ ತಪಾಸಣೆ, ಸಲಹೆ, ಚಿಕಿತ್ಸೆಯಲ್ಲದೇ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸುತ್ತಿದೆ. ಲೈಫ್ ಲೈನ್ ಎಕ್ಸಪ್ರೆಸ್ನಲ್ಲಿ ಆರೋಗ್ಯ ಸೇವೆಯನ್ನು ಅತೀ ಹೆಚ್ಚು ಜನರು ಪಡೆಯಲು ಸಹಕಾರಿಯಾಗುವಂತೆ ಈಗಾಗಲೇ ಎಲ್ಲಾ ತಹಸೀಲ್ದಾರ್ ಕಚೇರಿಗಳಲ್ಲಿ ಸಭೆಗಳನ್ನು ನಡೆಸಿ ವ್ಯಾಪಕ ಪ್ರಚಾರ ನೀಡಲಾಗಿದ್ದು ಪ್ರತಿಯೋರ್ವರೂ ಕೂಡಾ ಅಗತ್ಯವಿದ್ದಲ್ಲಿ ಇದರ ಸದುಪಯೋಗ ಪಡೆಯಬಹುದು ಎಂದೂ ತಿಳಿಸಲಾಗಿದೆ.[ಶಂಕರ ನೇತ್ರಾಲಯದೊಂದಿಗೆ ಇನ್ಫೋಸಿಸ್ ತರಬೇತಿ ಘಟಕ]
ಭಟ್ಕಳದ ರೈಲ್ವೇ ನಿಲ್ದಾಣಕ್ಕೆ ಈಗಾಗಲೇ ಬಂದು ನಿಂತಿರುವ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಎರಡು ಆಪರೇಶನ್ ಥಿಯೇಟರ್ ಗಳಿದ್ದು, ಐದು ಅಪರೇಶನ್ ಟೇಬಲ್ ಳನ್ನು ಅಳವಡಿಸಲಾಗಿದೆ. ಪ್ರತಿ ರೋಗಿಯನ್ನೂ ಸಹ ತಜ್ಞ ವೈದ್ಯರು ತಪಾಸಣೆ ಮಾಡಲಿದ್ದು ಸೂಕ್ತ ಸಲಹೆ, ಮಾರ್ಗದರ್ಶನದೊಂದಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುತ್ತಿದೆ
ಭಟ್ಕಳ ತಾಲೂಕಿನಲ್ಲಿ ಚಿಕಿತ್ಸೆಯನ್ನು ಆಗಸ್ಟ್ 1ರಿಂದಲೆ ಆರಂಭಿಸಲಾಗಿದೆ. ಚಿಕಿತ್ಸೆಗೆ ಪೂರ್ವಭಾವಿಯಾಗಿ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣಾ ಕಾರ್ಯ ನಡೆಯುತ್ತಿದೆ.[ಆಮದು ನಿಷೇಧ ಅಡಿಕೆ ಬೆಳೆಗಾರರ ಹಿತ ಕಾಯುವುದೆ?]
ಆ.2ರಿಂದ 4ರ ತನಕ ಕಣ್ಣಿನ ತಪಾಸಣೆ ನಡೆದಿದ್ದುಮ ಆ9ರ ತನಕ ಅಗತ್ಯವಿದ್ದವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಆ.10 ರಿಂದ 11ರ ತನಕ ಸೀಳು ತುಟಿ ತಪಾಸಣೆ ಹಾಗೂ ಆ.11 ರಿಂದ 13ರ ತನಕ ಸೀಳು ತುಟಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಆ.10 ಮತ್ತು 11 ರಂದು ಮೂಳೆಗೆ ಸಂಬಂಧ ಪಟ್ಟಂತೆ ತಪಾಸಣೆ ನಡೆಯಿದೆ.
ಆ.11 ರಿಂದ 13ರ ತನಕ ಅಗತ್ಯವಿದ್ದವರಿಗೆ ಆರ್ಥೋಪೆಡಿಕ್ ಶಸ್ತ್ರ ಕ್ರಿಯೆ ನಡೆಯಲಿದೆ. ಕಿವಿ, ಗಂಟಲು ಮತ್ತು ಮೂಗು ತಪಾಸಣೆ ಆ.14 ರಿಂದ 16ರ ತನಕ ನಡೆಯಲಿದ್ದು ಆ.15 ರಿಂದ 21ರ ತನಕ ಅಗತ್ಯವಿದ್ದವರಿಗೆ ಶಸ್ತ್ರಕ್ರಿಯೆ ನಡೆಯಲಿದೆ. ಆ.8 ರಿಂದ 14ರ ತನಕ ದಂತ ಚಿಕಿತ್ಸೆಗಾಗಿ ತಪಾಸಣೆ ನಡೆಯಲಿದೆ ಹಾಗೂ ಆ.19 ರಿಂದ 21ರ ತನಕ ಮೂರ್ಛೆ ರೋಗಿಗಳ ತಪಾಸಣೆ ನಡೆಯಲಿದೆ.
ಒಟ್ಟಾರೆ ರೈಲಿನ ಆಸ್ಪತ್ರೆಯಲ್ಲಿ ನುರಿತ ವೈದ್ಯರುಗಳು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರು ತಮ್ಮ ಹಿಂದಿನ ಚಿಕಿತ್ಸಾ ವಿವರಗಳಿದ್ದಲ್ಲಿ ಅವುಗಳನ್ನು ತರಬೇಕು. ತಪಾಸಣೆ ಮತ್ತು ಚಿಕಿತ್ಸೆ, ಔಷಧಿ, ಊಟ, ತಿಂಡಿ, ವಸತಿ ಸಂಪೂರ್ಣ ಉಚಿತವಾಗಿದ್ದು ಜಿಲ್ಲೆಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.