ಸಿಗಂದೂರು ದೇವಾಲಯದಲ್ಲಿ ಗದ್ದಲ, ಗಲಾಟೆ; ಪೊಲೀಸರ ಪ್ರವೇಶ
ಶಿವಮೊಗ್ಗ, ಅಕ್ಟೋಬರ್ 16 : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಭಕ್ತರು ಮತ್ತು ಅರ್ಚಕರ ನಡುವೆ ಗದ್ದಲ, ಗಲಾಟೆ ನಡೆದಿದೆ. ಪೊಲೀಸರು ದೇವಾಲಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಮತ್ತು ಭಕ್ತರ ನಡುವೆ ಗದ್ದಲ ನಡೆದಿದೆ. ಕಚೇರಿಯ ಪಿಠೋಪಕರಣಗಳಿಗೆ ಹಾನಿ ಮಾಡಲಾಗಿದೆ. ಇದು ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವಿನ ಶೀತಲ ಸಮರದ ಮುಂದವರೆದ ಭಾಗ ಎಂದು ತಿಳಿದುಬಂದಿದೆ.
ಶುಕ್ರವಾರ ಪ್ರಧಾನ ಅರ್ಚಕ ಶೇಷಗಿರಿ ಭಟ್ ದೇವಾಲಯದ ಗರ್ಭಗುಡಿ ಮುಂದೆ ಮೌನಾಚರಣೆ ಆರಂಭಿಸಿದ್ದರು. ಕುಟುಂಬವರದ ಜೊತೆ ಗರ್ಭಗುಡಿ ಮುಂದೆ ಕುಳಿತಿದ್ದರು. ನವರಾತ್ರಿಗೂ ಮೊದಲು ಚಂಡಿಕಾ ಹೋಮ ನಡೆಸಬೇಕು. ರಾಮಪ್ಪ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದರು.

ದೇವಾಲಯಕ್ಕೆ ಬಂದ ಭಕ್ತರು ಅರ್ಚಕ ಶೇಷಗಿರಿ ಭಟ್ ವಿನಾ ಕಾರಣ ಗೊಂದಲ ಎಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೌನ ವ್ರತ ಬಿಡುವಂತೆ ಒತ್ತಾಯಿಸಿದ್ದಾರೆ. ಈ ಸಮಯದಲ್ಲಿ ಎರಡು ಗುಂಪುಗಳ ನಡುವೆ ಗದ್ದಲ, ಗಲಾಟೆ ನಡೆದಿದೆ.
ಈ ವೇಳೆ ದೇವಾಲಯದ ಕಚೇರಿ ಪಿಠೋಪಕರಣಗಳಿಗೆ ಹಾನಿಯಾಗಿದೆ. ಕೆಲವು ವಸ್ತುಗಳು ಮುರಿದು ಹೋಗಿವೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ಈ ಬೆಳವಣಿಗೆಗೆ ಸಾಕ್ಷಿಯಾದರು.
ಮುಜರಾಯಿ ಖಾತೆಗೆ ಬೇಡ : ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ನೀಡುವ ಪ್ರಸ್ತಾವನೆ ಕೇಳಿ ಬರುತ್ತಿದೆ. ಇದಕ್ಕೆ ವಿರೋಧವೂ ಸಹ ವ್ಯಕ್ತವಾಗುತ್ತದೆ. ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ ಮುಜರಾಯಿ ಇಲಾಖೆಗೆ ನೀಡುವುದಕ್ಕೆ ವಿರೋಧಿಸಿದ್ದು, ಹೋರಾಟದ ಎಚ್ಚರಿಕೆಯನ್ನು ನೀಡಿದೆ.
ಸಿಗಂದೂರಿನ ಚೌಡೇಶ್ವರಿ ಡಾ. ರಾಮಪ್ಪ ಅವರ ಮನೆ ದೇವತೆ. ಶರಾವತಿ ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದ ಮೂಲ ವಿಗ್ರಹವನ್ನು ತಂದು ಪುನರ್ ಪ್ರತಿಷ್ಠಾಪಿಸಿ, ದೇವಾಲಯ ನಿರ್ಮಿಸಿದ್ದಾರೆ. ಆದರೆ, ಅರ್ಚಕ ಮತ್ತು ರಾಮಪ್ಪ ಅವರ ನಡುವೆ ಹಲವಾರು ಗೊಂದಲಗಳಿವೆ.












Click it and Unblock the Notifications