ಶರಾವತಿ ಉಳಿಸಲು ಒಂದಾದ ಮಲೆನಾಡು, ಶಿವಮೊಗ್ಗ ಬಂದ್ ಯಶಸ್ವಿ
ಶಿವಮೊಗ್ಗ, ಜುಲೈ 10 : ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದನ್ನು ವಿರೋಧಿಸಿ ಕರೆ ನೀಡಿದ್ದ ಶಿವಮೊಗ್ಗ ಬಂದ್ ಯಶಸ್ವಿಯಾಗಿದೆ. ಸಾವಿರಾರು ಜನರು ಶರಾವತಿ ಉಳಿಸಲು ಒಂದಾಗಿದ್ದು, ಬಂದ್ಗೆ ಸ್ವಯಂ ಪ್ರೇರಣೆಯಿಂದ ಬೆಂಬಲ ನೀಡಿದರು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸಲು ಡಿಪಿಆರ್ ತಯಾರಿಸಲು ಆದೇಶಿಸಿರುವ ಜನವಿರೋಧಿ ಆದೇಶವನ್ನು ಖಂಡಿಸಿ ಜುಲೈ 10ರ ಬುಧವಾರ ಕರೆ ನೀಡಲಾಗಿದ್ದ ಶಿವಮೊಗ್ಗ ಜಿಲ್ಲಾ ಬಂದ್ ಕರೆ ಸಂಪೂರ್ಣವಾಗಿ ಯಶಸ್ವಿಯಾಯಿತು.
ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳು, ಹೋಬಳಿಗಳಲ್ಲೂ ಬಂದ್ಗೆ ಬೆಂಬಲ ಸಿಕ್ಕಿದೆ. ಜನರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚುವ ಮೂಲಕ ಬಂದ್ಗೆ ಬೆಂಬಲ ನೀಡಿದರು. ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿತ್ತು.

ಶರಾವತಿ ಉಳಿಸಿ ಹೋರಾಟದ ಕೇಂದ್ರವಾದ ಸಾಗದರಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡರು. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಗೆ ಧಿಕ್ಕಾರ ಹೇಳಿದರು.
ಶಿವಮೊಗ್ಗದಲ್ಲಿ ಬೃಹತ್ ಪ್ರಭಟನಾ ಮೆರವಣಿಗೆ ನಡೆಸಿ ಯೋಜನೆಯನ್ನು ಕೈಬಿಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಮೂರು ನಿರ್ಣಯಗಳನ್ನು ಕೈಗೊಂಡಿತು.
3 ನಿರ್ಣಯಗಳು
1. ಲಿಂಗನಮಕ್ಕಿಯಿಂದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪವನ್ನು ಕೂಡಲೆ ಕೈಬಿಡಬೇಕು. ಈ ಕುರಿತ ಬಿ.ಎನ್.ತ್ಯಾಗರಾಜ ಸಮಿತಿ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಬೇಕು.
2. ಶರಾವತಿ ನೀರನ್ನು ವಿದ್ಯುತ್ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸುವುದೇ ಆದರೆ ಸರಣಿ ಯೋಜನೆಗಳಿಂದ ಸಂತ್ರಸ್ತರಾಗಿರುವವರಿಗೆ ಕುಡಿಯುವ ನೀರು, ನೀರಾವರಿ ಒದಗಿಸಲು ಡಿಪಿಆರ್ ರೂಪಿಸಲು ಆದೇಶಿಸಬೇಕು
3. ಮಲೆನಾಡಿನ ಪರಿಸರ ಮತ್ತು ಜನಜೀವನದ ಮೇಲೆ ಪರಿಣಾಮ ಬೀರುವ ಯಾವುದೆ ಅವೈಜ್ಞಾನಿಕ ಪರಿಸರ ಮಾರಕ ಯೋಜನೆಗಳನ್ನು ಇಲ್ಲಿನ ಜನರ ಅಭಿಪ್ರಾಯಕ್ಕೆ ವಿರುದ್ದವಾಗಿ ಕೈಗೊಳ್ಳಬಾರದು

ಶಿವಮೊಗ್ಗ ಬಂದ್ಗೆ ಬೆಂಬಲ ನೀಡಿ ಬೆಂಗಳೂರಿನ ಟೌನ್ ಹಾಲ್ ಮುಂದೆಯೂ ಪ್ರತಿಭಟನೆ ನಡೆಸಲಾಯಿತು. ಶರಾವತಿ ಬೆಂಗಳೂರಿಗೆ ಬೇಡ ಎಂದು ಘೋಷಣೆಗಳನ್ನು ಕೂಗಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು. ಯೋಜನೆ ಕೈ ಬಿಡುವುವಂತೆ ಸರ್ಕಾರಕ್ಕೆ ಪತ್ರ ಬರೆದರು.












Click it and Unblock the Notifications