ಚಿಕಿತ್ಸೆ ನೀಡಿದ ವೈದ್ಯರೂ ಮಂಗನ ಕಾಯಿಲೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ
ಶಿವಮೊಗ್ಗ, ಜನವರಿ 25: ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವಿಪರೀತವಾಗಿದೆ, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇವರೆಲ್ಲರಿಗೂ ಚಿಕಿತ್ಸೆ ನೀಡಿದ ವೈದ್ಯರನ್ನೂ ಕೂಡ ಕಾಯಿಲೆ ಬಿಟ್ಟಿಲ್ಲ ಎನ್ನುವುದು ಆಶ್ಚರ್ಯಕರ ಸಂಗತಿಯೇ.
ಜಿಲ್ಲೆಯಲ್ಲಿ 8 ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ಮಾರಣಾಂತಿಕ ಮಂಗನ ಕಾಯಿಲೆಯಿಂದ ಈಗ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ವೈದ್ಯರಿಗೂ ತಟ್ಟಿರುವುದು ಆತಂಕ ಮೂಡಿಸಿದೆ.
ಮಲೆನಾಡಲ್ಲಿ ಮಂಗನ ಕಾಯಿಲೆ ಸವಾಲು: 43 ಮಂದಿಯಲ್ಲಿ ಸೋಂಕಿನ ಶಂಕೆ
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಥಿಕಾರಿ ಡಾ. ರಮೇಶ್ ಮಂಗನಕಾಯಿಲೆಗೆ ತುತ್ತಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಪ್ಪತ್ತೈದು ದಿನಗಳಿಂದ ಮಂಡಗದ್ದೆ ಸುತ್ತ ಮಂಗನ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಡಾ. ರಮೇಶ್ ಗ್ರಾಮೀನ ಪ್ರದೇಶಗಳಿಗೆ ಅನೇಕ ಬಾರಿ ಹೋಗಿ ರೋಗಿಗಳ ಪರಿಶೀಲನೆ ಮಾಡಿದ್ದಾರೆ. ಕಳೆದ ವಾರವಷ್ಟೇ ಅವರು ತೋಟದಕೊಪ್ಪ, ಹೆಗಲತ್ತಿ ಗ್ರಾಮಗಳಿಗೆ ಹೋಗಿದ್ದರು, ಅಲ್ಲಿಂದ ಮರಳಿದ ಬಳಿಕ ಅವರಿಗೆ ಜ್ವರ ಕಾಣಿಸಿಕೊಂಡಿತ್ತು.
ಮೊದಲ ಬಾರಿಗೆ ಮಂಗನ ಕಾಯಿಲೆ 1957ರಲ್ಲಿ ಸೊರಬದ ಕ್ಯಾಸನೂರು ಅರಣ್ಯ ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ವೈರಾಣುಗಳನ್ನು ಪತ್ತೆ ಹಚ್ಚಲಾಗಿತ್ತು. ಹೀಗಾಗಿ ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಕರೆಯುತ್ತಾರೆ. ಮಂಗಗಳ ಮೂಲಕ ಈ ವೈರಾಣು ಮನುಷ್ಯರ ದೇಹ ಪ್ರವೇಶಿಸುವುದರಿಂದ ಗ್ರಾಮೀಣ ಭಾಷೆಯಲ್ಲಿ ಮಂಗನ ಕಾಯಿಲೆ ಎಂದು ಕರೆಯುತ್ತಾರೆ.