ಶಿವಮೊಗ್ಗ: ಮಾಧ್ಯಮಗಳ ವಿರುದ್ಧ ಸಚಿವ ಈಶ್ವರಪ್ಪ ಕೆಂಡಾಮಂಡಲ
ಶಿವಮೊಗ್ಗ, ಜುಲೈ 22: ರಾಜ್ಯದಲ್ಲಿನ ಅನೇಕ ಟಿವಿ ಚಾನಲ್ ಗಳನ್ನು ನೋಡಿದರೆ, ಪ್ರಪಂಚದಲ್ಲಿ ಇನ್ನು ಯಾರೂ ಬದುಕುವುದಿಲ್ಲವೇನೋ ಎಂಬ ರೀತಿ ಹೈಲೈಟ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಕೆಲವು ಶವ ಹೊತ್ತುಕೊಂಡು ಹೋಗುತ್ತಿರುವಂತಹ ದೃಶ್ಯವನ್ನು ತೋರಿಸೋದನ್ನು ನೋಡಿದರೆ, ಮೃತದೇಹಗಳಿಗೆ ಇಡೀ ರಾಜ್ಯದಲ್ಲಿ ಮಾಡುತ್ತಿರುವ ವ್ಯವಸ್ಥೆ ಅನಾಗರೀಕ ವ್ಯವಸ್ಥೆ ಎನ್ನುವ ಭಾವನೆ ಮೂಡಿಸುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಇಷ್ಟು ಶ್ರಮ ಹಾಕಿದರೂ ಕೂಡ ಏನು ವ್ಯವಸ್ಥೆ ಇಲ್ಲವೇನೋ ಎನ್ನುವ ರೀತಿ ಕಾಣುತ್ತಿದೆ. ಜನ ಹೋಮ್ ಕ್ವಾರಂಟೈನ್ ಗೆ ಅವಕಾಶ ಕೊಟ್ಟರೂ ಇಷ್ಟಪಡುತ್ತಿಲ್ಲ. ಈ ಮೊದಲು ಬಿಸಿ ನೀರು ಸಿಗುತ್ತಿಲ್ಲ. ಸರಿಯಾಗಿ ಶೌಚಾಲಯ ಸ್ವಚ್ಛತೆ ಇಲ್ಲ, ವ್ಯವಸ್ಥೆ ಸರಿ ಇಲ್ಲ ಅನ್ನುತ್ತಿದ್ದರು. ಆದರೆ ಈಗ ಎಲ್ಲಾ ವ್ಯವಸ್ಥೆ ಸರಿ ಇದೆ ಎಂದು ತಿಳಿಸಿದರು.

ಕ್ವಾರಂಟೈನ್ ನಲ್ಲಿ ಇರುವುದು 8 ರಿಂದ 10 ದಿನ. ಆ ದಿನದಲ್ಲಿ ಅವರೇನು ಹನಿಮೂನ್ ಗೆ ಹೋಗುವುದಿಲ್ಲ. ಸ್ವಲ್ಪ ಹೊಂದಿಕೊಳ್ಳುವುದಕ್ಕೆ ಆಗಲಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದರು?. ನಮ್ಮಿಂದ ಏನು ಸಾಧ್ಯವೋ ಎಲ್ಲ ವ್ಯವಸ್ಥೆ ಮಾಡುತ್ತಿದ್ದೇವೆ. ಕೆಲವರಿಗೆ ಹೋಂ ಕ್ವಾರಂಟೈನ್ ಗೂ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.












Click it and Unblock the Notifications