ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ಸಚಿವ ಈಶ್ವರಪ್ಪ ಮಹತ್ವದ ಹೇಳಿಕೆ
ಶಿವಮೊಗ್ಗ, ಮೇ 27: ಇಷ್ಟೊತ್ತಿಗೆ ಮುಗಿದಿರಬೇಕಿದ್ದ ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ಮೇಲೆ ಕೊರೊನಾ ಲಾಕ್ಡೌನ್ ಕರಿನೆರಳು ಬಿದ್ದಿದೆ.
ಪಂಚಾಯಿತಿ ಚುನಾವಣೆ ಬಗ್ಗೆ ಬುಧವಾರ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.
''ಚುನಾವಣಾ ಆಯೋಗ ಒಪ್ಪಿದರೇ, ನಾವು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಸಿದ್ದರಿದ್ದೇವೆ'' ಎಂದು ಹೇಳಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ಕೊಟ್ಟಿದ್ದಾರೆ.

''ಚುನಾವಣೆ ನಡೆಸುವ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳ ಬಳಿ ಚುನಾವಣಾ ಆಯೋಗ ವರದಿ ಕೇಳಿದೆ. ವರದಿಗಳನ್ನು ನೋಡಿ, ಚುನಾವಣಾ ಆಯೋಗ ಚುನಾವಣೆ ನಡೆಸಿ ಎಂದರೆ ನಡೆಸಲು ನಮ್ಮದೇನು ತಕರಾರಿಲ್ಲ. 6 ಸಾವಿರ ಗ್ರಾಮ ಪಂಚಾಯಿತಿಗಳ ಅಧಿಕಾರವಧಿ ಕೊನೆಗೊಂಡಿದೆ'' ಎಂದು ಹೇಳಿದ್ದಾರೆ.
''ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾವೇನು ರಾಜಕೀಯ ಮಾಡುತ್ತಿಲ್ಲ. ಈ ಹಿಂದೆ ಕಾಂಗ್ರೆಸ್ನವರೇ ನಗರಸಭೆಗಳನ್ನು ವಿಸರ್ಜಿಸಿ ತಮ್ಮ ಪಕ್ಷದವರಿಗೆ ಅಧಿಕಾರ ನಡೆಸಲು ಬಿಟ್ಟು ಕೊಟ್ಟಿದ್ದರು. ನಾವು ಕಾನೂನು ಏನು ಹೇಳುತ್ತೋ ಅದನ್ನು ಮಾಡುತ್ತೇವೆ'' ಎಂದು ಹೇಳಿದ್ದಾರೆ ಈಶ್ವರಪ್ಪ.












Click it and Unblock the Notifications