ಆಗುಂಬೆ ಘಾಟ್ನಲ್ಲಿ ಅಪಘಾತ, ಪ್ರಪಾತಕ್ಕೆ ಮುಖ ಮಾಡಿ ನಿಂತ ಲಾರಿ
ಶಿವಮೊಗ್ಗ, ಆಗಸ್ಟ್ 05; ಶಿವಮೊಗ್ಗ-ಮಂಗಳೂರು ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಲಾರಿ ಪ್ರಪಾತದತ್ತ ಮುಖ ಮಾಡಿ ನಿಂತಿದೆ. ಅದೃಷ್ಟವಶಾತ್ ದೊಡ್ಡ ಅಪಾಯ ತಪ್ಪಿದಂತಾಗಿದೆ.
ಗುರುವಾರ ಆಗುಂಬೆ ಘಾಟ್ ರಸ್ತೆಯ 6 ಮತ್ತು 7ನೇ ತಿರುವಿನ ಮಧ್ಯೆ ಈ ಘಟನೆ ಸಂಭವಿಸಿದೆ. ಭತ್ತ ತುಂಬಿದ್ದ ಲಾರಿ ಶಿವಮೊಗ್ಗದಿಂದ ಹೆಬ್ರಿಗೆ ತೆರಳುತಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಮುನ್ನುಗ್ಗಿದೆ.
ಆಗುಂಬೆ ಘಾಟ್ನಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ
ಕ್ಯಾಂಟರ್ ಲಾರಿಯ ಮುಂದಿನ ಚಕ್ರಗಳು ಪ್ರಪಾತದ ಕಡೆಗೆ ಮುಖ ಮಾಡಿವೆ. ತಡೆಗೋಡೆಯ ಕಲ್ಲುಗಳು ಲಾರಿಯ ಛಾಸಿಗೆ ತಾಗಿದ್ದರಿಂದ ಲಾರಿ ನಿಂತಿದೆ. ಕ್ಯಾಂಟರ್ನಲ್ಲಿ ಭತ್ತದ ಲೋಡ್ ಇದ್ದಿದ್ದರಿಂದ ಲಾರಿ ಪ್ರಪಾತಕ್ಕೆ ಧುಮುಕದೆ ನಿಂತಿದೆ.
ಆಗುಂಬೆ ಘಾಟ್ನಲ್ಲಿ ಪ್ರಾಣಿಗಳಿಗೆ ಆಹಾರ ಕೊಟ್ಟರೆ ದಂಡ!
ಲಾರಿಯ ಚಾಲಕನ್ನು ರಕ್ಷಣೆ ಮಾಡಲಾಗಿದೆ. ಅಪಘಾತದಿಂದಾಗಿ ಕೆಲಕಾಲ ಘಾಟಿಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯರ ನೆರವಿನಿಂದ ಕ್ಯಾಂಟರ್ ಲಾರಿಯನ್ನು ಎಳೆಯುವ ಕಾರ್ಯ ನಡೆಯುತ್ತಿದೆ.
ಸೈನಿಕ ಶಾಲೆ ಯೋಜನೆ; ಆಗುಂಬೆ ವನಸಿರಿಗೆ ಎದುರಾದ ಆತಂಕ
ಭಾರೀ ವಾಹನ ಸಂಚಾರ; ಸಾಮಾನ್ಯವಾಗಿ ಮಳೆಗಾಲದಲ್ಲಿ ಆಗುಂಬೆ ಘಾಟ್ನಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗುತ್ತದೆ. ಈ ಬಾರಿಯೂ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಮಳೆ ಕಡಿಮೆಯಾಗಿದ್ದರಿಂದ ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಯಿತು.
ಮಳೆಯಾದರೆ ಮಾತ್ರ ಭಾರೀ ವಾಹನ ಸಂಚಾರ ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದರು. ಕಳೆದೆರಡು ದಿನದಿಂದ ಮಳೆಯಾಗುತ್ತಿದ್ದು, ಭಾರೀ ವಾಹನ ಸಂಚಾರ ನಿರ್ಬಂಧ ವಿಧಿಸಿರಲಿಲ್ಲ.
ಮಳೆಯಾದ ಸಂದರ್ಭ ಘಾಟ್ನಲ್ಲಿ ಭಾರೀ ವಾಹನ ಸಂಚರಿಸಿದರೆ ರಸ್ತೆ ಕುಸಿಯುವ ಸಾಧ್ಯತೆ ಇದೆ. ಅಲ್ಲದೆ ಜಾರುವಿಕೆಯು ಹೆಚ್ಚಿರುತ್ತದೆ. ಇಂತಹ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ವಾಹನಗಳು ಪ್ರಪಾತಕ್ಕೆ ಉರುಳುವ ಭೀತಿ ಇರುತ್ತದೆ. ಇದೇ ಕಾರಣಕ್ಕೆ ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗುತ್ತದೆ.
ಆಗುಂಬೆ ಘಾಟ್ ರಸ್ತೆಯ ತಿರುವುಗಳು ಬಹಳ ಅಪಾಯಕಾರಿ. ಅದರಲ್ಲೂ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಾಗಬೇಕಾದರೆ ಚಾಲಕರು ಎಚ್ಚರಿಕೆಯಿಂದ ಇರಬೇಕು. ಘಾಟ್ ರಸ್ತೆಯ ಹಲವು ಕಡೆ ಲಾರಿಗಳು ಪ್ರಪಾತಕ್ಕೆ ಬಿದ್ದಿವೆ. ಅಲ್ಲಿ ಲಾರಿಗಳ ನೋಂದಣಿ ಸಂಖ್ಯೆ ಬೋರ್ಡ್ಗಳನ್ನು ಹಾಕಲಾಗಿದೆ.
ಹಲವು ಕಡೆ ಸೇತುವೆ ಕುಸಿತ; ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆಯ ಕಾರಣ ಶಿವಮೊಗ್ಗ ಜಿಲ್ಲೆಯ ಹಲವು ಕಡೆ ಸೇತುವೆಗಳು ಕುಸಿದಿದೆ, ರಸ್ತೆಗೆ ಹಾನಿಯಾಗಿದೆ. ದುರಸ್ತಿ ಆಗುವವರೆಗೆ ಕೆಲವು ಕಡೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ಜಿಲ್ಲಾಡಳಿತ ಸೂಚಿಸಿದೆ.
* ಹೊಸನಗರದಿಂದ ನಗರ-ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766(ಸಿ)ರಲ್ಲಿ ಬರುವ ನಗರ-ಚಿಕ್ಕಪೇಟೆ ಮಧ್ಯದಲ್ಲಿರುವ ಸೇತುವೆ ಕುಸಿದಿರುವುದರಿಂದ ಮತ್ತು ಶಿವಮೊಗ್ಗ ತೀರ್ಥಹಳ್ಳಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ವಿಹಂಗಮ ನರ್ಸರಿ ತಿರುವಿನಿಂದ ಭಾರತಿಪುರ ತಿರುವಿನವರೆಗೆ ರಸ್ತೆ ಕುಸಿದಿರುವುದರಿಂದ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
* ಶಿವಮೊಗ್ಗ-ಕುಂದಾಪುರ ಮತ್ತುಕುಂದಾಪುರದಿಂದ-ಶಿವಮೊಗ್ಗಕ್ಕೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ-ಸಾಗರ-ಹೊನ್ನಾವರ (ಎನ್ಹೆಚ್69) ಮಾರ್ಗದಲ್ಲಿ ಸಂಚರಿಸಬೇಕು.
* ಶಿವಮೊಗ್ಗ-ಉಡುಪಿ-ಮಂಗಳೂರು ಮತ್ತು ಮಂಗಳೂರಿನಿಂದ ಉಡುಪಿ ಶಿವಮೊಗ್ಗಕ್ಕೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ-ಕೊಪ್ಪ-ಕಾರ್ಕಳ-ಮಂಗಳೂರು (ಎಸ್ಹೆಚ್ 57, 65 ಮತ್ತು ಎನ್ಹೆಚ್ 169ರಲ್ಲಿ) ಮಾರ್ಗದಲ್ಲಿ ಸಂಚರಿಸುವುದು.
* ಶಿವಮೊಗ್ಗ-ಕುಂದಾಪುರಕ್ಕೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ-ಹೊಸನಗರ-ಹುಲಿಕಲ್ ಘಾಟ್-ಸಿದ್ದಾಪುರ-ಕುಂದಾಪುರ ಮಾರ್ಗದಲ್ಲಿ ಸಾಗಬೇಕು.
* ಶಿವಮೊಗ್ಗ-ಮಂಗಳೂರಿಗೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ-ನರಸಿಂಹರಾಜಪುರ-ಕೊಪ್ಪ-ಶೃಂಗೇರಿ-ಕಾರ್ಕಳ-ಮಂಗಳೂರು ಮಾರ್ಗವಾಗಿ ಸಂಚಾರ ನಡೆಸಬೇಕು.
ಕುಸಿದಿರುವ ಸೇತುವೆ ಮತ್ತು ರಸ್ತೆ ದುರಸ್ತಿ ಆಗುವವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.