ಶಿವಮೊಗ್ಗ: ಪೊಲೀಸ್ ನೆರಳಲ್ಲಿ ಹೋಳಿ ಹಬ್ಬ ಆಚರಣೆ
ಶಿವಮೊಗ್ಗ, ಮಾ. 7: ಕೋಮು ದಳ್ಳುರಿಯಿಂದ ತತ್ತರಿಸಿದ್ದ ಶಿವಮೊಗ್ಗದಲ್ಲಿ ಮತ್ತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಾರ್ಚ್ 7 ರಂದು ಬೆಳಗ್ಗೆ ಹೋಳಿ ಆಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ಹೋಳಿ ಆಚರಿಗೆ ಅನುಮತಿ ನೀಡಲಾಗಿತ್ತು.
ನಂತರ ಮಧ್ಯಾಹ್ನ 1 ಗಂಟೆ ನಂತರ ನಿಷೇಧಾಜ್ಞೆ ಜಾರಿ ಮಾಡಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಹೋಳಿ ಆಚರಣೆ ಮಾಡಲಾಯಿತು. [ಶಿವಮೊಗ್ಗ ಗಲಭೆಗೆ ಕಾರಣವೇನು]
ಮುನ್ನೆಚ್ಚರಿಕೆ ಕ್ರಮವಾಗಿ ನಗರದ ವಿವಿಧ ಸ್ಥಳಗಳಲ್ಲಿ 1500 ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.. ಅಲ್ಲದೇ ಸಿಆರ್ ಪಿಎಫ್ ಮತ್ತು ಪ್ಯಾರಾ ಮಿಲಿಟರಿ ಪಡೆ ಸಿಬ್ಬಂದಿಯನ್ನು ರಕ್ಷಣಾ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು. [ಶಿವಮೊಗ್ಗ ಗಲಭೆ: ವಿಶ್ವನಾಥ್ ಕೊಲೆ ಆರೋಪಿಗಳ ಬಂಧನ]
ಓಮ್ನಿ ಭಸ್ಮ: ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ನಗರದ ಲಕ್ಷ್ಮೀ ಟಾಕೀಸ್ ಬಳಿ ಓಮ್ನಿಯೊಂದಕ್ಕೆ ಬೆಂಕಿ ಇಡುವ ಪ್ರಯತ್ನ ಮಾಡಿದ್ದಾರೆ. ಆದರೆ ಕಿಡಿಗೇಡಿಗಳ ಕೃತ್ಯ ವಿಫಲವಾಗಿದ್ದು ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ತಿಂಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗಲಭೆ ಉಂಟಾಗಿತ್ತು. ನಂತರ ಗಾಜನೂರು ಬಳಿ ವಿಶ್ವನಾಥ್ ಶೆಟ್ಟಿ ಎಂಬುವರನ್ನು ಹತ್ಯೆ ಮಾಡಲಾಗಿತ್ತು. ಶಿವಮೊಗ್ಗದ ಪೆಟ್ಟಿಗೆ ಅಂಗಡಿಗಳು ಕಿಡಿಗೇಡಿಗಳ ಆಕ್ರೋಶಕ್ಕೆ ತುತ್ತಾಗಿದ್ದವು. ನಗರದಲ್ಲಿ ವಾರಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಇಲಾಖೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತ್ತು.