ಯಡಿಯೂರಪ್ಪ ಭೇಟಿಗೂ ಮೊದಲು ಕುಮಾರ್ ಬಂಗಾರಪ್ಪ ಮುನಿಸು!
ಶಿವಮೊಗ್ಗ, ಫೆಬ್ರವರಿ 28: ಮೂಗೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿ ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅಚ್ಚರಿ ಮೂಡಿಸಿದ್ದರು. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ನೇತೃತ್ವದ ತಂಡ ಶಾಸಕರ ಮನೆಗೆ ಭೇಟಿ ನೀಡಿ ಮನವೊಲಿಸಿದರು.
ಬಿ. ವೈ. ರಾಘವೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಡಿ. ಮೇಘರಾಜ್ ಅವರು ಶಾಸಕ ಕುಮಾರ್ ಬಂಗಾರಪ್ಪ ಅವರ ಮನೆಗೆ ಭಾನುವಾರ ಬೆಳಗ್ಗೆ ದೌಡಾಯಿಸಿದರು. ಅವರ ಮನವೊಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿದರು.
ಬಳಿಕ ಎಲ್ಲರೂ ಒಟ್ಟಿಗೆ ಮನೆಯಿಂದ ಹೊರಬಂದು, ಕಾರ್ಯಕ್ರಮದ ಸ್ಥಳಕ್ಕೆ ತೆರಳಿದರು. ಮಾಧ್ಯಮಗಳ ಜೊತೆ ಮಾತನಾಡಿದ ಬಿ. ವೈ. ರಾಘವೇಂದ್ರ, "ಯಾವುದೆ ಅಸಮಾಧಾನವಿಲ್ಲ. ಶಿವಮೊಗ್ಗದಲ್ಲಿ ನಡೆಯುವ ನಮ್ಮೊಲುಮೆ ಕಾರ್ಯಕ್ರಮಕ್ಕೆ ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಆಹ್ವಾನಿಸಲು ಮನೆಗೆ ಬಂದಿದ್ದೇವೆ" ಎಂದು ತಿಳಿಸಿದರು.

ಶಾಸಕರ ಅಸಮಾಧಾನ ಏಕೆ?: ಮೂಗೂರು ಏತ ನೀರಾವರಿ ಯೋಜನೆಯ ಕುರಿತ ಫ್ಲೆಕ್ಸ್ಗಳಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಫೋಟೊ ಬಳಕೆ ಮಾಡಿಲ್ಲ ಎಂದು ಹೇಳಲಾಗಿದೆ. ಈ ನಡುವೆ ನೀರಾವರಿ ನಿಗಮದವರು ತಯಾರಿಸಿರುವ ಕಿರು ಚಿತ್ರದಲ್ಲಿಯೂ ಶಾಸಕರನ್ನು ಕಡೆಗಣಿಸಲಾಗಿದೆ. ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಸಿಎಂ ಭೇಟಿ ಮೊದಲು ಮುಸುಕಿನ ಗುದ್ದಾಟ; ಸೊರಬ ಬಿಜೆಪಿಯಲ್ಲಿಯಲ್ಲಿನ ಮೂಲ ಮತ್ತು ವಲಸಿಗರ ನಡುವಿನ ಮುಸುಕಿನ ಗುದ್ದಾಟದಿಂದಾಗಿಯೇ ಶಾಸಕರನ್ನು ಕಡೆಗಣಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮೂಲ ಬಿಜೆಪಿಯವರು ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ದೂರವಿಟ್ಟು ಫ್ಲೆಕ್ಸ್ ಪ್ರಿಂಟ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications