ಶಿವಮೊಗ್ಗ; ಹೊಸನಗರದಲ್ಲಿ ಗಣಿಗಾರಿಕೆಗೆ ಮರಗಳಿಗೆ ಕೊಡಲಿ
ಶಿವಮೊಗ್ಗ, ಅಕ್ಟೋಬರ್ 30 : ಮಲೆನಾಡು ಪ್ರದೇಶದಲ್ಲಿ ಮರಳು ಗಣಿಗಾರಿಕೆ ಬಳಿಕ ಭಾರಿ ಸದ್ದು ಮಾಡುತ್ತಿರುವುದು ಕಲ್ಲು ಗಣಿಗಾರಿಕೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಸ್ಥಳೀಯರು ವಿರೋಧ ಮಾಡುತ್ತಿದ್ದಾರೆ. ಆದರೆ, ಹಣ ಬಲದ ಮುಂದೆ ಜನರ ವಿರೋಧಕ್ಕೆ ಬೆಲೆಯೇ ಇಲ್ಲವಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯ ಕುಂಭತ್ತಿ ಗ್ರಾಮದ ಸರ್ವೆ ನಂಬರ್ 5ರಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಗಣಿಗಾರಿಕೆಗೆ ಅನುಮತಿ ಪಡೆದವರು ದಟ್ಟವಾಗಿ ಬೆಳೆದು ನಿಂತಿರುವ ಮರಗಳಿಗೆ ಕೊಡಲಿ ಹಾಕುತ್ತಿದ್ದಾರೆ.
ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕು. ಮರ ಕಡಿಯುವುದುನ್ನು ತಕ್ಷಣ ನಿಲ್ಲಿಸಬೇಕು ಎಂದು ಸ್ಥಳೀಯರು ಹೋರಾಟ ಆರಂಭಿಸಿದ್ದಾರೆ. ಗಣಿಗಾರಿಕೆಗೆ ಅನುಮತಿ ನೀಡಿರುವ ಪ್ರದೇಶದಲ್ಲಿ ಹಲುಸಾಗಿ ಬೆಳೆದಿರುವ ಮರಗಳಿವೆ, ಕೃಷಿ ಭೂಮಿ ಇದೆ, ಜನವಸತಿ ಪ್ರದೇಶಗಳು ಹತ್ತಿರದಲ್ಲಿವೆ.
ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡಿರುವ ಪ್ರದೇಶದಲ್ಲಿ ಈ ವರ್ಷ ಸುಮಾರು 238 ಮಿ. ಮೀ. ಮಳೆಯಾಗಿದೆ. ದಟ್ಟವಾದ ಕಾಡಿನ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದು ಹೇಗೆ? ಎಂಬುದು ಜನರ ಪ್ರಶ್ನೆ.

ಗಣಿಗಾರಿಕೆಗೆ ಷರತ್ತುಬದ್ಧ ಅನುಮತಿ
ರಾಮಚಂದ್ರಾಪುರ ಗ್ರಾಮ ಪಂಚಾಯತಿಗೆ ಸೇರಿದ ಈ ಪ್ರದೇಶದಲ್ಲಿ ನಾರಾಯಣ ಉಡುಪರಿಗೆ 1.28 ಎಕರೆ, ಶ್ರೀಶ ಉಡುಪರಿಗೆ 1.36 ಎಕರೆ ಜಾಗವನ್ನು 20 ವರ್ಷಗಳ ಅವಧಿಗೆ ಗಣಿಗಾರಿಕೆಗೆ ನೀಡಲಾಗಿದೆ. ಗಣಿಗಾರಿಕೆ ನಡೆಸುವ ಸಂದರ್ಭದಲ್ಲಿ ಸರ್ಕಾರ ಹಾಕಿರುವ ಷರತ್ತುಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸ್ಥಳೀಯರ ಒತ್ತಾಯವೇನು?
ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡಿರುವ ಪ್ರದೇಶದಲ್ಲಿ ಈ ವರ್ಷ ಸುಮಾರು 238 ಮಿ. ಮೀ. ಮಳೆ ಬಿದ್ದಿದೆ. ದಟ್ಟವಾದ ಕಾಡು ಇದೆ. ಕೃಷಿ ಭೂಮಿ, ಜನವಸತಿ ಪ್ರದೇಶಗಳಿವೆ. ಇಂತಹ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ನಡೆಸಬಾರದು ಎಂಬುದು ಸ್ಥಳೀಯರ ಒತ್ತಾಯ.

ಕಾಡಿನ ನಾಶವನ್ನು ತಡೆಯಿರಿ
ಗಣಿಗಾರಿಕೆಗೆ ಅನುಮತಿ ಪಡೆದಿರುವ ಗುಡ್ಡದ ಎರಡೂ ಭಾಗದಲ್ಲಿ ಶರಾವತಿ ಹಿನ್ನೀರು ಇದೆ. ಈ ಗುಡ್ಡ ಪ್ರದೇಶ ಹುಲಿಕಲ್ ಘಾಟ್ ತನಕ ಸಾಗುತ್ತದೆ. ದಟ್ಟವಾದ ಕಾಡು ಇರುವ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಒಪ್ಪಿಗೆ ನೀಡಿದ್ದು ಹೇಗೆ? ಎಂಬುದು ಸ್ಥಳೀಯರ ಪ್ರಶ್ನೆ.

ರಾತ್ರೋ ರಾತ್ರಿ ಮರ ಕಡಿದಿದ್ದಾರೆ
ಸ್ಥಳೀಯರಾದ ಅಭಿ ಮರ ಕಡಿದಿರುವ ಬಗ್ಗೆ 'ಒನ್ ಇಂಡಿಯಾ ಕನ್ನಡ'ದ ಜೊತೆ ಮಾತನಾಡಿದರು. "ಸ್ಥಳೀಯರು ಗಣಿಗಾರಿಕೆಗೆ ವಿರೋಧ ಮಾಡಿದ್ದಾರೆ. ಅನುಮತಿ ಪಡೆದವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಣ ಕೊಟ್ಟು ರಾತ್ರೋರಾತ್ರಿ ಮರಗಳನ್ನು ಕಡಿಸಿದ್ದಾರೆ. ನಮ್ಮ ಊರಿನವರು ವಿರೋಧ ಮಾಡಿದ್ದೇವೆ ಎಂದು ಪಕ್ಕದ ಊರಿನವರ ಸಹಿ ಮಾಡಿಸಿ ಅದನ್ನು ಇಲಾಖೆಗೆ ನೀಡಿ ಒಪ್ಪಿಗೆ ಪಡೆದಿದ್ದಾರೆ" ಎಂದು ಆರೋಪಿಸಿದರು.

ಮರ ಕಡಿಯುವುದನ್ನು ತಡೆಯಿರಿ
"ಈಗ ಸುಮಾರು 200 ದೊಡ್ಡ ಮರ, ಸಸಿಗಳನ್ನು ಕಡಿದು ಗುಡ್ಡವನ್ನು ಸವರಿದ್ದಾರೆ. ಗಣಿಗಾರಿಕೆ ಮುಂದುವರೆದರೆ ಸುಮಾರು 30 ಸಾವಿರ ಮರಗಳಿಗೆ ಕೊಡಲಿ ಬೀಳಲಿದೆ. ಜಿಲ್ಲಾಡಳಿತ ಗಣಿಗಾರಿಕೆಗೆ ನೀಡಿರುವ ಅನುಮತಿ ತಕ್ಷಣ ರದ್ದುಗೊಳಿಸಬೇಕು" ಎಂದು ಅಭಿ ಒತ್ತಾಯಿಸಿದರು.

ಮರ ಕಡಿಯುವುದು ಸ್ಥಗಿತ
ಸ್ಥಳೀಯರ ವಿರೋಧದ ಬಳಿಕ ಅರಣ್ಯ ಇಲಾಖೆಯವರು ಮರ ಕಡಿಯುವುದನ್ನು ಸ್ಥಗಿತಗೊಳಿಸಲು ಗಣಿಗಾರಿಕೆಗೆ ಒಪ್ಪಿಗೆ ಪಡೆದವರಿಗೆ ಸೂಚನೆ ನೀಡಿದ್ದಾರೆ. ಗುಡ್ಡದಲ್ಲಿ ಮರ ಕಡಿದ ಕಾರಣಕ್ಕೆ 2 ಪ್ರಕರಣ ದಾಖಲು ಮಾಡಲಾಗಿದೆ.

ಮೊಕದ್ದಮೆ ದಾಖಲಾಗಿದೆ
ಹೆಸರು ಹೇಳಲು ಇಚ್ಚಿಸದ ನಗರ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, "ಕಲ್ಲು ಗಣಿಗಾರಿಕೆಗೆ 2014-15ರಲ್ಲಿ ಅನುಮತಿ ನೀಡಲಾಗಿತ್ತು. ಕಂದಾಯ ಸೇರಿದಂತೆ ಅಗತ್ಯ ಇಲಾಖೆಗಳು ಇದಕ್ಕೆ ಒಪ್ಪಿಗೆ ನೀಡಿವೆ. ಈಗ ಗಿಡಗಳನ್ನು ಕಡಿದಿರುವುದಾಗಿ ಸ್ಥಳೀಯರು ದೂರು ನೀಡಿದ್ದು, ಈ ಕುರಿತು ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದೇವೆ. ಮರ ಕಡಿವುದನ್ನು ತಕ್ಷಣದಿಂದಲೇ ನಿಲ್ಲಿಸಿದ್ದೇವೆ" ಎಂದು ಹೇಳಿದ್ದಾರೆ.












Click it and Unblock the Notifications