ಶಿವಮೊಗ್ಗ : ಯೋಧರ ಸಾಹಸ ಬಿಂಬಿಸುವ ಸೈನಿಕ ಶಿಲ್ಪ ಉದ್ಯಾನ
ಶಿವಮೊಗ್ಗ, ಜುಲೈ 25 : ಶಿವಮೊಗ್ಗ ನಗರದಲ್ಲಿ ಸೈನಿಕರ ವಿವಿಧ ಭಾವಾಭಿವ್ಯಕ್ತಿಯ ಶಿಲ್ಪಗಳನ್ನು ಒಳಗೊಂಡ 'ಸೈನಿಕ ಶಿಲ್ಪ ಉದ್ಯಾನವನ' ಅಂತಿಮ ರೂಪ ಪಡೆದುಕೊಳ್ಳುತ್ತಿದೆ. ಇದು ಲೋಕಾರ್ಪಣೆಗೊಂಡ ಬಳಿಕ ನಗರದ ಪ್ರಮುಖ ಪ್ರವಾಸಿತಾಣವಾಗುವ ನಿರೀಕ್ಷೆ ಇದೆ.
ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದ ಪಕ್ಕದಲ್ಲಿರುವ ಸೈನಿಕ ಕಲ್ಯಾಣ ಇಲಾಖೆ ಎದುರಿನ ಈ ಉದ್ಯಾನವನ ಸೈನಿಕ ಶಿಲ್ಪದಿಂದಾಗಿ ಹೊಸ ಮೆರುಗು ಪಡೆಯುತ್ತಿದೆ. ಒಂದೆರಡು ದಿನದಲ್ಲಿ ಶಿಲ್ಪಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ರಾಜ್ಯ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಜಿಲ್ಲಾಡಳಿತ ಸೈನಿಕರಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸುವಂತಹ ಕಾರ್ಯದಲ್ಲಿ ತೊಡಗಿದೆ. ಇಲ್ಲಿರುವ ಕಲಾಕೃತಿಗಳು ಸೈನಿಕರ ಕರ್ತವ್ಯ, ನಿಷ್ಠೆ, ಹೋರಾಟದ ಬದುಕು, ದೇಶಪ್ರೇಮವನ್ನು ಅನಾವರಣಗೊಳಿಸುವಂತಿವೆ.
ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಆಯ್ದ ಹಿರಿಯ ಕಲಾವಿದರು ಈ ಅಪರೂಪದ ಕಲಾಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಿರಿಯ ಕಲಾವಿದರು ಇವರಿಗೆ ಕಲಾಕೃತಿ ರಚನೆಯಲ್ಲಿ ಸಹಾಯ ಮಾಡುತ್ತಿದ್ದಾರೆ.

ದೇಶ ರಕ್ಷಣೆಯೇ ನಮ್ಮ ಹೊಣೆ
'ಸೈನಿಕ ಶಿಲ್ಪ ಉದ್ಯಾನವನ' ಹಲವು ಕಾರಣಗಳಿಗೆ ಗಮನ ಸೆಳೆಯುತ್ತಿದೆ. ದೇಶ ರಕ್ಷಣೆಯೇ ನಮ್ಮ ಗುರಿ ಎನ್ನುವಂತೆ ಎದೆಯುಬ್ಬಿಸಿ ನಿಂತಿರುವ ಸೈನಿಕ ಅಧಿಕಾರಿ, ಹೋರಾಟದಲ್ಲಿ ಶತ್ರುಗಳ ಗುಂಡೇಟು ತಿಂದು ಗಾಯಾಳಾದ ಇನ್ನೊಬ್ಬ ಯೋಧನನ್ನು ಹೊತ್ತು ಹೋಗುತ್ತಿರುವ ಕಲಾಕೃತಿ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ವೃದ್ಧ, ಮಗುವಿನ ರಕ್ಷಣಾ ಕಾರ್ಯದಲ್ಲಿ ನಿರತ ವೀರ ಯೋಧ ಮುಂತಾದ ಶಿಲ್ಪಗಳು ಇಲ್ಲಿವೆ.

ದೇಶ ಭಕ್ತಿಯ ಸಂದೇಶ
ಸೈನಿಕ ತನ್ನ ಸಂಸಾರವನ್ನು ತೊರೆದು ಸೈನ್ಯಕ್ಕೆ ಹೋಗುತ್ತಿರುವ ಭಾವನಾತ್ಮಕ ಸನ್ನಿವೇಶ, ವೀರ ಹುತಾತ್ಮತೆಯ ಸಂಕೇತ ಅಮರ್ ಜವಾನ್, ಅಧಿಕಾರಿ ಸೆಲ್ಯೂಟ್ ಹೊಡೆಯುತ್ತಿರುವುದು ಸೇರಿದತೆ ಇನ್ನೂ ಹಲವು ಈ ರೀತಿಯ ದೇಶ ಪ್ರೇಮ ಉಕ್ಕಿಸುವ ಸೈನಿಕ ಕಾರ್ಯಚಟುವಿಕೆಯ ಕಲಾಕೃತಿಗಳು ಜನರ ಗಮ ಸಳೆಯುತ್ತಿವೆ.

ಕೆಲವೇ ದಿನಗಳಲ್ಲಿ ಲೋಕಾರ್ಪಣೆ
'ಸೈನಿಕ ಶಿಲ್ಪ ಉದ್ಯಾನವನ'ದಲ್ಲಿ ಸುಮಾರು 20ಕಲಾಕೃತಿಗಳು ಈಗಾಗಲೇ ಅಂತಿಮರೂಪು ಪಡೆದಿದ್ದು, ದೇಶವನ್ನು ಕಾಯುವ ಸೈನಿಕರ ಬಗ್ಗೆ ಅಭಿಮಾನ ಮೂಡಿಸುವಂತಿವೆ. ಕೆಲವೇ ದಿನಗಳಲ್ಲಿ ಉದ್ಯಾನ ಲೋಕಾರ್ಪಣೆಗೊಳ್ಳಲಿದ್ದು, ನಗರದ ಹೊಸ ಪ್ರವಾಸಿ ತಾಣವಾಗುವ ನಿರೀಕ್ಷೆ ಇದೆ.

ರಾಜ್ಯದಲ್ಲೇ ಮೊದಲು
"ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಸೈನಿಕ ಶಿಲ್ಪ ಉದ್ಯಾನವನ ನಿರ್ಮಿಸಲಾಗುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ವಿಭಿನ್ನ ಥೀಮ್ನ ಶಿಲ್ಪ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಉದ್ಯಾನ ನಿರ್ಮಾಣ ನಮ್ಮಲ್ಲಿ ಹೊಸ ಚೈತನ್ಯ ಮೂಡಿಸಿದೆ" ಎಂದು ರಾಜ್ಯ ಶಿಲ್ಪಕಲಾ ಅಕಾಡೆಮಿ ಸದಸ್ಯ ಎಮ್.ರಘು ಹೇಳಿದ್ದಾರೆ.












Click it and Unblock the Notifications