ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮಹಾದ್ವಾರದ ಈ ಬಾರಿಯ ವಿಶೇಷತೆ ಏನು?
ಶಿವಮೊಗ್ಗ, ಸೆಪ್ಟೆಂಬರ್, 06: ಹಿಂದೂ ಮಹಾಸಭಾ ಗಣಪತಿಯ ಉತ್ಸವದ ಅಂಗವಾಗಿ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಮಹಾದ್ವಾರ ನಿರ್ಮಾಣ ಕಾರ್ಯ ಆರಂಭವಾಗಿದೆ. ಮಹಾದ್ವಾರ ವಿನ್ಯಾಸ ಕುರಿತು ಈವರೆಗೂ ಇದ್ದ ಕುತೂಹಲಕ್ಕೆ ತೆರೆಬೀಳಲು ಕ್ಷಣಗಣನೆ ಆರಂಭವಾಗಿದೆ.
ಓತಿಘಟ್ಟ ಸಮೀಪ ಜೀವನ್ ಕಲಾ ಸನ್ನಿಧಿಯಲ್ಲಿ ನಿರ್ಮಾಣ ಆಗಿದ್ದ ಕಲಾಕೃತಿಗಳನ್ನು ಗಾಂಧಿ ಬಜಾರ್ಗೆ ತರಲಾಗಿದೆ. ಎರಡು ದಿನ ಈ ಕಲಾಕೃತಿಗಳ ಜೋಡಣೆ ಕಾರ್ಯ ನಡೆಯಲಿದೆ. ಜೀವನ್ ನೇತೃತ್ವದ ಕಲಾವಿದರ ತಂಡದವರು ಮಹಾದ್ವಾರವನ್ನು ನಿರ್ಮಾಣ ಮಾಡಲಿದ್ದಾರೆ. 2018ರಲ್ಲಿ ರಾಮ ಮಂದಿರ, 2019ರಲ್ಲಿ ಸಿಂಹಾಸನರೂಢ ಛತ್ರಪತಿ ಶಿವಾಜಿ ಮಹಾರಾಜ್ ರೀತಿಯಲ್ಲಿ ರೂಪಿಸಿದ ಮಹದ್ವಾರ ಗಮನ ಸೆಳೆದಿದ್ದವು. ಮಹಾದ್ವಾರ ನಿರ್ಮಾಣ ಕುರಿತು ತೀವ್ರ ಕುತೂಹಲ ಗರಿಗೆದರಿತ್ತು. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಸನ್ನಿವೇಶವನ್ನು ಈ ಬಾರಿ ರೂಪಿಸಲಾಗಿದೆ.
ಬಿಬಿಎಂಪಿ: ಒಂದೇ ದಿನ 97,477 ಗಣೇಶ ಮೂರ್ತಿ ವಿಸರ್ಜನೆ
ಯುದ್ಧ ಭೂಮಿಯಲ್ಲಿ ರಥ ಚಲಾಯಿಸುತ್ತಿದ್ದ ಶ್ರೀ ಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡುತ್ತಾರೆ. ಈ ಯೋಜನೆಗಾಗಿ ಕಲಾವಿದರು ಒಂದು ರಥ, ನಾಲ್ಕು ಕುದುರೆಗಳ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ಇನ್ನು ಶ್ರೀಕೃಷ್ಣ ಅರ್ಜನಿಗೆ ದಿಕ್ಕು ತೋರಿಸುತ್ತಿರುವಂತೆ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಅರ್ಜುನನು ಶ್ರೀ ಕೃಷ್ಣ ತೋರಿದ ದಿಕ್ಕಿಗೆ ಬಾಣ ಹೂಡಲು ಸಿದ್ಧವಾಗಿರುವಂತೆ ಪ್ರತಿಮೆ ಸಿದ್ಧಪಡಿಸಲಾಗಿದೆ. ಮುಂಚೆ ಕಲಾಕೃತಿಗಳನ್ನು ನಿರ್ಮಿಸಿ, ಅದಕ್ಕೆ ಲೈಟ್ ವ್ಯವಸ್ಥೆ ಮಾಡಿ, ಮಹಾದ್ವಾರವನ್ನು ಕಂಗೊಳಿಸುವಂತೆ ನಿರ್ಮಾಣ ಮಾಡುತ್ತಿದ್ದರು. ಆದರೆ, ಈ ಬಾರಿ ಆಟೊಮೇಷನ್ ಮತ್ತು ಲೇಸರ್ ಲೈಟ್ ಬಳಕೆಗೆ ಯೋಜಿಸಲಾಗಿದೆ.
ಕಲಾವಿದ ಜೀವನ್ ಅವರ ಯೋಜನೆಗಳು
ರಥದ ಚಕ್ರಗಳು ತಿರುಗುವಂತೆ ಮಾಡಲು ಯೋಜಿಸಲಾಗಿದೆ. ಇದಕ್ಕೆ ಮೋಟರ್ ಅಳವಡಿಸ ಬೇಕಾಗುತ್ತದೆ. ಅರ್ಜುನನ ಬಾಣದ ತುದಿಯಿಂದ ಲೇಸರ್ ಲೈಟ್ ಎಫೆಕ್ಟ್ ನೀಡಲು ಯೋಚಿಸಲಾಗಿದೆ. ಕಲಾಕೃತಿಗಳನ್ನು ಮಹಾದ್ವಾರದ ಮೇಲೆ ಜೋಡಿಸುವ ಸಂದರ್ಭ ಇನ್ನಷ್ಟು ಹೊಸ ಕಲ್ಪನೆಗಳು ಬಂದರೆ ಅವುಗಳನ್ನು ಕೂಡ ಅಳವಡಿಸಿಕೊಳ್ಳುತ್ತೇವೆ ಎಂದು ಕಲಾವಿದ ಜೀವನ್ ತಿಳಿಸಿದರು.
23 ಕಲಾವಿದರಿಂದ ಮಹಾದ್ವಾರ ನಿರ್ಮಾಣ
ಮಹಾದ್ವಾರ ನಿರ್ಮಾಣ ಕಾರ್ಯವು ಓತಿಘಟ್ಟ ಬಳಿ ಜೀವನ್ ಕಲಾ ಸನ್ನಿಧಿಯಲ್ಲಿ ಸಿದ್ಧಪಡಿಸಲಾಯಿತು. ಒಂದು ತಿಂಗಳು 23 ಕಲಾವಿದರು ಹಗಲು, ರಾತ್ರಿ ಕೆಲಸ ಮಾಡಿ ಮಹಾದ್ವಾರವನ್ನು ಸಿದ್ಧಪಡಿಸಿದ್ದಾರೆ. ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಸಮಯ ಕಡಿಮೆ ಇತ್ತು. 6 ದಿನಗಳಲ್ಲಿಇಡೀ ಕಾನ್ಸೆಪ್ಟ್ ಸಿದ್ಧಪಡಿಸಿದ್ದೆವು. ಆದರೆ ಈ ಬಾರಿಯ ಮಹಾದ್ವಾರವನ್ನು ಬೇಗ ಸಿದ್ಧವಾಯಿತು. ಇದಕ್ಕಾಗಿ 200ಕ್ಕೂ ಹೆಚ್ಚು ಫೋಟೋಗಳನ್ನು ಗಮನಿಸಿದ್ದೇವೆ. ಹತ್ತಾರು ಬಗೆಯ ರಥದ ಮಾದರಿಗಳನ್ನು ಅಧ್ಯಯನ ಮಾಡಿದ್ದೇವೆ. ಕುದುರೆಗಳ ಕುರಿತು ಸೂಕ್ಷ್ಮವಾಗಿ ತಿಳಿದುಕೊಂಡು ಅವುಗಳ ನರಗಳು ಕೂಡ ಸ್ಪಷ್ಟವಾಗಿ ಗೋಚರಿಸುವಂತೆ ಕಲಾಕೃತಿ ಸಿದ್ಧಪಡಿಸಿದ್ದೇವೆ ಎಂದು ಕಲಾವಿದ ಜೀವನ್ ತಿಳಿಸಿದ್ದಾರೆ.
ಖಡ್ಗದ ಮೇಲೆ ಸ್ಲೋಗನ್ ಕೆತ್ತನೆ
ಫೈಬರ್ ಬಳಸಿ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 500 ಕೆ.ಜಿಯಷ್ಟು ಕಬ್ಬಿಣ, 450 ಕೆ.ಜಿ ರೆಗ್ಸಿನ್ ಲಿಕ್ವಿಡ್ ಬಳಕೆ ಮಾಡಿದ್ದಾರೆ. ಕೆರೆ ಮಣ್ಣಿನ ಬದಲಿಗೆ ಮುಂಬೈನಿಂದ ಜೇಡಿಮಣ್ಣು ತರಿಸಲಾಗಿತ್ತು. ಮಹಾದ್ವಾರದ ಮತ್ತೊಂದು ಆಕರ್ಷಣೆ ಅಂದರೆ ಬೃಹತ್ ಖಡ್ಗ, ಈ ಖಡ್ಗದ ಮೇಲೆ ರಥ ಇರುವಂತೆ ಚಿತ್ರಿಸಲಾಗಿದೆ. ಖಡ್ಗದ ಮೇಲೆ ಸ್ಲೋಗನ್ ಬರೆಸಲಾಗುತ್ತಿದೆ. ಇದನ್ನು ಸ್ಥಳದಲ್ಲಿಯೇ ನೋಡಬೇಕು ಎಂದು ಕುತೂಹಲವನ್ನು ಹುಟ್ಟಿಸಿದ್ದಾರೆ ಕಲಾವಿದ ಜೀವನ್. ಮತ್ತೊಂದೆಡೆ ಆಂಜನೇಯ ಸ್ವಾಮಿ, ಛತ್ರಪತಿ ಶಿವಾಜಿಯ ಮೂರ್ತಿಗಳು ಸೇರಿದಂತೆ ವಿವಿಧ ಪ್ರತಿಮೆಗಳನ್ನು ಸಿದ್ಧಪಡಿಸಲಾಗಿದೆ. ಗಣಪತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿವಿಧೆಡೆ ಇವುಗಳನ್ನು ಇರಿಸಲು ಅಲಂಕಾರ ಸಮಿತಿ ಯೋಜಿಸಿದೆ.
ಸಿನಿಮಾಗಳಲ್ಲಿ ಕಲಾವಿದನ ಕರಾಮತ್ತು
ಶಿವಮೊಗ್ಗದ ಕಲಾವಿದ ಜೀವನ್ ಅವರು ವಿವಿಧ ಸಿನಿಮಾಗಳ ಕಲಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿಯನಯದ ಕೆಜಿಎಫ್ 2, ಡಾಲಿ ಧನಂಜಯ ಅಭಿನಯದ ಮಾನ್ಸೂನ್ ರಾಗ ಸಿನಿಮಾದಲ್ಲಿ 17 ಅಡಿಯ ಗಣಪತಿಯ ಮೂರ್ತಿಯನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಅಷ್ಟೆ ಅಲ್ಲ ಕುಂದಾಪುರ, ಗೋಕರ್ಣದ ಓಂ ಬೀಚ್ನಲ್ಲಿರುವ 15 ಅಡಿ ಎತ್ತರದ ಆಂಜನೇಯ ಸ್ವಾಮಿ ಮೂರ್ತಿಯನ್ನು ತಯಾರಿಸಿದ್ದಾರೆ. ಹಳೆಬೀಡು ಮಠಕ್ಕೆ 29 ಅಡಿ ಎತ್ತರದ ಶಿವನ ಮುಖ, ಬಳ್ಳಾರಿಯಲ್ಲಿ ಪ್ರತಿಷ್ಠಾಪಿಸಲು ಯೋಜಿಸಲಾಗಿರುವ ನಟ ಪುನೀತ್ ರಾಜ್ಕುಮಾರ್ ಅವರ ಪ್ರತಿಮೆಯನ್ನು ನಿರ್ಮಿಸಲಿದ್ದಾರೆ.
ಶಿವಮೊಗ್ಗದಲ್ಲಿ ಈ ಹಿಂದೆ ಅಯೋಧ್ಯೆ ರಾಮ ಮಂದಿರ ಮಾದರಿಯ ಪ್ರವೇಶ ದ್ವಾರವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಶಿವಾಜಿ ಪ್ರತಿಮೆಯನ್ನು ಕಲಾವಿದ ಜೀವನ್ ಮತ್ತು ಅವರ ತಂಡ ನಿರ್ಮಿಸಿತ್ತು. ಈ ಬಾರಿ ವಿಭಿನ್ನವಾದ ಕಾನ್ಸೆಪ್ಟ್ ಸಿದ್ಧವಾಗಿದ್ದು, ಜನರ ಕುತೂಹಲವನ್ನು ಹೆಚ್ಚಿಸಿದೆ.