ಮದುವೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಶಿವಮೊಗ್ಗದಲ್ಲಿ ಪಿಡಿಒ ಅಮಾನತು
ಶಿವಮೊಗ್ಗ, ಏಪ್ರಿಲ್ 27: ಕೊರೊನಾ ವೈರಸ್ 2ನೇ ಅಲೆ ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿಯಲ್ಲಿರುವ ಸಮಯದಲ್ಲಿ ಮದುವೆ ಮನೆಯಲ್ಲಿ ಹೆಚ್ಚು ಜನರು ಸೇರಿದ್ದರೂ, ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯೊಬ್ಬರನ್ನು ಅಮಾನತು ಮಾಡಿ ಶಿವಮೊಗ್ಗ ಜಿ.ಪಂ ಸಿಇಒ ಆದೇಶ ಹೊರಡಿಸಿದ್ದಾರೆ.
ನಿಯೋಜನೆ ಮೇರೆಗೆ ಶಿವಮೊಗ್ಗ ಜಿಲ್ಲೆಯ ಕುಂಚೇನಹಳ್ಳಿ ಗ್ರಾ.ಪಂ ಪಿಡಿಒ ಆಗಿದ್ದ ಎಸ್.ಕಾಂತರಾಜ ಅಮಾನತುಗೊಂಡಿದ್ದಾರೆ. ಇವರು ಮೂಲತಃ ಬಿ.ಬೀರನಹಳ್ಳಿ ಪಿಡಿಒ ಆಗಿದ್ದು, ಇವರನ್ನು ಕುಂಚೇನಹಳ್ಳಿಗೂ ನಿಯೋಜನೆ ಮಾಡಲಾಗಿತ್ತು.
ಏಪ್ರಿಲ್ 26 ರಂದು ಕುಂಚೇನಹಳ್ಳಿ ಗ್ರಾಮದಲ್ಲಿ ಎರಡು ಮದುವೆಗಳು ನಿಗದಿಯಾಗಿದ್ದವು. ಕೊರೊನಾ ನಿಯಮಾವಳಿ ಪ್ರಕಾರ ಮದುವೆಯಲ್ಲಿ 50ಕ್ಕಿಂತ ಹೆಚ್ಚು ಜನರು ಸೇರಲು ಅವಕಾಶವಿಲ್ಲ. ಆದರೆ ಕುಂಚೇನಹಳ್ಳಿಯಲ್ಲಿ ನಡೆದ ಮದುವೆಯಲ್ಲಿ 50ಕ್ಕಿಂತ ಹೆಚ್ಚಿನ ಜನರು ಸೇರಿದ್ದರು.

ಅಲ್ಲದೇ ಮಾಸ್ಕ್ ಕೂಡಾ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕೂಡಾ ಪಾಲನೆಯಾಗಿಲ್ಲ ಎನ್ನಲಾಗಿದೆ. ಇದರ ಮಾಹಿತಿ ಪಡೆದ ಶಿವಮೊಗ್ಗ ಸಿಇಒ ಎಂ.ಎಲ್ ವೈಶಾಲಿ, ಪಿಡಿಒ ಕಾಂತರಾಜ ಅವರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications