ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ಸಚಿವ ಈಶ್ವರಪ್ಪ ಮಹತ್ವದ ಹೇಳಿಕೆ
ಶಿವಮೊಗ್ಗ, ಮೇ 27: ಇಷ್ಟೊತ್ತಿಗೆ ಮುಗಿದಿರಬೇಕಿದ್ದ ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ಮೇಲೆ ಕೊರೊನಾ ಲಾಕ್ಡೌನ್ ಕರಿನೆರಳು ಬಿದ್ದಿದೆ.
ಪಂಚಾಯಿತಿ ಚುನಾವಣೆ ಬಗ್ಗೆ ಬುಧವಾರ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ: ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣೆ ಆಯೋಗ ಪತ್ರ!
''ಚುನಾವಣಾ ಆಯೋಗ ಒಪ್ಪಿದರೇ, ನಾವು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಸಿದ್ದರಿದ್ದೇವೆ'' ಎಂದು ಹೇಳಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ಕೊಟ್ಟಿದ್ದಾರೆ.
''ಚುನಾವಣೆ ನಡೆಸುವ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳ ಬಳಿ ಚುನಾವಣಾ ಆಯೋಗ ವರದಿ ಕೇಳಿದೆ. ವರದಿಗಳನ್ನು ನೋಡಿ, ಚುನಾವಣಾ ಆಯೋಗ ಚುನಾವಣೆ ನಡೆಸಿ ಎಂದರೆ ನಡೆಸಲು ನಮ್ಮದೇನು ತಕರಾರಿಲ್ಲ. 6 ಸಾವಿರ ಗ್ರಾಮ ಪಂಚಾಯಿತಿಗಳ ಅಧಿಕಾರವಧಿ ಕೊನೆಗೊಂಡಿದೆ'' ಎಂದು ಹೇಳಿದ್ದಾರೆ.
ಗ್ರಾ.ಪಂ. ನಾಮ ನಿರ್ದೇಶನ: ಯಡಿಯೂರಪ್ಪ, ಈಶ್ವರಪ್ಪ ಮಧ್ಯೆ ಮೂಡದ ಒಮ್ಮತ?
''ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾವೇನು ರಾಜಕೀಯ ಮಾಡುತ್ತಿಲ್ಲ. ಈ ಹಿಂದೆ ಕಾಂಗ್ರೆಸ್ನವರೇ ನಗರಸಭೆಗಳನ್ನು ವಿಸರ್ಜಿಸಿ ತಮ್ಮ ಪಕ್ಷದವರಿಗೆ ಅಧಿಕಾರ ನಡೆಸಲು ಬಿಟ್ಟು ಕೊಟ್ಟಿದ್ದರು. ನಾವು ಕಾನೂನು ಏನು ಹೇಳುತ್ತೋ ಅದನ್ನು ಮಾಡುತ್ತೇವೆ'' ಎಂದು ಹೇಳಿದ್ದಾರೆ ಈಶ್ವರಪ್ಪ.