ತೀರ್ಥಹಳ್ಳಿ: ಶಿಲ್ಪ ಕಲಾವಿದ ಎಚ್.ಎನ್. ಕೃಷ್ಣಮೂರ್ತಿ ನಿಧನ
ತೀರ್ಥಹಳ್ಳಿ, ಸೆಪ್ಟೆಂಬರ್ 9: ತಾಲ್ಲೂಕಿನ ಖ್ಯಾತ ಶಿಲ್ಪ ಕಲಾವಿದ ಎಚ್.ಎನ್. ಕೃಷ್ಣಮೂರ್ತಿ ಅನಾರೋಗ್ಯದಿಂದಾಗಿ ಬುಧವಾರ ನಿಧನರಾದರು.
ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು. ತಮ್ಮ ಶಿಲ್ಪಕಲಾ ಪ್ರತಿಭೆಯಿಂದ ಅವರು ತಾಲ್ಲೂಕಿನಲ್ಲಿ ಖ್ಯಾತಿ ಗಳಿಸಿದ್ದರು. ಅನೇಕ ಪ್ರಶಸ್ತಿ, ಸನ್ಮಾನಗಳು ಅವರಿಗೆ ಒಲಿದಿದ್ದವು.
ಕಟ್ಟೆಹಕ್ಕಲು ( ಸಾಲ್ಗಡಿ ) ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ದಾವಣಗೆರೆ ಕಲಾ ಕಾಲೇಜಿನಲ್ಲಿ ಚಿತ್ರಕಲೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯನ್ನು ಪಡೆದಿದ್ದರು. ಬಳಿಕ ತೀರ್ಥಹಳ್ಳಿ ತುಂಗಾ ಕಾಲೇಜು ಸಮೀಪ ಕುಶಾವತಿ ನದಿ ತೀರದಲ್ಲಿ ಶಿಲ್ಪಕಲಾ ಕೇಂದ್ರವನ್ನು ಪ್ರಾರಂಭಿಸಿ ಹೆಸರು ಗಳಿಸಿದ್ದರು.
ಎಚ್ಎನ್ಕೆ ಎಂದೇ ಖ್ಯಾತರಾಗಿದ್ದ ಕೃಷ್ಣಮೂರ್ತಿ ಅವರ ಅಂತ್ಯಸಂಸ್ಕಾರವು ಗುರುವಾರ ಬೆಳಿಗ್ಗೆ ಕಟ್ಟೆಹಕ್ಕಲುವಿನಲ್ಲಿ ನಡೆಯಲಿದೆ. ಮೃತದೇಹವನ್ನು ಅಂತಿಮ ದರ್ಶನಕ್ಕೆ ಕಟ್ಟೆಹಕ್ಕಲುವಿನ ಅವರ ನಿವಾಸದಲ್ಲಿ ಇರಿಸಲಾಗಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಕೃಷ್ಣಮೂರ್ತಿ ಅವರಿಗೆ 2017ರಲ್ಲಿ ರಾಜ್ಯ ಸರ್ಕಾರದ ಪ್ರತಿಷ್ಠಿತ 'ಜಕಣಾಚಾರಿ ಪ್ರಶಸ್ತಿ' ದೊರಕಿತ್ತು.