ಸಕ್ರೆಬೈಲು ಆನೆ ಬಿಡಾರದಲ್ಲಿ ಮತ್ತೆ ಸೂತಕದ ಛಾಯೆ; ಆಕರ್ಷಕ ಆನೆ ‘ರಂಗ’ ಸಾವು
ಶಿವಮೊಗ್ಗ, ಅಕ್ಟೋಬರ್ 24: ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಲ್ಲಿ ಇಂದು ಮತ್ತೊಂದು ಆನೆ ಸಾವಿಗೀಡಾಗಿದೆ. ಕಳೆದ ವಾರವಷ್ಟೇ ಇದೇ ಶಿಬಿರದ ಏಕದಂತ ಆನೆ ಸಾವನ್ನಪ್ಪಿದ್ದು, ಐದು ದಿನಗಳ ಅಂತರದಲ್ಲಿ ಇದೀಗ ಮತ್ತೊಂದು ಆನೆ 'ರಂಗ' ಸಾವನ್ನಪ್ಪಿದ್ದು, ಆನೆ ಬಿಡಾರದಲ್ಲಿ ಸೂತಕದ ಛಾಯೆ ಆವರಿಸಿದೆ.
ಕಳೆದ ರಾತ್ರಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದಾಗ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅಸಹಾಯಕನಾಗಿ ದಂತ ತಿವಿತಕ್ಕೆ ಬಲಿಯಾಗಿದ್ದಾನೆ.
ಸಕ್ರೆಬೈಲು ಬಿಡಾರದಲ್ಲಿ ಹುಟ್ಟಿದ ರಂಗ ಗೀತಾ ಎಂಬ ಆನೆ ಮರಿ ಇದಾಗಿದ್ದು, ಆನೆಗೆ 35 ವರ್ಷವಾಗಿದೆ. ಈ ರಂಗ ಇಡೀ ಬಿಡಾರದಲ್ಲೇ ಅತ್ಯಂತ ಆಕರ್ಷಕ ಆನೆ ಎಂಬ ಖ್ಯಾತಿ ಪಡೆದಿದ್ದ.

ಆನೆಯ ನಿಧನದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಕ್ಟೋಬರ್ 21ರಂದು ಇದೇ ಬಿಡಾರದ ಏಕದಂತ ಆನೆ ಅನಾರೋಗ್ಯದ ಕಾರಣ ಸಾವನ್ನಪ್ಪಿತ್ತು. ಆನೆ ದಷ್ಟಪುಷ್ಟವಾಗಿದ್ದು, ಸಾಯುವ ಎರಡು ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೃದಯಾಘಾತದಿಂದ ಆನೆ ಸಾವನ್ನಪ್ಪಿದ್ದಾಗಿ ಸಕ್ರೆಬೈಲು ಅರಣ್ಯ ಅಧಿಕಾರಿಗಳು ತಿಳಿಸಿದ್ದರು. ಈ ಆನೆ ಸಾವಿನ ನಂತರ ಬಿಡಾರದಲ್ಲಿ 23 ಆನೆಗಳು ಉಳಿದುಕೊಂಡಿದ್ದವು. ಇದೀಗ ಮತ್ತೊಂದು ಆನೆ ಸಾವನ್ನಪ್ಪಿದೆ.












Click it and Unblock the Notifications