ಶಿವಮೊಗ್ಗದಲ್ಲಿ ಬಾರೀ ಸ್ಫೋಟ; ಕಲ್ಲು ಕ್ರಷರ್ ಲೈಸೆನ್ಸ್ ರದ್ದು
ಶಿವಮೊಗ್ಗ, ಜನವರಿ 31; ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕಲ್ಲು ಕ್ರಷರ್ನಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ 6 ಕಾರ್ಮಿಕರು ಮೃತಪಟ್ಟಿದ್ದರು.
ಜನವರಿ 21ರ ಗುರುವಾರ ರಾತ್ರಿ 10.30ರ ಸುಮಾರಿಗೆ ಹುಣಸೋಡು ಗ್ರಾಮದ ಬಳಿ ಕ್ರಷರ್ನಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿದ್ದವು. ರಾಜ್ಯಾದ್ಯಂತ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು.
ಸ್ಫೋಟ ಸಂಭವಿಸಿದ ಸ್ಥಳದಲ್ಲಿನ ಎಸ್. ಎಸ್. ಕ್ರಷರ್ನ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕ್ರಷರ್ನಿಂದ ಅಕ್ಕ-ಪಕ್ಕದ ಗ್ರಾಮಗಳಿಗೂ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು.

ಕಲ್ಲುಗಂಗೂರು ಸರ್ವೆ ನಂಬರ್ 2ರಲ್ಲಿ ಎಸ್. ಎಸ್. ಕ್ರಷರ್ ನಡೆಯುತ್ತಿತ್ತು. ಕ್ರಷರ್ನಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡ ಬಳಿಕ ಕ್ರಷರ್ ನಡೆಸುತ್ತಿದ್ದ ಸುಧಾಕರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು.
ಮುಖ್ಯಮಂತ್ರಿಗಳ ಭೇಟಿ; ಶಿವಮೊಗ್ಗ ತಾಲೂಕಿನ ಕಲ್ಲಗಂಗೂರು ಗ್ರಾಮದ ವ್ಯಾಪ್ತಿಯಲ್ಲಿ ಜರುಗಿದ ಸ್ಪೋಟದ ಸ್ಥಳಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದರು.
ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.
ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಬಲವಾಗಿ ಕೇಳಿ ಬಂದಿತ್ತು. ಈಗ ಜಿಲ್ಲಾಡಳಿತ ಕ್ರಷರ್ನ ಲೈಸೆನ್ಸ್ ರದ್ದುಗೊಳಿಸಿದೆ. ಈ ಸ್ಫೋಟದಲ್ಲಿ 6 ಕಾರ್ಮಿಕರು ಮೃತಪಟ್ಟಿದ್ದರು.












Click it and Unblock the Notifications