ಗಡಿದಾಟಿ ಬಂದರೆ ಕ್ಯಾಚ್ ಹಾಕುವುದು ಗ್ಯಾರಂಟಿ : ಆಯನೂರು ಮಂಜುನಾಥ್
ಶಿವಮೊಗ್ಗ, ಜನವರಿ 19 : "ನಾವು ಗಾಳ ಹಾಕಿ ಮೀನು ಹಿಡಿಯುತ್ತಿಲ್ಲ. ದಡಕ್ಕೆ ಬಂದ ಮೀನುಗಳನ್ನು ಹಿಡಿಯದೇ ಸುಮ್ಮನೆ ಬಿಡಲು ಸಾಧ್ಯವೇ? ನಾವು ಕೂಡ ರಾಜಕಾರಣ ಮಾಡಲೆಂದೇ ಇರೋದು" ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾರ್ಮಿಕವಾಗಿ ನುಡಿದಿದ್ದಲ್ಲದೆ, ಆಡಳಿತ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ಜಾಸ್ತಿಯಾಗಿದೆ. ಪರಸ್ಪರ ದೂಷಣೆಯಲ್ಲಿ ಪಕ್ಷದ ಮುಖಂಡರು ತೊಡಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಆಡಳಿತ ವೈಖರಿ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.
ಸರಕಾರದಲ್ಲಿ ಕೆಲಸಗಳೇ ಆಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರು ಹೇಳುತ್ತಿದ್ದಾರೆ. ಎಚ್.ಡಿ.ರೇವಣ್ಣ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆಂಬ ಮಾತುಗಳು ಕೂಡ ಕೇಳಿಬಂದಿವೆ. ಇದರಿಂದ ಬೇಸತ್ತು ಕೆಲವರು ಭಿನ್ನಮತೀಯ ಶಾಸಕರು ತಮಗೆ ಬೇಕಾದ ರೀತಿಯಲ್ಲಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಅವರೊಂದಿಗೆ ಇರುವ ಶಾಸಕರು ನಾವು ಹೇಳಿದಂತೆ ಕೇಳುತ್ತಾರೆಯೇ? ಎಂದು ಮಂಜುನಾಥ್ ಪ್ರಶ್ನಿಸಿದರು.
ಶಾಸಕರು ಗಡಿ ದಾಟಿ ಬಂದರೆ ನಾವು ಸುಮ್ಮನೆ ಕೂರುವುದಿಲ್ಲ. ನಮಗೂ ಕಬ್ಬಡ್ಡಿ ಆಟ ಗೊತ್ತು ಕ್ಯಾಚ್ ಹಾಕಿ ಹಿಡಿಯುತ್ತೇವೆ. ಅವರ ಪಕ್ಷದ ಆಂತರಿಕ ಕಲಹಕ್ಕೆ ಬಿಜೆಪಿಯಾಗಲೀ, ಯಡಿಯೂರಪ್ಪರವರಾಗಲೀ ಕಾರಣರಲ್ಲ. ನಾವು 104 ಸ್ಥಾನಗಳನ್ನು ಗೆದ್ದಿದ್ದೇವೆ. ತಾಂತ್ರಿಕವಾಗಿ ಕಾಂಗ್ರೆಸ್, ಜೆಡಿಎಸ್ ಅಧಿಕಾರದಲ್ಲಿವೆಯಾದರೂ ಅವರು ರಿಜೆಕ್ಟೆಡ್ ಗೂಡ್ಸ್ (ತಿರಸ್ಕೃತ ವಸ್ತುಗಳು) ಎಂದು ಅವರು ಟೀಕಿಸಿದರು.

ಬಿಎಸ್ವೈ ಸಿಎಂ ಹುದ್ದೆ ಆಸೆ ಪಟ್ಟರೆ ಅದು ದುರಾಸೆಯೆ?
37 ಸ್ಥಾನಗಳನ್ನು ಗೆದ್ದವರಿಗೆ ಮುಖ್ಯಮಂತ್ರಿಯಾಗುವ ಬಗ್ಗೆ ಆಸೆ ಇದೆ. 104 ಸ್ಥಾನ ಗಳಿಸಿರುವ ಬಿಜೆಪಿಯ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಾದರೆ ದುರಾಸೆ ಎಂದು ಹೇಳುತ್ತಾರೆ. ಇದು ಸರಿಯೆ? ಎಂದು ಪ್ರಶ್ನಿಸಿದರು ಆಯನೂರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಡಿಯೂರಪ್ಪ ಕುರಿತಾಗಿ ಹಗುರ ಹೇಳಿಕೆ ನೀಡುತ್ತಿದ್ದಾರೆ. ಅವರ ಮೆದುಳಿಗೂ ಬಾಯಿಗೂ ಸಂಪರ್ಕ ತಪ್ಪಿದೆ. ಆಂಗಿಕ ಭಾಷೆ ಉಚ್ಚಾರ ಒಂದಕ್ಕೊಂದು ಸಂಬಂಧವಿಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು.

ಲೋಕಾಯುಕ್ತ ಇದ್ದಿದ್ದರೆ ಸಿದ್ದುವೇ ಜೈಲಿಗೆ
ಬಿಜೆಪಿಯದ್ದು ಲಫಂಗ ರಾಜಕಾರಣ ಎಂದು ಆರೋಪಿಸುವ ಸಿದ್ದರಾಮಯ್ಯ, ಈ ಹಿಂದೆ ಜೆಡಿಎಸ್ನಲ್ಲಿ ಇದ್ದಾಗ ಯಾರು ಆಪರೇಷನ್ ಮಾಡಿ ಕಾಂಗ್ರೆಸ್ಗೆ ಕರೆದುಕೊಂಡು ಹೋದರು ಎಂದು ಹೇಳಲಿ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿದ್ದರು. ಎಸಿಬಿ ಕೈಯಲ್ಲಿದ್ದ ಕಾರಣ ಸಿದ್ದರಾಮಯ್ಯ ಮತ್ತು ಅವರ ತಂಡ ಬಚಾವಾಗಿತ್ತು. ಲೋಕಾಯುಕ್ತ ಇದ್ದಿದ್ದರೆ 10 ಬಾರಿ ಅವರು ಜೈಲಿಗೆ ಹೋಗಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಸಿದ್ದುವೇ ಲಫಂಗರ ತಂಡದ ಮುಖ್ಯಮಂತ್ರಿ
ದಿಂಬು, ಮರಳನ್ನು ತಿಂದು ತೇಗಿದ್ದ ಸಿದ್ದರಾಮಯ್ಯ ಮತ್ತವರ ತಂಡ, ಆರೋಗ್ಯ ಇಲಾಖೆಯನ್ನು ಲೂಟಿ ಮಾಡಿದೆ. ಸಿದ್ದರಾಮಯ್ಯ ಅವರೇ ಲಫಂಗ ರಾಜಕಾರಣಿಗಳ ತಂಡದ ಮುಖ್ಯಮಂತ್ರಿಯಾಗಿದ್ದರು. ಅವರೇ ಮೊದಲು ಕಾಂಗ್ರೆಸ್ಸಿನಿಂದ ಆಪರೇಷನ್ ಗೆ ಒಳಗಾಗಿದ್ದರು. ಈ ಹಿಂದೆ ಗೌಡರನ್ನು ಮನೆ ದೇವರೆಂದು ಹೇಳುತ್ತಿದ್ದ ಸಿದ್ದರಾಮಯ್ಯ ನಂತರ ಅದೇ ದೇವೇಗೌಡರನ್ನು ಹೀನಾಮಾನ ಬೈದಾಡಿದರು ಎಂದು ಆಯನೂರು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರು.

ಮಧುವನ್ನು ಮತದಾರರು ತಿರಸ್ಕರಿಸಿದ್ದಾರೆ
ಯಡಿಯೂರಪ್ಪ ಅವರನ್ನು ಥರ್ಡ್ ಕ್ಲಾಸ್ ಎಂದೆಲ್ಲ ಮಾಜಿ ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ. ಅದಕ್ಕಾಗಿಯೇ ಸೊರಬದ ಜನತೆ ಅವರನ್ನು ತಿರಸ್ಕರಿಸಿದ್ದಾರೆ. ಬಂಗಾರಪ್ಪ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು ಇಬ್ಬರಲ್ಲಿ ಯಾರೂ ಏನು ಮಾಡಿದ್ದಾರೆ ಎಂಬುದನ್ನು ತುಲನೆ ಮಾಡಿ ಮಧು ಬಂಗಾರಪ್ಪ ನೋಡಲಿ. ಬಿಎಸ್ ವೈ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗೆ ಇಲ್ಲ. ಯಡಿಯೂರಪ್ಪನವರ ಹಿರಿತನ ಗಮನಿಸಬೇಕು. ಮಧು ಬಂಗಾರಪ್ಪ ಸೋಲಿನ ಹತಾಶೆಯಿಂದ ಮಾತನಾಡಬಾರದು ಎಂದರು.

ಬೇರೆಯವರ ಮನೆ ಬಾಗಿಲು ಕಾಯುವ ಹರಿಪ್ರಸಾದ್
ಹಿರಿಯ ರಾಜಕಾರಣಿ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ಆರೋಗ್ಯದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೊರ ದೇಶಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾವೇನಾದರೂ ಟೀಕಿಸುತ್ತೇವೆಯೆ? ಜನರ ಮಧ್ಯೆ ಬೆಳೆದು ಬಂದಿದ್ದರೆ ಹರಿಪ್ರಸಾದ್ ಗೆ ಜನರ ಭಾಷೆ ಅರ್ಥವಾಗುತ್ತಿತ್ತು. ಅಧಿಕಾರಕ್ಕಾಗಿ ಬೇರೆಯವರ ಮನೆ ಬಾಗಿಲು ಕಾಯುವ ಅಭ್ಯಾಸವಿರುವ ಅವರಿಗೆ ಇದೆಲ್ಲ ಹೇಗೆ ಅರ್ಥವಾದೀತು ಎಂದು ಕೇಳಿದರು.

ಹಾವು ಮುಂಗುಸಿಯಂತಿದ್ದ ಎಚ್ಡಿಕೆ, ಡಿಕೆಶಿ
ಹಾವು ಮುಂಗುಸಿಯಂತಿದ್ದ ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಒಂದಾಗಿದ್ದು, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ನಲ್ಲಿ ಪ್ರಾಮುಖ್ಯತೆ ಕಡಿಮೆಯಾಗಿ ಮೂಲೆ ಗುಂಪಾಗುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಹತಾಶೆಯಿಂದ ತಮ್ಮ ಶಿಷ್ಯರನ್ನು ಛೂ ಬಿಡುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ಎಚ್.ಸಿ. ಬಸವರಾಜಪ್ಪ, ಕೆ.ಜಿ. ಕುಮಾರಸ್ವಾಮಿ, ಅನಿತಾ ರವಿಶಂಕರ್, ಮಧುಸೂದನ್, ಹಿರಣ್ಣಯ್ಯ, ಅಶೋಕ್ ಪೈ ಸೇರಿದಂತೆ ಮೊದಲಾದವರಿದ್ದರು.












Click it and Unblock the Notifications