ಸುಂದರ ನಗರ ಸಿಂಗಪುರದಲ್ಲಿ ನೋಡಿ, ಮೋದಿ ಮಾತಿನ ಮೋಡಿ
ಸಿಂಗಪುರ, ನವೆಂಬರ್ 14: "ಎಲ್ಲಾ ಫಿಂಟೆಕ್ ಕಂಪನಿಗಳು ಮತ್ತು ಸ್ಟಾರ್ಟಪ್ ಗಳಿಗೆ ಭಾರತ ಅತ್ಯುತ್ತಮ ನೆಲೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಿಂಗಪುರದ ಫಿಂಟೆಕ್ಸ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದ ಅವರು, 'ಭಾರತವನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ತಮ್ಮ ಸರ್ಕಾರದ ಕೊಡುಗೆಗಳೇನು' ಎಂಬುದನ್ನು ವಿವರಿಸಿದರು.
ಭಾರತದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಒಂದು ಭದ್ರ ತಳಪಾಯವನ್ನು ಹಾಕಿದೆ ಎಂದು ಮೋದಿ ಹೆಮ್ಮೆಯಿಂದ ಹೇಳಿದರು.
ಜಾಗತಿಕ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ತಂತ್ರಜ್ಞಾನದ ಪಾತ್ರ ಅತೀ ಮಹತ್ವದ್ದು ಎಂದು ಮೋದಿ ಅಭಿಪ್ರಾಯಪಟ್ಟರು. ಬದುಕನ್ನು ಬದಲಿಸಲು ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ತಂತ್ರಜ್ಞಾನ ನೀಡುತ್ತಿದೆ. ಹೊಸ ಕಾಲ ತಂತ್ರಜ್ಞಾನದ್ದು ಎಂದು ಮೋದಿ ಅಭಿಪ್ರಾಯ ಪಟ್ಟರು.
ಆದರೆ ಹಿಂದುಳಿದ ಮತ್ತು ಕಡೆಗಣಿಸಲ್ಪಟ್ಟ ವರ್ಗಗಳ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಶತಕೋಟಿ ಜನರ ಬದುಕು ಬದಲಿಸಲಿದೆ!
"ಸರ್ಕಾರವೊಂದರ ಮುಖಂಡನಾಗಿ ಸಿಂಗಪುರದ ಫಿಂಟೆಕ್ ಫೆಸ್ಟಿವಲ್ ನಲ್ಲಿ ಮಾತನಾಡುತ್ತಿರುವ ಮೊದಲಿಗ ನಾನು ಎಂಬುದಕ್ಕೆ ಹೆಮ್ಮೆಯಾಗುತ್ತಿದೆ. ಭಾರತದ ಮೂಲಕ ನಡೆಯುತ್ತಿರುವ ಈ ವಿತ್ತೀಯ ಕ್ರಾಂತಿ 1.3 ಶತಕೋಟಿ ಜನರ ಬದುಕನ್ನು ಪರಿವರ್ತಿಸಲಿದೆ ಎಂಬುದನ್ನು ಈ ಕಾರ್ಯಕ್ರಮ ಸೂಚಿವಿಸುತ್ತಿದೆ." -ನರೇಂದ್ರಮೋದಿ, ಪ್ರಧಾನಿ

ತಂತ್ರಜ್ಞಾನ ಯುಗದ ಹೆಗ್ಗಳಿಕೆ
"ತಂತ್ರಜ್ಞಾನದಿಂದಾದ ಐತಿಹಾಸಿಕ ಪರಿವರ್ತನೆಯ ಕಾಲದಲ್ಲಿ ನಾವಿದ್ದೇವೆ. ಜಾಗತಿಕ ಆರ್ಥಿಕತೆಯ ಗುಣಸ್ವಭಾವದಲ್ಲಿ ಬದಲಾವಣೆಯಾಗುತ್ತಿದೆ. ತಂತ್ರಜ್ಞಾನವು ಹೊಸ ಜಗತ್ತಿನ ಸ್ಪರ್ಧಾತ್ಮಕತೆ ಮತ್ತು ಶಕ್ತಿಯನ್ನು ವ್ಯಾಖ್ಯಾನಿಸುತ್ತದೆ. ಮತ್ತು ಇದು ಎಷ್ಟೋ ಬದುಕನ್ನು ಬದಲಿಸುವುದಕ್ಕೆ ಅನಂತ ಅವಕಾಶಗಳನ್ನು ಸೃಷ್ಟಿಸುತ್ತಿದೆ."- ನರೇಂದ್ರ ಮೋದಿ, ಪ್ರಧಾನಿ

ಸರ್ವರ ಒಳಿತಿನ ಸಂಕಲ್ಪ
"ನನ್ನ ಸರ್ಕಾರ ಅಧಿಕಾರಕ್ಕೆ ಬಂದಿದ್ದು 2014 ರಲ್ಲಿ. ಪ್ರತಿಯೊಬ್ಬ ದುರ್ಬಲ, ಬಡವ ಎಂಬ ಭೇದವಿಲ್ಲದೆ ಪ್ರತಿಯೊಬ್ಬ ನಾಗರಿಕನ ಬದುಕನ್ನೂ ಬದಲಿಸುವ ಸಂಕಲ್ಪದೊಂದಿಗೆ ನಾವು ಅಧಿಕಾರಕ್ಕೆ ಬಂದೆವು. ಈ ಸಂಕಲ್ಪ ಈಡೇರಿಸಲು ಒಂದು ಗಟ್ಟಿಯಾದ ಅಡಿಪಾಯ ಹಾಕಬೇಕಿತ್ತು. ಭಾರತದಷ್ಟು ದೊಡ್ಡ ಗಾತ್ರದ ದೇಶದಲ್ಲಿ ಇದು ಸುಲಭವಾಗಿರಲಿಲ್ಲ" - ನರೇಂದ್ರ ಮೋದಿ, ಪ್ರಧಾನಿ

ಡಿಜಿಟಲೀಕರಣಕ್ಕೆ ಒತ್ತು
"Rupay ಮತ್ತು BHIM ಗಳಿಂದ ಭಾರತ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತುನೀಡುವುದಕ್ಕೆ ಆರಂಭಿಸಿತು. ಭಾರತದ 128 ಬ್ಯಾಂಕುಗಳು ಯುಪಿಐ ಜೊತೆ ಸಂಪರ್ಕ ಹೊಂದಿವೆ. ಹೊಸ ತಂತ್ರಜ್ಞಾನದ ಯುಗದಲ್ಲಿ ಜನಸಾಮಾನ್ಯನೂ ನಗದು ರಹಿತ ವ್ಯವಹಾರ ಮಾಡಲು, ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳಲು ಆರಂಭಿಸಿದ್ದು ಸ್ತುತ್ಯಾರ್ಹ" -ನರೇಂದ್ರ ಮೋದಿ, ಪ್ರಧಾನಿ

ಭಾರತಕ್ಕೆ ಸ್ವಾಗತ!
"ಎಲ್ಲಾ ಫಿಂಟೆಕ್ ಕಂಪನಿಗಳು ಮತ್ತು ಸ್ಟಾರ್ಟಪ್ ಗಳಿಗೆ ಭಾರತ ಅತ್ಯತ್ತಮ ನೆಲೆಯಾಗಬಲ್ಲದು ಎಂದು ನಾನು ಹೇಳಬಲ್ಲೆ. ಅಸಾಧಾರಣ ಆವಿಷ್ಕಾರಗಳು ಸಾಮಾನ್ಯ ಜನರ ಬದುಕನ್ನು ಬದಲಿಸಿದ ಉದಾಹರಣೆಗಳು ನಮಗೆ ಸ್ಫೂರ್ತಿ ನೀಡಿವೆ. ಆದರೆ ಇನ್ನೂ ಸಾಧಿಸಬೇಕಾದ್ದು ಬಹಳವಿದೆ. ನಮ್ಮ ಗಮನ ಏನಿದ್ದರೂ ಹಿಂದುಳಿದ ಮತ್ತು ದುರ್ಬಲ ವರ್ಗದವರ ಪರವಾಗಿ"-ನರೇಂದ್ರ ಮೋದಿ, ಪ್ರಧಾನಿ












Click it and Unblock the Notifications