ಶಿವಮೊಗ್ಗ: ಕಳ್ಳತನ ಮಾಡಿ ಬೀರುಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಶಿವಮೊಗ್ಗ, ಜುಲೈ.27: ನಗರದ ಎಂ.ಆರ್.ಎಸ್.ನಲ್ಲಿರುವ ಕೆ.ಪಿ.ಟಿ.ಸಿ.ಎಲ್ ಹಾಗೂ ಮೆಸ್ಕಾಂ ಕ್ವಾಟ್ರಸ್ ನಲ್ಲಿರುವ ಎರಡು ಮನೆಗಳಲ್ಲಿ ಹಾಡಹಗಲೇ ಕಳ್ಳತನವಾಗಿದೆ.
ಕೆ.ಪಿ.ಟಿ.ಸಿ.ಎಲ್.ನ ಎಇಇ ಶಿವಕುಮಾರ್ ಸ್ವಾಮಿ ಎಂಬುವವರ ಮನೆ ಕಳ್ಳತನ ಮಾಡಿ ದುಷ್ಕರ್ಮಿಗಳು ಬೆಡ್ ರೂಂನ ಬೀರು ಮತ್ತು ಮಂಚಕ್ಕೆ ಬೆಂಕಿ ಹಚ್ಚಿರುವ ಘಟನೆ ಇಂದು ಶುಕ್ರವಾರ ಮಧ್ಯಾಹ್ನ ಸುಮಾರು 2:15ಕ್ಕೆ ನಡೆದಿದೆ.
ಆಶಾಢ ಶುಕ್ರವಾರವೆಂದು ಶಿವಕುಮಾರ್ ಸ್ವಾಮಿ ಮತ್ತು ಅವರ ಕುಟುಂಬ ಕ್ವಾಟ್ರಸ್ ನಲ್ಲಿರುವ ಮಾರಿಯಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಇದೇ ಸಂದರ್ಭದಲ್ಲಿ ಇವರ ಮನೆಯ ಹಿಂಬಾಗಿಲಿನಿಂದ ಬಂದು 35 ಸಾವಿರ ರೂ. ನಗದು, 58 ಗ್ರಾಂ ಚಿನ್ನಾಭರಣ ಹಾಗೂ 300 ಗ್ರಾಂ ಬೆಳ್ಳಿ ಸಾಮಾನುಗಳು ಹಾಗೂ ವಿಗ್ರಹಗಳು ಕಳವು ಮಾಡಲಾಗಿದೆ.
ಕಳವು ಮಾಡಿ ಇವರ ಮನೆಯ ಬೆಡ್ ರೂಂ ನ ಗೋದ್ರೆಜ್ ಬೀರು ಹಾಗೂ ಮಂಚಕ್ಕೆ ಬೆಂಕಿ ಇಟ್ಟು ಪರಾರಿ ಆಗಿದ್ದಾರೆ. ಶಿವಕುಮಾರ್ ಸ್ವಾಮಿ ಪಕ್ಕವಿರುವ ಮಂಜು ಎಂಬುವವರ ಮನೆಗೆ ಲಗ್ಗೆ ಇಟ್ಟ ದುಷ್ಕರ್ಮಿಗಳು ಸುಮಾರು 7 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಹಾಗೂ ನಗದನ್ನು ಕಳವು ಮಾಡಿದ್ದಾರೆ.
ಕಳ್ಳತನದ ಕುರಿತು ಶಿವಕುಮಾರ್ ಅವರ ಪತ್ನಿ ಗೌರಮ್ಮ ಮಾತನಾಡಿ, ದೇವರ ಪೂಜೆಗೆ ಹೋಗಿದ್ವಿ, ಹಾಡಹಗಲೇ ಕಳವು ನಡಿದಿದೆ. ಇನ್ನು ರಾತ್ರಿ ಹೊತ್ತು ಮಹಿಳೆಯರಿಗೆ ರಕ್ಷಣೆ ಎಲ್ಲಿ? ಕ್ವಾಟ್ರಸ್ ನಲ್ಲಿ ಮೆಸ್ಕಾಂ ನ ಆಸ್ತಿ ಇದೆ. ಆದರೆ ಭದ್ರತೆ ಇಲ್ಲ. ಹಣ ಮತ್ತು ರೆಕಾರ್ಡ್ ಗಳನ್ನು ಸುಟ್ಟು ಹಾಕಿದ್ದಾರೆ.
ಈ ಗೋಳು ನಡೀತಾನೆ ಇರುತ್ತೆ. ಇಲ್ಲಿನ ಕ್ವಾಟ್ರಸ್ ನ ಮನೆಗಳಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ಹಾಗೆಯೇ ಮಂಜು ಅವರ ಪತ್ನಿ ಜ್ಯೋತಿ ಮಾತನಾಡಿ ಇಲ್ಲಿ ಕೆ.ಪಿ.ಟಿ.ಸಿ.ಎಲ್ ನ ಆಸ್ತಿ ಇದೆ. ಆದರೆ ಭದ್ರತೆ ಇಲ್ಲ. ನಾವು ಪೂಜೆಗೆಂದು ದೇವಸ್ಥಾನಕ್ಕೆ ಹೋಗಿ ಬರುವುದರೊಳಗೆ ಈ ಕಳವು ನಡೆದಿದೆ. ಮನೆಯ ಹಿಂಬದಿಯ ಬಾಗಿಲು ಮುರಿದು ಬೆಳ್ಳಿಯಲ್ಲಿ ಮಾಡಿಸಿದ ದೇವರ ಮುಖವಾಡ, ಬೆಳ್ಳಿ ಬಟ್ಟಲು, ಬಂಗಾರದ ಓಲೆ ಹಾಗೂ ನಗದು ಕಳವು ಆಗಿದೆ.
ಕಬ್ಬಿಣದ ಬಾಗಿಲನ್ನ ಹಾಕಿ ಎಂದು ಕೆ.ಪಿ.ಟಿಸಿಎಲ್ ಗೆ ಹಲವಾರು ಬಾರಿ ದೂರು ನೀಡಲಾಗಿದೆ. ಆದರೆ ಯಾರು ಕೇಳುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಕ್ಲೆಮೆಂಟ್ ರಾಯನ್ ಎಂಬುವವರು ಮಾತನಾಡಿ ಪಾಲಿಕೆಯವರು ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕಿದೆ. ವರ್ಷದಲ್ಲಿ ಇದು ಮೂರನೇ ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ.