ಶಿವಮೊಗ್ಗ; ಮಠಾಧೀಶರಿಂದ ಯಡಿಯೂರಪ್ಪ ಪರ ಪತ್ರಿಕಾಗೋಷ್ಠಿ
ಶಿವಮೊಗ್ಗ, ಜುಲೈ 21; ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಸುದ್ದಿ ಹಬ್ಬಿದೆ. ವಿವಿಧ ಮಠಾಧೀಶರು ಬಿ. ಎಸ್. ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ. ತವರು ಜಿಲ್ಲೆ ಶಿವಮೊಗ್ಗದಲ್ಲಿಯೂ ಮಠಾಧೀಶರು ಪತ್ರಿಕಾಗೋಷ್ಠಿ ನಡೆಸಿದರು.
ಬುಧವಾರ ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ಮಲೆನಾಡು ವೀರಶೈವ ಮಠಾಧೀಶರ ಪರಿಷರ್ನಿಂದ ಪತ್ರಿಕಾಗೋಷ್ಠಿ ನಡೆಯಿತು. ಪರಿಷತ್ ಅಧ್ಯಕ್ಷರಾದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿದರು.
"ಮಠಗಳು ಸಮಾಜದ ಕೇಂದ್ರಗಳು, ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿವೆ. ಬಸವಣ್ಣನ ದಾಸೋಹ ಹಾಗೂ ಕಾಯಕ ಧ್ಯೇಯ ಅಳವಡಿಸಿಕೊಂಡಿವೆ. ದೆಹಲಿ ಅಕ್ಷರಧಾಮದ ಮಾದರಿಯಲ್ಲಿ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಅಭಿವೃದ್ಧಿಯಾಗಿದೆ. ಅಭಿವೃದ್ಧಿ ಸಿಎಂ ಯಡಿಯೂರಪ್ಪ ಅವರಿಂದ ಆಗುತ್ತಿದೆ" ಎಂದರು.

"ಮೈಸೂರು ರಾಜ್ಯದಿಂದ ಕರ್ನಾಟಕವಾಗಲು ಸಾಕಷ್ಟು ವರ್ಷಗಳು ಬೇಕಾಯಿತು. ಯಡಿಯೂರಪ್ಪ ಕರ್ನಾಟಕ ಸಿಎಂ ಆಗಿರುವುದು ಯೋಗಾಯೋಗಾ. ಯಡಿಯೂರಪ್ಪ ರಾಜಕಾರಣಕ್ಕೆ ಬರುವುದಕ್ಕೆ ಮೊದಲಿನಿಂದಲೂ ಈ ಮಠದ ಭಕ್ತರು. ಸಾಮಾನ್ಯ ಒಬ್ಬ ಕಾರ್ಯಕರ್ತನಾಗಿ ಯಡಿಯೂರಪ್ಪ ರಾಜಕಾರಣ ಆರಂಭಿಸಿದವರು" ಎಂದು ಹೇಳಿದರು.
"ಹೋರಾಟ, ಜನಪರ ಚಿಂತನೆಗಳಿಂದಲೇ ಬೆಳೆದವರು ಯಡಿಯೂರಪ್ಪ. ರಾಜ್ಯದ ಅಭಿವೃದ್ಧಿಗಾಗಿ ಯಡಿಯೂರಪ್ಪ ಕೆಲಸ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ" ಎಂದು ತಿಳಿಸಿದರು.
"ಯಡಿಯೂರಪ್ಪ ಅಭಿವೃದ್ಧಿಯೇ ಗುರಿ ಎಂದು ಹಿಂದಿನಿದಲೂ ಕೆಲಸ ಮಾಡುತ್ತಿದ್ದಾರೆ. ಇದೀಗ ನಾಲ್ಕನೇ ಬಾರಿ ಸಿಎಂ ಅಗಿದ್ದಾರೆ. ಅವರು ಉಪ ಮುಖ್ಯಮಂತ್ರಿಯಾದಾಗಲೇ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಅಡಿಗಲ್ಲು ಹಾಕಿದರು. ಅಭಿವೃದ್ಧಿ ಬಗ್ಗೆ ಅವರಿಗೆ ಇರುವ ಕಾಳಜಿ ಬೇರೆ ರಾಜಕಾರಣಿಗಳಲ್ಲಿ ಕಾಣಲು ಸಾಧ್ಯವಿಲ್ಲ" ಎಂದು ಹೇಳಿದರು.
"ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ ಒಬ್ಬರೇ ಸುತ್ತಾಡಿ ನೆರೆಪರಿಸ್ಥಿತಿಗೆ ಪರಿಹಾರ ಕಲ್ಪಿಸಿದ್ದರು. ಯಾರಿಗೆ ಸಮಸ್ಯೆ ಎದುರಿಸುವ ಶಕ್ತಿ ಇರುತ್ತದೆಯೋ ಅವರನ್ನೇ ಸಮಸ್ಯೆಗಳು ಹುಡುಕಿಕೊಂಡು ಬರುತ್ತವೆ. ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಯಡಿಯೂರಪ್ಪ ಅವರಿಂದಲೇ ಆಗಿದೆ. ರೈಲ್ವೇ ಯೋಜನೆ, ವಿಮಾನ ನಿಲ್ದಾಣ, ಕೈಗಾರಿಕೆಗಳು, ರಸ್ತೆ-ಸೇತುವೆಗಳು, ಸರ್ಕಾರಿ ಮೆಡಿಕಲ್ ಕಾಲೇಜು ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ" ಎಂದು ಸ್ವಾಮೀಜಿ ವಿವರಿಸಿದರು.
"ಯಡಿಯೂರಪ್ಪ ವಯಸ್ಸು, ಆರೋಗ್ಯ ಲೆಕ್ಕಿಸದೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳು ಎಂದರೆ ಹಿಂದೆ ಮಡಿವಂತಿಕೆ ಇತ್ತು. ಆದರೆ ಧಾರ್ಮಿಕ ಕ್ಷೇತ್ರಗಳಲ್ಲೂ ಸಮಾಜಮುಖಿ ಕೆಲಸ ಮಾಡುತ್ತಿವೆ ಎಂಬುದನ್ನು ತೋರಿಸಿಕೊಟ್ಟವರು ಯಡಿಯೂರಪ್ಪ. ಅವರನ್ನು ಇದೀಗ ವಿನಾಕಾರಣ ಅಧಿಕಾರದಿಂದ ಕೆಳಗಿಸಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಆರೋಗ್ಯ ಸರಿ ಇಲ್ಲ ಎಂದು ಅಧಿಕಾರದಿಂದ ಕೆಳಗಿಳಿಸುತ್ತಾರೆಯೇ?" ಎಂದು ಪ್ರಶ್ನಿಸಿದರು.
"ಗೋವಾ ಸಿಎಂ ಮನೋಹರ್ ಪರಿಕ್ಕರ್ ಸಾಯುವವರೆಗೆ ಅಧಿಕಾರ ನಡೆಸಿದ್ದರು. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎನ್ನುವುದಾದರೆ ಇನ್ನೂ ಅವರಲ್ಲಿ ಉತ್ಸಹ ಕುಗ್ಗಿಲ್ಲ. ಅವರಿಗೆ ಇನ್ನೂ ಎರಡು ವರ್ಷ ಅಧಿಕಾರ ಪೂರೈಸಲು ಬಿಟ್ಟರೆ ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಯಡಿಯೂರಪ್ಪ ವೀರಶೈವ ಎಂಬ ಕಾರಣಕ್ಕೆ ಸ್ವಾಮೀಜಿಗಳು ಬೆಂಬಲಿಸುತ್ತಿಲ್ಲ. ಬದಲಿಗೆ ಅವರು ಕೆಲಸಗಾರ ಎಂದು ಬೆಂಬಲಿಸುತ್ತಿದ್ದೇವೆ. ಸಾಮಾನ್ಯ ವ್ಯಕ್ತಿಯೂ ಯಡಿಯೂರಪ್ಪ ಬೆಂಬಲಿಸುತ್ತಿದ್ದಾರೆ. ನಾವು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೇವೆ ಎಂಬ ಮನೋಭಾವ ಬೇಡ. ಯಡಿಯೂರಪ್ಪ ಅವರ ಕನಸು ನನಸಾಗಲು ಅವಕಾಶ ಮಾಡಿಕೊಡಿ ಎಂಬುದು ನಮ್ಮ ಒತ್ತಾಯವಾಗಿದೆ" ಎಂದರು.












Click it and Unblock the Notifications