ಶಿವಮೊಗ್ಗ ಚುನಾವಣಾ ಚಿತ್ರಣ ಅಂತಿಮ, ಇನ್ನು ಪ್ರಚಾರದ ಭರಾಟೆ
ಶಿವಮೊಗ್ಗ, ಅಕ್ಟೋಬರ್ 22 : ತೀವ್ರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಕಣ ಅಂತಿಮಗೊಂಡಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಸೇರಿ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನವೆಂಬರ್ 3ರಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದರು. ಯಾವ ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ಪಡೆದಿಲ್ಲ. ಆದ್ದರಿಂದ, ಎಲ್ಲರೂ ಕಣದಲ್ಲಿ ಉಳಿದಂತಾಗಿದೆ.
ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣಾ ಕಣದಲ್ಲಿದ್ದಾರೆ. ಅವರ ಜೊತೆಗೆ ಬಿ.ಕೆ.ಶಶಿಕುಮಾರ್ ಎಂಬ ಪಕ್ಷೇತರ ಅಭ್ಯರ್ಥಿ ಸಹ ಕಣದಲ್ಲಿದ್ದಾರೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನ.6ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಕಣ ಅಂತಿಮಗೊಂಡಿದ್ದು ಇನ್ನು ಪ್ರಚಾರದ ಭರಾಟೆ ಆರಂಭವಾಗಲಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಉಭಯ ಪಕ್ಷದ ನಾಯಕರು ಪ್ರಚಾರದಲ್ಲಿ ತೊಡಗಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 4 ದಿನಗಳ ಕಾಲ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ನಡೆಸಿ ಪ್ರಚಾರ ನಡೆಸಲಿದ್ದಾರೆ...

ಕಣದಲ್ಲಿರುವ ಅಭ್ಯರ್ಥಿಗಳು
* ಬಿ.ವೈ.ರಾಘವೇಂದ್ರ - ಬಿಜೆಪಿ
* ಮಧು ಬಂಗಾರಪ್ಪ - ಜೆಡಿಎಸ್
* ಮಹಿಮಾ ಪಟೇಲ್ - ಜೆಡಿಯು
* ಬಿ.ಕೆ.ಶಶಿಕುಮಾರ್ - ಪಕ್ಷೇತರ

ಎಚ್.ಡಿ.ಕುಮಾರಸ್ವಾಮಿ ಪ್ರಚಾರ
ಶಿವಮೊಗ್ಗದಲ್ಲಿ ತಮ್ಮ ಆಪ್ತ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಆದ್ದರಿಂದ, 4 ದಿನಗಳ ಕಾಲ ಅವರು ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
'ಮಧು ಬಂಗಾರಪ್ಪ ಅವರ ಪರವಾಗಿ ಕುಮಾರಸ್ವಾಮಿ ಅವರು ಎಂಟೂ ವಿಧಾನಸಭಾ ಕ್ಷೇತ್ರದಲ್ಲೂ ಪ್ರಚಾರ ಮಾಡಲಿದ್ದಾರೆ. 4 ದಿನ ಅವರು ಶಿವಮೊಗ್ಗದಲ್ಲಿಯೇ ಉಳಿಯಲಿದ್ದಾರೆ. ಅಕ್ಟೋಬರ್ 25ರ ನಂತರ ಕುಮಾರಸ್ವಾಮಿ ಪ್ರಚಾರ ಮಾಡಲಿದ್ದಾರೆ' ಎಂದು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.

ದಿನೇಶ್ ಗುಂಡೂರಾವ್, ದೇವೇಗೌಡ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಅಕ್ಟೋಬರ್ 23ರಂದು ಶಿವಮೊಗ್ಗ ನಗರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಧು ಬಂಗಾರಪ್ಪ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಅಕ್ಟೋಬರ್ 22ರ ಸೋಮವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನಗರದ ವಿವಿಧ ಕಡೆ ಲೋಕಸಭೆ ಉಪ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಪ್ರವಾಸ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರವಾಗಿ ಅಕ್ಟೋಬರ್ 25ರಂದು ಶಿವಮೊಗ್ಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಹ ಪ್ರಚಾರ ನಡೆಸುವ ನಿರೀಕ್ಷೆ ಇದೆ.












Click it and Unblock the Notifications