ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ರೆಕ್ಕೆ ಕಟ್ಟಿದ ಸರ್ಕಾರ!
ಶಿವಮೊಗ್ಗ, ಡಿಸೆಂಬರ್ 5 : ಒಂಭತ್ತು ವರ್ಷಗಳಿಂದ ಕುಂಟುತ್ತಿರುವ ಶಿವಮೊಗ್ಗ ವಿಮಾಣ ನಿಲ್ದಾಣ ಕಾಮಗಾರಿಗೆ ರೆಕ್ಕೆ ಕಟ್ಟುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿದೆ. ತಮ್ಮ ತವರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಆಸಕ್ತಿ ತೋರಿದ್ದಾರೆ.
ಶಿವಮೊಗ್ಗ ಸಂಸದರಾಗಿ ಬಿ. ವೈ. ರಾಘವೇಂದ್ರ ಆಯ್ಕೆಯಾದಾಗಲೇ ಈ ಬಾರಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವುದು ಖಚಿತ ಎಂಬ ನಿರೀಕ್ಷೆ ಇತ್ತು. ಈಗ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಯೋಜನೆಗೆ ವೇಗ ಸಿಕ್ಕಿದೆ.
ಕರ್ನಾಟಕ ಸರ್ಕಾರ ವಿಮಾನ ನಿಲ್ದಾಣ ಕಾಮಗಾರಿಯ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರವೇ ನೀಡಲಿದ್ದು, ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭವಾದರೆ ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗೆ ಸಹಾಯಕವಾಗಲಿದೆ. ವಿಮಾನದಲ್ಲಿ ಹಾರಾಟ ನಡೆಸಬೇಕು ಎಂದು ಮಲೆನಾಡಿನ ಜನರ ದಶಕಗಳ ಕನಸು ನನಸಾಗಲಿದೆ.

ವಿಮಾನ ನಿಲ್ದಾಣದ ಕನಸು
2010ರಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕನಸು ಚಿಗುರೊಡೆಯಿತು. ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರದ ಒಪ್ಪಿಗೆ ಸಿಕ್ಕಿತು. 758 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ ಸಿದ್ಧವಾಯಿತು. 201 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಭೂ ಮಾಲೀಕರಿಗೆ ಪ್ರತಿ ಎಕರೆಗೆ 3 ಲಕ್ಷದಂತೆ ಪರಿಹಾರ ನೀಡಲಾಯಿತು.

ನಿರ್ಮಾಣ ಕಾರ್ಯಕ್ಕೆ ತಡೆ
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಬಂದ ಸರ್ಕಾರಗಳು ಯೋಜನೆ ಬಗ್ಗೆ ಆಸಕ್ತಿ ತೋರಿಸಲಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರ ತಾಂತ್ರಿಕ ನ್ಯೂನ್ಯತೆಗಳನ್ನು ಎತ್ತಿದರು. ಆದ್ದರಿಂದ, ಕಾಮಗಾರಿ ನೆನೆಗುದಿಗೆ ಬಿದ್ದಿತು. 10 ವರ್ಷ ಕಳೆದರೂ ವಿಮಾನ ನಿಲ್ದಾಣ ಕಾಮಗಾರಿ ವೇಗ ಪಡೆದುಕೊಳ್ಳಲಿಲ್ಲ. ಈಗ ಯೋಜನೆಗೆ ಕರ್ನಾಟಕ ಸರ್ಕಾರ ವೇಗ ನೀಡಲು ಮುಂದಾಗಿದೆ.

2014ರಲ್ಲಿ ಪ್ರಯತ್ನ
2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಬಿ. ಎಸ್. ಯಡಿಯೂರಪ್ಪ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದರು. ವಿಮಾನಯಾನ ಖಾತೆ ರಾಜ್ಯ ಸಚಿವ, ದಾವಣಗೆರೆ ಸಂಸದರಾಗಿದ್ದ ಜಿ. ಎಂ. ಸಿದ್ದೇಶ್ವರರನ್ನು ಸ್ಥಳಕ್ಕೆ ಕರೆತಂದರು. ಅಧಿಕಾರಗಳ ಸರಣಿ ಸಭೆ ನಡೆಸಿದರು. ಆದರೆ, ರಾಜ್ಯ ಸರ್ಕಾರ ಯೋಜನೆಗೆ ಆಸಕ್ತಿ ತೋರಲಿಲ್ಲ. ಆದ್ದರಿಂದ, ಕಾಮಗಾರಿಯೂ ಪುನಃ ಆರಂಭವಾಗಿಲ್ಲ.

ಯಡಿಯೂರಪ್ಪ ಮುಖ್ಯಮಂತ್ರಿ
ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಯೋಜನೆಗೆ ಮತ್ತೆ ಜೀವ ಬಂದಿದೆ. ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಹೊಣೆಯನ್ನು ನೀಡಲಾಗಿದ. ಕಾಮಗಾರಿಗೆ ವೆಚ್ಚಕ್ಕಾಗಿ 39 ಕೋಟಿ ರೂ.ಗಳನ್ನು ಪ್ರಾರಂಭಿಕವಾಗಿ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.












Click it and Unblock the Notifications