BS Yediyurappa: ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲಿಸಲು ಅಖಾಡಕ್ಕಿಳಿದ ಯಡಿಯೂರಪ್ಪ!
ಶಿವಮೊಗ್ಗ, ಏಪ್ರಿಲ್ 24; ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಕುತೂಹಲ ಮೂಡಿಸಿರುವ ಕ್ಷೇತ್ರ ಶಿವಮೊಗ್ಗ ನಗರ. ಹಾಲಿ ಬಿಜೆಪಿ ಶಾಸಕ ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದರು. ಟಿಕೆಟ್ ಆಕಾಂಕ್ಷಿಯಾಗಿದ್ದ ಆಯನೂರು ಮಂಜುನಾಥ್ ಜೆಡಿಎಸ್ ಸೇರಿ ಕಣಕ್ಕಿಳಿದರು. ಕಾಂಗ್ರೆಸ್ನಲ್ಲೂ ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ಗೆ ಟಿಕೆಟ್ 'ಕೈ' ತಪ್ಪಿದೆ.
ಈ ಬಾರಿಯ ಚುನಾವಣೆಗೆ ಶಿವಮೊಗ್ಗ ನಗರದಲ್ಲಿ ಬಿಜೆಪಿಯಿಂದ ಎಸ್. ಎನ್. ಚೆನ್ನಬಸವಪ್ಪ ಅಭ್ಯರ್ಥಿ. ಕಾಂಗ್ರೆಸ್ನಿಂದ ಹೆಚ್. ಸಿ. ಯೋಗೇಶ್ ಮತ್ತು ಜೆಡಿಎಸ್ನಿಂದ ಆಯನೂರು ಮಂಜುನಾಥ್ ಅಭ್ಯರ್ಥಿಗಳು. ಆಯನೂರು ಮಂಜುನಾಥ್, ಕೆ. ಬಿ. ಪ್ರಸನ್ನ ಕುಮಾರ್ ಜೆಡಿಎಸ್ ಪಕ್ಷಕ್ಕೆ ಸೇರಿದ್ದು, ಪಕ್ಷ ನಗರದಲ್ಲಿ ಬಲಿಷ್ಠವಾಗಿದೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಶಿವಮೊಗ್ಗದಲ್ಲಿದ್ದಾರೆ. ಶಿವಮೊಗ್ಗ ನಗರವನ್ನು ಬಿಜೆಪಿ ಭದ್ರಕೋಟೆಯಾಗಿ ಉಳಿಸಲು ತಂತ್ರವನ್ನು ರೂಪಿಸಿದ್ದಾರೆ. ಬೆಳಗ್ಗೆ ಯಡಿಯೂರಪ್ಪ ಶಿವಮೊಗ್ಗ ನಗರದ ಚುನಾವಣೆ ಬಗ್ಗೆ ಈಶ್ವರಪ್ಪ, ಅಭ್ಯರ್ಥಿ ಚೆನ್ನಬಸವಪ್ಪ, ಸಂಸದ ಬಿ. ವೈ. ರಾಘವೇಂದ್ರ ಮತ್ತು ನಗರದ ಪ್ರಮುಖರ ಸಭೆಯನ್ನು ನಡೆಸಿದರು. ಚುನಾವಣಾ ಪ್ರಚಾರ ತಂತ್ರ, ಗೆಲುವಿಗೆ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ಯಡಿಯೂರಪ್ಪ; ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪಗೆ ಬೆಂಬಲ ನೀಡುವಂತೆ ಕೋರಿ ಆಯೋಜನೆ ಮಾಡಲಾಗಿದ್ದ ವೀರಶೈವ-ಲಿಂಗಾಯತ ಸಮುದಾಯದ 'ಸ್ನೇಹ ಮಿಲನ' ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಹಾಗೂ ಕೆ. ಎಸ್. ಈಶ್ವರಪ್ಪ ಪಾಲ್ಗೊಂಡರು. ವಿಧಾನ ಪರಿಷತ್ ಸದಸ್ಯ ರುದ್ರೇಗೌಡ , ಧನಂಜಯ ಸರ್ಜಿ, ಜ್ಯೋತಿಪ್ರಕಾಶ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಶಿವಮೊಗ್ಗದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರು ಬಿ . ಎಸ್. ಯಡಿಯೂರಪ್ಪ, ಕೆ. ಎಸ್. ಈಶ್ವರಪ್ಪ. ಆದರೆ ಇಬ್ಬರೂ ನಾಯಕರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು ಈ ಬಾರಿಯ ಚುನಾವಣೆಯ ಮೇಲೆ ಪ್ರಭಾವ ಬೀರಬಾರದು ಎಂಬುದು ಹಿರಿಯ ನಾಯಕರ ಕಾಳಜಿ. ಆದ್ದರಿಂದ ಪಕ್ಷದ ಅಭ್ಯರ್ಥಿ ಗೆಲುವಿಗೆ ಬೇಕಾದ ತಂತ್ರಗಳನ್ನು ಉಭಯ ನಾಯಕರು ರೂಪಿಸಿದ್ದಾರೆ.
ಜೆಡಿಎಸ್ ಪ್ರಬಲವಾಗುತ್ತಿದೆ; ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಆಯನೂರು ಮಂಜುನಾಥ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೆ. ಎಸ್. ಈಶ್ವರಪ್ಪಗೆ ಟಿಕೆಟ್ ನೀಡದಿದ್ದರೆ ನನಗೆ ನೀಡಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ ಬಿಜೆಪಿ ಕಡೆಗಳಿಗೆಯ ತನಕ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಗುಟ್ಟು ಬಿಟ್ಟುಕೊಡಲಿಲ್ಲ. ಆಯನೂರು ಮಂಜುನಾಥ್ಗೆ ಟಿಕೆಟ್ ಸಿಗಲಿಲ್ಲ. ಮತ್ತೊಂದು ಕಡೆ ಈಶ್ವರಪ್ಪ ಪುತ್ರ ಕೆ. ಈ. ಕಾಂತೇಶ್ಗೆ ಸಹ ಟಿಕೆಟ್ ಸಿಗಲಿಲ್ಲ.
ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಯನೂರು ಮಂಜುನಾಥ್ ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಾಗ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು, ಶಿವಮೊಗ್ಗ ನಗರದ ಜೆಡಿಎಸ್ನ ಅಭ್ಯರ್ಥಿಯಾದರು. ಮತ್ತೊಂದು ಕಡೆ ಕಾಂಗ್ರೆಸ್ ಟಿಕೆಟ್ ಸಹ ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಕೈ ತಪ್ಪಿತು, ಅವರು ಸಹ ಜೆಡಿಎಸ್ ಸೇರಿದರು.
ಆಯನೂರು ಮಂಜುನಾಥ್, ಕೆ. ಬಿ. ಪ್ರಸನ್ನ ಕುಮಾರ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಒಂದೇ ಪಕ್ಷದಲ್ಲಿ ಇರುವುದಿಂದ ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಶಿವಮೊಗ್ಗ ನಗರ ಸೇರಿ 3 ಕಡೆ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಪಕ್ಷದ ನಾಯಕರು ಇದ್ದಾರೆ. 2013ರಲ್ಲಿ ಭದ್ರಾವತಿ, ಸೊರಬ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಜೆಡಿಎಸ್ ಪ್ರಬಲವಾಗುತ್ತಿದ್ದಂತೆಯೇ ಯಡಿಯೂರಪ್ಪ ಅಖಾಡಕ್ಕೆ ಇಳಿದಿದ್ದಾರೆ.












Click it and Unblock the Notifications