ಸ್ಮಾರ್ಟ್ ಸಿಟಿ ಶಿವಮೊಗ್ಗ; ಗುಂಡಿಗೆ ಬೀಳುತ್ತಲೇ ಇವೆ ವಾಹನಗಳು!
ಶಿವಮೊಗ್ಗ, ಮಾರ್ಚ್ 05: ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಜನರು ಹೈರಾಣಾಗಿ ಹೋಗಿದ್ದಾರೆ. ಜೀವ ಭಯದಲ್ಲೇ ಮನೆಯಿಂದ ಹೊರ ಬರುವಂತಾಗಿದೆ. ನಗರದ ವಿವಿಧೆಡೆ ಪ್ರತಿದಿನ ಅಪಘಾತಗಳು ಸಂಭವಿಸುತ್ತಲೇ ಇದೆ.
ಸ್ಮಾರ್ಟ್ ಸಿಟಿ ಯೋಜನೆಗಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳನ್ನು ಅಗೆಯಲಾಗಿದೆ. ಬೈಕ್ ಸವಾರರು, ಕಾರು ಚಾಲಕರಿಗೆ ಈ ಗುಂಡಿಗಳು ಗೊತ್ತಾಗದೆ ಅಪಘಾತಗಳು ಸಂಭವಿಸುತ್ತಿವೆ. ಗುಂಡಿಗೆ ಬಿದ್ದು ಹಲವರು ಗಾಯಗೊಂಡಿದ್ದಾರೆ. ಕಾರುಗಳು ಸಿಕ್ಕಿಬಿದ್ದು ನಷ್ಟ ಅನುಭವಿಸುತ್ತಿದ್ದಾರೆ.
ವಿಶೇಷ ಸುದ್ದಿ: ಸ್ಮಾರ್ಟ್ ಸಿಟಿ ದಾವಣಗೆರೆಗೆ ಸ್ಮಾರ್ಟ್ ಹೆಲ್ತ್ 'ಬೈಸಿಕಲ್ ಶೇರಿಂಗ್ ಸಿಸ್ಟಂ'
ರಸ್ತೆಯ ತಿರುವುಗಳಲ್ಲೇ ದೊಡ್ಡ ಗುಂಡಿಗಳಿರುತ್ತವೆ. ಏಕಾಏಕಿ ಗುಂಡಿಗಳನ್ನು ತೋಡುವುದರಿಂದ ವಾಹನ ಸವಾರರಿಗೆ ಅಲ್ಲಿ ಗುಂಡಿ ಇದೆ ಎನ್ನುವುದೇ ಗೊತ್ತಾಗುವುದಿಲ್ಲ. ಇದುವೆ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ.
ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಭಾರಿ ಗೋಲ್ಮಾಲ್; ರಸ್ತೆ ತಡೆ
"ಇಲ್ಲಿ ಗುಂಡಿ ತೋಡಿದಾಗಿನಿಂದ ಪ್ರತಿದಿನ ಯಾರಾದರೊಬ್ಬರು ಬೀಳುತ್ತಿದ್ದಾರೆ. ನಾವೇ ಅವರಿಗೆ ನೀರು ಕುಡಿಸಿ ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ" ಎನ್ನುತ್ತಾರೆ ನಗರದಲ್ಲಿ ಹೊಟೇಲ್ ನಡೆಸುತ್ತಿರುವ ಸತೀಶ್. ಹಲವಾರು ಪ್ರಕರಣಗಳು ನಡೆದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.
ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಳ ಪರಿಶೀಲನೆ; ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟ ಸಿಎಂ ಯಡಿಯೂರಪ್ಪ!
ಗುತ್ತಿಗೆದಾರರು ಕೈಗೆ ಸಿಗಲ್ಲ
"ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಡೆಸಬೇಕು. ಆದರೆ ಇಲ್ಲಿ ಗುತ್ತಿಗೆದಾರರು ಯಾರು?, ಅಧಿಕಾರಿಗಳು ಯಾರು? ಎನ್ನುವುದೇ ಗೊತ್ತಾಗುತ್ತಿಲ್ಲ. ಗುಂಡಿಗಳನ್ನು ತೋಡಿ ಹೋಗುತ್ತಾರೆ. ಪ್ರಶ್ನಿಸಲು ಫೋನ್ ಮಾಡಿದರೆ ಅಧಿಕಾರಿಗಳು ಫೋನ್ ರಿಸೀವ್ ಮಾಡವುದಿಲ್ಲ. ಬಡ ಕಾರ್ಮಿಕರ ಜೊತೆಗೆ ಜಗಳವಾಡಲು ಸಾಧ್ಯವೇ" ಎಂದು ಪ್ರಶ್ನಿಸುತ್ತಾರೆ ಗಿರೀಶ್.
ಸೂಚನಾ ಫಲಕವಿಲ್ಲ, ಆಮೆಗತಿ ಕಾಮಗಾರಿ
ಶಿವಮೊಗ್ಗ ಮಹಾನಗರ ಪಾಲಿಕೆ 14 ವಾರ್ಡ್ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಹಂತ ಹಂತವಾಗಿ ಕಾಮಗಾರಿ ಮುಗಿಸುವ ಬದಲು, ಎಲ್ಲಾ ವಾರ್ಡ್ಗಳಲ್ಲಿ ಒಮ್ಮೆಲೇ ರಸ್ತೆಗಳನ್ನು ಅಗೆಯಲಾಗಿದೆ. ಅಗೆದ ಗುಂಡಿಗಳನ್ನು ಹಾಗೆ ಬಿಟ್ಟು ಜನರಿಗೆ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ಬಾಯಿ ತೆರೆದ ಗುಂಡಿಗಳಲ್ಲಿ ವಾಹನಗಳು ಸಿಕ್ಕಿಕೊಳ್ಳುತ್ತಿವೆ.
ಗುಂಡಿಗಳನ್ನು ಮುಚ್ಚಿಸುವ ಭರವಸೆ
ಕಾಮಗಾರಿ ನಡೆಯುತ್ತಿರುವ ಕುರಿತು ಸೂಚನಾ ಫಲಕಗಳನ್ನು ಅಳವಡಿಸದೆ ಇರುವುದರಿಂದ ಪ್ರತಿದಿನ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಜನರ ಸಂಕಷ್ಟ ದೂರಗೊಳಿಸಬೇಕಿದ್ದ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಗುಂಡಿಗಳನ್ನು ಮುಚ್ಚಿಸುವ ಭರವಸೆ ಕೊಟ್ಟು ಸುಮ್ಮನಾಗುತ್ತಿದ್ದಾರೆ.
ನಡೆಯುತ್ತಲೇ ಇದೆ ಕಾಮಗಾರಿ
ಉತ್ತಮ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಿಸುವುದು. ಸ್ಮಾರ್ಟ್ ಪರಿಹಾರಗಳ ಬಳಕೆಯ ಮೂಲಕ ಸೇವಾ ವಿತರಣೆಯನ್ನು ಹೆಚ್ಚಿಸುವುದು. ಸ್ವಚ್ಛ ಮತ್ತು ಒಳ್ಳೆಯ ಪರಿಸರವನ್ನು ಹೊಂದಿರುವ ನಗರವಾಗಿಸುವುದು ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ ಸಭೆ ನಡೆಸುವಾಗ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಿದ್ದಾರೆಯೇ? ಕಾದು ನೋಡಬೇಕು.