ತೀರ್ಥಹಳ್ಳಿ ಉಗ್ರನ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ: ಎನ್ಐಎ
ಶಿವಮೊಗ್ಗ, ಮೇ 14: ಐಸಿಸ್ ಪ್ರೇರಿತ ಉಗ್ರ ಅಬ್ದುಲ್ ಮತೀನ್ ಕುರಿತು ಮಾಹಿತಿ ನೀಡಿದವರಿಗೆ ಎನ್ಐಎ (ರಾಷ್ಟ್ರೀಯ ತನಿಖಾ ದಳ) 3 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ಪ್ರದೇಶದ ಫಿಶ್ ಮಾರ್ಕೆಟ್ ರಸ್ತೆ ನಿವಾಸಿಯಾಗಿರುವ ಅಬ್ದುಲ್ ಮತೀನ್, ತಮಿಳುನಾಡಿನಲ್ಲಿ ಹಿಂದೂ ಮುಖಂಡನ ಹತ್ಯೆಯಲ್ಲಿ ಭಾಗಿಯಾಗಿದ್ದನು.
ಅಲ್ಲದೆ ರಾಜ್ಯದಲ್ಲಿ ಐಸಿಸ್ ಪ್ರೇರಿತ ಉಗ್ರರ ಗುಂಪಿನಲ್ಲಿ ಗುರುತಿಸಿಕೊಂಡಿದ್ದನು. ಸದ್ಯ ಈತ ತಲೆಮರೆಸಿಕೊಂಡಿದ್ದು, ಈತನ ಪತ್ತೆಗೆ ಎನ್ಐಎ ಬಲೆ ಬೀಸಿದೆ. ಹಾಗಾಗಿ ಈತನ ಬಂಧನಕ್ಕೆ ಸಹಕರಿಸಿದವರಿಗೆ 3 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಎನ್ಐಎ ತಿಳಿಸಿದೆ.

ಅಬ್ದುಲ್ ಮತೀನ್ ವಿರುದ್ಧ ಜನವರಿಯಲ್ಲಿ ಬೆಂಗಳೂರಿನ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಕೈಗೆತ್ತಿಕೊಂಡಿದೆ.

ತಮಿಳುನಾಡಿನಲ್ಲಿ ಹಿಂದೂ ಮುಖಂಡ ಸುರೇಶ್ ಕೊಲೆ ಪ್ರಕರಣದಲ್ಲಿ ಐಸಿಸ್ ಪ್ರಚೋದಿತ ಗುಂಪಿನ ಮೆಹಬೂಬ್ ಪಾಷಾ, ಕ್ವಾಜ ಮೋಹಿದ್ದಿನ್ ಸೇರಿದಂತೆ 12 ಮಂದಿ ಉಗ್ರರನ್ನು ಎನ್ಐಎ ಬಂಧಿಸಿದ್ದು, ಅವರೊಂದಿಗೆ ಅಬ್ದುಲ್ ಮತೀನ್ ನಿಕಟ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಹೀಗಾಗಿ ಆತನ ಕುರಿತು ಮಾಹಿತಿ ನೀಡಿದರೆ ಬಹುಮಾನ ನೀಡುವುದಾಗಿ ಘೋಷಿಸಿದೆ.












Click it and Unblock the Notifications