ಮಳೆಯಲ್ಲೇ ಜನರ ಕ್ಯೂ; ಮಾಜಿ ಸಚಿವರಿಗೆ ಸಿಗಲಿಲ್ಲ ಲಸಿಕೆ!
ಶಿವಮೊಗ್ಗ, ಜುಲೈ 14; ಕೊರೊನಾ ಲಸಿಕೆ ಇಲ್ಲ ಎಂಬ ಬೋರ್ಡ್ ಸಾರ್ವಜನಿಕರಿಗೆ ದರ್ಶನವಾಗುವುದು ಸಾಮಾನ್ಯ. ಆದರೆ ಮಾಜಿ ಸಚಿವರು ಕೂಡ ಎರಡನೇ ಡೋಸ್ ಲಸಿಕೆ ಸಿಗದೆ ಮನೆಗೆ ವಾಪಸಾಗಿದ್ದಾರೆ. ಮಳೆಯಲ್ಲಿಯೂ ಜನರು ಲಸಿಕೆಗಾಗಿ ಕ್ಯೂ ನಿಂತಿರುವ ದೃಶ್ಯಗಳು ಸಹ ಕಂಡು ಬಂದಿತು.
ಇಂತಹ ಸನ್ನಿವೇಶ ಎದುರಾಗಿದ್ದು ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ. ಕೊರೊನಾ ಎರಡನೇ ಡೋಸ್ ಲಸಿಕೆ ತೆಗೆದುಕೊಳ್ಳಿ ಎಂಬ ಮೊಬೈಲ್ ಸಂದೇಶ ಬಂದಿದ್ದರಿಂದ ಕೋವಿಶೀಲ್ಡ್ ಲಸಿಕೆ ಪಡೆಯಲು ಸಾಗರದ ದೇವರಾಜ ಅರಸು ಸಭಾಭವನಕ್ಕೆ ಅವರು ಆಗಮಿಸಿದ್ದರು.
ಆದರೆ ಮಾಜಿ ಸಚಿವರನ್ನು ಸ್ವಾಗತಿಸಿದ್ದು ಲಸಿಕೆ ಸ್ಟಾಕ್ ಇಲ್ಲ ಎಂಬ ಫಲಕ. ಮಾಧ್ಯಮಗಳ ಜೊತೆ ಮಾತನಾಡಿದ ಕಾಗೋಡು ತಿಮ್ಮಪ್ಪ, "ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕೆ ವಿತರಣೆಗೆ ವೇಗ ನೀಡಬೇಕು. ನಗರ ಮತ್ತು ಗ್ರಾಮಾಂತರ ಪ್ರದೇಶದಿಂದ ಲಸಿಕೆ ಪಡೆಯಲು ಜನ ಬರುತ್ತಿದ್ದಾರೆ. ಆದರೆ ಲಸಿಕೆ ದಾಸ್ತಾನು ಇಲ್ಲ ಎನ್ನುವ ಬೋರ್ಡ್ ನೋಡಿಕೊಂಡು ಮರಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಿಗೆ ಸರಿಯಾಗಿ ಲಸಿಕೆ ಪೂರೈಕೆಯಾಗುತ್ತಿಲ್ಲ. ಶೇ 2ರಷ್ಟು ಪ್ರಮಾಣದಲ್ಲಿ ಮಾತ್ರ ಲಸಿಕೆ ಪೂರೈಸಲಾಗುತ್ತಿದೆ. ಹಳ್ಳಿಯವರು ಅನಿವಾರ್ಯವಾಗಿ ಲಸಿಕೆ ಪಡೆಯಲು ನಗರಗಳಿಗೆ ಬರುವ ಸ್ಥಿತಿಯನ್ನು ಸರ್ಕಾರ, ಆರೋಗ್ಯ ಇಲಾಖೆ ನಿರ್ಮಿಸಿದೆ. ಜನರು ಹಳ್ಳಿಗಳಲ್ಲೇ ಲಸಿಕೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ಮಳೆಯಲ್ಲೂ ಕ್ಯೂ; ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಮೂರು ದಿನದಿಂದ ಮಳೆ ಬಿರುಸಾಗಿದೆ. ಭಾರೀ ಮಳೆಯ ನಡುವೆಯು ಜನರು ಲಸಿಕೆ ಹಾಕಿಸಿಕೊಳ್ಳಲು ಬರುತ್ತಿದ್ದಾರೆ. ಸಮರ್ಪಕ ವ್ಯವಸ್ಥೆ ಮಾಡದ ಹಿನ್ನಲೆ ಮಳೆಯಲ್ಲೇ ಕ್ಯೂ ನಿಲ್ಲುವ ದುಸ್ಥಿತಿ ಎದುರಾಗಿದೆ.

6 ಲಕ್ಷ ಡೋಸ್; ಶಿವಮೊಗ್ಗ ಜಿಲ್ಲೆಯಾದ್ಯಂತ ಈವರೆಗೂ 6,69,601 ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಈ ಪೈಕಿ 5,47,555 ಪ್ರಥಮ ಡೋಸ್, 1,22,046 ಎರಡನೇ ಡೋಸ್ ನೀಡಲಾಗಿದೆ. ನೂರಕ್ಕೂ ಹೆಚ್ಚು ಕಡೆ ಲಸಿಕೆ ನೀಡಲಾಗುತ್ತಿದೆ.












Click it and Unblock the Notifications