ನೀತಿ ಸಂಹಿತೆ : ಶಿವಮೊಗ್ಗ ದಸರಾ ಜಂಬೂ ಸವಾರಿ ರದ್ದು
ಶಿವಮೊಗ್ಗ, ಅಕ್ಟೋಬರ್ 09 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಉಪ ಚುನಾವಣೆ ನೀತಿ ಸಂಹಿತೆ ಬಿಸಿ ಶಿವಮೊಗ್ಗ ದಸರಾ ಆಚರಣೆಗೂ ತಟ್ಟಿದೆ. ದಸರಾ ಕಾರ್ಯಕ್ರಮಕ್ಕೆ ಯಾವುದೇ ರಾಜಕೀಯ ನಾಯಕರಿಗೂ ಆಹ್ವಾನ ನೀಡುತ್ತಿಲ್ಲ.
ಚುನಾವಣಾ ಆಯೋಗ ಈಗಾಗಲೇ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಅಕ್ಟೋಬರ್ 10ರಿಂದ ದಸರಾ ಕಾರ್ಯಕ್ರಮಗಳು ಆರಂಭವಾಗಲಿವೆ.
ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಜನಪ್ರತಿನಿಧಿಗಳು ನೇತೃತ್ವ ವಹಿಸಿದ್ದ ವಿವಿಧ ಸಮಿತಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ.

ತಾಯಿ ಚಾಮುಂಡೇಶ್ವರಿ ಪ್ರತಿಮೆಯನ್ನು ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅಕ್ಟೋಬರ್ 10ರಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಶಿವಮೊಗ್ಗ ದಸರಾಕ್ಕೆ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅದ್ದೂರಿ ದಸರಾ ನಡೆಯುವುದಿಲ್ಲ. ಸಕ್ರೆಬೈಲು ಶಿಬಿರದಿಂದ ಆನೆಯನ್ನು ತರಿಸಿ ನಡೆಸುತ್ತಿದ್ದ ಜಂಬೂ ಸವಾರಿಯನ್ನು ಸಹ ರದ್ದುಗೊಳಿಸಲಾಗಿದೆ. ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಗರದ ವಿವಿಧ ದೇವಾಲಯಗಳಲ್ಲಿನ ದೇವರ ಮೂರ್ತಿಗಳನ್ನು ಸಿಂಗರಿಸಿ ದಸರಾ ಮೆರವಣಿಗೆಗೆ ತರಲು ಜಿಲ್ಲಾಡಳಿತ ಪ್ರತಿವರ್ಷ ಅನುದಾನ ಬಿಡುಗಡೆ ಮಾಡುತ್ತಿತ್ತು. ಆದರೆ, ಈ ಬಾರಿ ಯಾವುದೇ ಅನುದಾನವನ್ನು ನೀಡಲಾಗುತ್ತಿಲ್ಲ.
ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಗೂ ಜಿಲ್ಲಾಡಳಿತ ಪತ್ರ ಬರೆಯಲಿದ್ದು, ದೇವಾಲಯದವರು ತಮ್ಮ ಸ್ವಂತ ಖರ್ಚಿನಲ್ಲಿ ಮೂರ್ತಿಗಳನ್ನು ಅಲಂಕಾರಗೊಳಿಸಿ ಉತ್ಸವಕ್ಕೆ ತರಬಹುದಾಗಿದೆ.












Click it and Unblock the Notifications