ಅರಣ್ಯಾಧಿಕಾರಿಗೆ ಧಮ್ಕಿ ಆರೋಪ: ಕ್ಷಮೆಯಾಚಿಸಿದ ಶಾಸಕ ಸಂಗಮೇಶ್ವರ್
ಶಿವಮೊಗ್ಗ, ಜನವರಿ 07: ಅರಣ್ಯಾಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಕ್ಷಮೆಯಾಚನೆ ಮಾಡಿದ್ದಾರೆ.
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ದೇವಸ್ಥಾನ ಕಟ್ಟುತ್ತಿದ್ದೇವೆ ಎಂದು ಅರಣ್ಯಾಧಿಕಾರಿ ದಿನೇಶ್ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರ ದೂರು ಕೊಟ್ಟ ಹಿನ್ನೆಲೆಯಲ್ಲಿ ಶಾಸಕರು ಫುಲ್ ಗರಂ ಆಗಿ ಅರಣ್ಯಾಧಿಕಾರಿಗೆ ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಅಷ್ಟೇ ಅಲ್ಲ, ಕೈಕಾಲುಗಳನ್ನು ಮುರಿಯುವುದಾಗಿ ಆವಾಜ್ ಹಾಕಿದ ವೀಡಿಯೋ ವೈರಲ್ ಆಗಿದ್ದು, ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಶಾಸಕ ಸಂಗಮೇಶ್ವರ್ ಕ್ಷಮೆಯಾಚನೆಗೆ ಮುಂದಾಗಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಸಂಗಮೇಶ್ವರ್ ಅವರು ಕೂಡ್ಲಿಗೆರೆ ಗ್ರಾಮದಲ್ಲಿ ಜನರು ಕಂದಾಯ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಗ್ರಾಮದ ಜನರಿಗೆ ಅರಣ್ಯ ಇಲಾಖೆ ಸಿಬ್ಬಂದಿ ತೊಂದರೆ ನೀಡುತ್ತಿದ್ದರು. ಹಣಕ್ಕಾಗಿಯೂ ಜನರ ಬಳಿ ಪೀಡಿಸುತ್ತಿದ್ದರು. ಜನರೇ ನನ್ನ ಬಳಿ ಬಂದು ಈ ರೀತಿ ಅಳಲು ತೋಡಿಕೊಂಡಿದ್ದರು.
ಆದ್ದರಿಂದ ಅಧಿಕಾರಿ ಜೊತೆ ಫೋನ್ ನಲ್ಲಿ ಮಾತನಾಡುವಾಗ ಜೋರಾಗಿ ಮಾತಾಡಿದ್ದೇನೆ. ಕೂಗಾಡಿದ್ದೇನೆ. ನಾನು ನನ್ನ ವೈಯಕ್ತಿಕ ವಿಷಯಕ್ಕೆ ಅಧಿಕಾರಿ ಬಳಿ ಜೋರಾಗಿ ಮಾತನಾಡಿಲ್ಲ ಜನರಿಗಾಗಿ ಮಾತಾಡಿದ್ದೇನೆ. ಆದರೂ ನಾನು ಹಾಗೇ ಮಾತನಾಡಿದ್ದು ತಪ್ಪು. ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದರು.












Click it and Unblock the Notifications