ಅಡಿಕೆಗೆ ಎಲೆಚುಕ್ಕೆ ರೋಗ, ರೈತರಿಗೆ ಆತಂಕ ಬೇಡ; ಆರಗ ಜ್ಞಾನೇಂದ್ರ
ಶಿವಮೊಗ್ಗ, ಅಕ್ಟೋಬರ್ 05; "ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕಿನ ಆಯ್ದ ಕೆಲವು ಭಾಗಗಳಲ್ಲಿನ ತೋಟಗಳಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕೆ ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ" ಎಂದು ಗೃಹ ಸಚಿವ ಮತ್ತು ರಾಜ್ಯ ಅಡಿಕೆ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಆರಗ ಜ್ಞಾನೇಂದ್ರ ಭರವಸೆ ನೀಡಿದರು.
ತೀರ್ಥಹಳ್ಳಿಯ ನಾಲೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ತೋಟಗಳಿಗೆ ತೋಟಗಾರಿಕೆ ಬೆಳೆಗಾರರು, ಕೃಷಿ ಸಂಶೋಧಕರು, ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.
ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗ; ಹತೋಟಿ ಕ್ರಮಗಳ ವಿವರಗಳು
"ಎಲೆಚುಕ್ಕೆ ರೋಗದಿಂದ ಬಾದಿತರಾಗಿರುವ ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಅವ್ಯಾಹತವಾಗಿ ಬೀಳುತ್ತಿರುವ ಮಳೆಯಿಂದಾಗಿ ಸಕಾಲದಲ್ಲಿ ಈ ರೋಗದ ನಿಯಂತ್ರಣಕ್ಕೆ ಔಷಧ ಸಿಂಪರಣೆ ಸಾಧ್ಯವಾಗುತ್ತಿಲ್ಲ ಆದ್ದರಿಂದ ರೋಗ ಹತೋಟಿಗೆ ಬರುತ್ತಿಲ್ಲವೆಂದು ತಜ್ಞರು ತಿಳಿಸಿದ್ದಾರೆ. ಮಳೆ ಕಡಿಮೆಯಾಗುತ್ತಿದ್ದಂತೆ ಹಾಗೂ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬಿಸಿಲು ಬಿದ್ದಲ್ಲಿ ಸಹಜವಾಗಿ ಈ ರೋಗ ನಿಯಂತ್ರಣಕ್ಕೆ ಬರಲಿದೆ" ಎಂದರು.
ಪುತ್ತೂರು; ಅಡಿಕೆಯಿಂದ ತಯಾರಾಯ್ತು ಘಮ ಘಮ ಹೋಳಿಗೆ!
"ಈ ರೋಗದ ನಿಯಂತ್ರಣಕ್ಕೆ ಬೇಕಾಗಿರುವ ಔಷಧ ಹೆಚ್ಚಿನ ಬೆಲೆಯದ್ದಾಗಿದೆ. ಮಾರುಕಟ್ಟೆಯಲ್ಲಿ ಈ ಔಷಧ ಸ್ಪರ್ಧಾತ್ಮಕ ಬೆಲೆಗೆ ದೊರಕುವಂತೆ ಯತ್ನಿಸಲಾಗುವುದು. ಅಲ್ಲದೇ ಔಷಧ ಖರೀದಿಗೆ ಸರ್ಕಾರದಿಂದ ಸಹಾಯಧನ ನೀಡುವ ಆದೇಶ ಹೊರಬೀಳುವ ನಿರೀಕ್ಷೆ ಇದೆ" ಎಂದು ಹೇಳಿದರು.
ಯುಪಿಎಸ್ಸಿ: ಅಡಿಕೆ ತೋಟದಲ್ಲಿ ಕೂಲಿ ಕಾರ್ಮಿಕರ ಪುತ್ರನ ಯಶೋಗಾಥೆ
"ಔಷಧ ಸಿಂಪರಣೆಗೆ ಸಕಾಲದಲ್ಲಿ ಕೊನೆಗಾರರು ಸಿಗದಿರುವುದರಿಂದ ಇತ್ತೀಚೆಗೆ ಸಂಶೋಧಿಸಿರುವ ಹಗುರವಾದ ದೋಟಿಯನ್ನು ಖರೀದಿಸಲು ಸರ್ಕಾರ ಸಹಾಯಧನ ನೀಡುವಂತೆ ಅಥವಾ ಕೃಷಿ ಇಲಾಖೆಯಿಂದಲೇ ಪೂರೈಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗುವುದು" ಎಂದು ಸಚಿವರು ಭರವಸೆ ನೀಡಿದರು.
"ಔಷಧಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಮಾರಾಟಗಾರರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಔಷಧ ಮಾರಾಟ ಮಾಡುವವರ ಔಷಧ ಅಂಗಡಿಗಳಿಗೆ ದಿಡೀರ್ ದಾಳಿ ನಡೆಸಿ, ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು" ಎಂದು ಸಚಿವರು ಎಚ್ಚರಿಕೆ ನೀಡಿದರು.
"ತಜ್ಞ ವಿಜ್ಞಾನಿಗಳು ಸೋಂಕು ಬಾದಿತ ಕೃಷಿಕರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸಲಹೆ ನೀಡಲಿದ್ದಾರೆ. ಅಲ್ಲದೆ ಮರ ಹತ್ತಿ ಔಷಧ ಸಿಂಪಡಿಸುವ ಬದಲಾಗಿ ಬುಡಕ್ಕೆ ಸಿಂಪಡಿಸುವುದರಿಂದ ರೋಗ ನಿಯಂತ್ರಿಸುವ ವಿಧಾನಗಳ ಬಗ್ಗೆ ಸಂಶೋಧನೆ ನಡೆಸುವಂತೆ ಸೂಚಿಸಲಾಗಿದೆ"ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಡಾ. ಹೇಮ್ಲಾನಾಯ್ಕ್, ಡಾ. ಗಂಗಾಧರನಾಯ್ಕ್, ಡಾ. ನಾಗರಾಜ್ ಅಡಿವೆಪ್ಪರ್, ಡಾ. ದೇಶ್ಮುಖ್, ಡಾ. ರವಿಕುಮಾರ್, ಡಾ. ನಿರಂಜನಕೇಶವಾಪುರ್, ಡಾ. ರಾಮಚಂದ್ರ ಮಡಿವಾಳರ್ ಮಂತಾದವರು ಸಚಿವರ ಜೊತೆಗಿದ್ದರು.
ರೋಗದ ಲಕ್ಷಣಗಳು; ಶಿವಮೊಗ್ಗ ಮತ್ತು ಇತರ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯುವ ರೈತರು ಎಲೆ ಚುಕ್ಕೆ ರೋಗದ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೋಗದಿಂದಾಗಿ ಇಳುವರಿ ಕುಂಠಿತವಾಗಲಿದ್ದು, ರೈತರು ಆತಂಕಗೊಂಡಿದ್ದಾರೆ.
ಎಲೆ ಚುಕ್ಕೆ ರೋಗ ಬಾಧಿತ ಮರಗಳ ಕೆಳಗಿನ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತದೆ. ನಂತರ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಹೆಡೆಗಳು ಜೋತು ಬಿದ್ದು ಮರ ಶಕ್ತಿಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ.
ಎಲೆಚುಕ್ಕೆ ರೋಗವು ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್ ಮತ್ತು ಫಿಲ್ಲೊಸ್ಟಿಕ್ಟ ಅರಕೆ ಎಂಬ ಎರಡು ಶಿಲೀಂಧ್ರಗಳು ಕಾರಣವಾಗಿವೆ. ಶಿಲೀಂಧ್ರವು ಬಿದ್ದ ಗರಿಗಳಲ್ಲಿ ವಾಸಿಸುತ್ತದೆ. ಮಳೆಹನಿಗಳು ಚಿಮ್ಮುವುವಿಕೆಯಿಂದ ಶಿಲೀಂಧ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ.
ಕೆರೆ ಒತ್ತುವರಿ ತೆರವು; "ಕೆರೆಗಳ ಒತ್ತುವರಿ ತೆರವುಗೊಳಿಸಲು ಹೈಕೋರ್ಟ್ ನಿರ್ದೇಶನದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಒತ್ತುವರಿದಾರರನ್ನು ತೆರವುಗೊಳಿಸಲು ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಬೆಳೆದ ಬೆಳೆ ಕಟಾವು ಮಾಡಿಕೊಳ್ಳುವವರೆಗೆ ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ" ಎಂದು ಆರಗ ಜ್ಞಾನೇಂದ್ರ ಹೇಳಿದರು.