ಸಿದ್ದರಾಮಯ್ಯ ಬಂದರೆ ಸಂತೋಷ, ಬರದೆ ಇದ್ದರೆ ಬೇಡ; ಈಶ್ವರಪ್ಪ
ಶಿವಮೊಗ್ಗ, ಫೆಬ್ರವರಿ 09; "ಕುರುಬರ ಎಸ್ಟಿ ಮೀಸಲಾತಿ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದರೆ ಸಂತೋಷ. ಬರದಿದ್ದರೆ ಬೇಡ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು. ಭಾನುವಾರ ನಡೆದ ಸಮಾರೋಪ ಸಮಾರಂಭಕ್ಕೆ ಸಿದ್ದರಾಮಯ್ಯ ಗೈರಾಗಿದ್ದರು.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, "ಸಿದ್ದರಾಮಯ್ಯ ಅವರು ಮೊದಲಿಗೆ ನನ್ನನ್ನು ಸಮಾವೇಶಕ್ಕೆ ಕರೆದಿಲ್ಲ ಎಂದು ಆರೋಪಿಸಿದ್ದರು. ಶ್ರೀ ನಿರಂಜನಾನಂದಪುರ ಸ್ವಾಮೀಜಿ, ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಅವರು ಕರೆ ಮಾಡಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದರು" ಎಂದರು.
"ನಾನು ಕೂಡ ಕರೆ ಮಾಡಿ ಅವರನ್ನು ಆಹ್ವಾನಿಸಿದ್ದೆ. ಈಗ ಹೇಳಿಕೆ ಬದಲಿಸಿದ್ದಾರೆ. ಹೋರಾಟದ ಹಿಂದೆ ಆರ್ಎಸ್ಎಸ್ ಇದೆ ಎಂದು ಆಪಾದಿಸುತ್ತಿದ್ದಾರೆ. ಅವರು ಹೋರಾಟಕ್ಕೆ ಬಂದರೆ ಸಂತೋಷ. ಬರದೆ ಇದ್ದರೆ ಬೇಡ" ಎಂದು ಹೇಳಿದರು.

ಐತಿಹಾಸಿಕ ದಿನ; "ಎಸ್ಟಿ ಮೀಸಲಾತಿಗಾಗಿ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಕುರುಬರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಇಷ್ಟೊಂದು ಪ್ರಮಾಣದಲ್ಲಿ ಕುರುಬರು ಒಟ್ಟಿಗೆ ಸೇರಿದ್ದು ಇದೆ ಮೊದಲು. ಹಾಗಾಗಿ ಫೆಬ್ರವರಿ 7 ಕುರುಬರ ಪಾಲಿಗೆ ಐತಿಹಾಸಿಕ ದಿನವಾಗಿದೆ" ಎಂದು ಈಶ್ವರಪ್ಪ ಬಣ್ಣಿಸಿದರು.
"ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕುರುಬರಿಗೆ ಎಸ್ಟಿ ಮೀಸಲಾತಿ ಇದೆ. ಇದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಿಗಬೇಕು. ಈ ಸಂಬಂಧ ಸಂಪುಟದಲ್ಲಿ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು" ಎಂದು ಈಶ್ವರಪ್ಪ ತಿಳಿಸಿದರು.
ಬಿಜೆಪಿಗಿಲ್ಲ ಕ್ರಮದ ಅಧಿಕಾರ; "ಮುಖ್ಯಮಂತ್ರಿ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಬಿಜೆಪಿಗೆ ಇಲ್ಲ. ಎಂಎಲ್ಎಲ್, ಎಂಎಲ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರ ನಾಯಕರಿಗೆ ಮಾತ್ರ ಇದೆ. ಈಗಾಗಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಯತ್ನಾಳ್ ವಿರುದ್ಧ ಕೇಂದ್ರ ಬಿಜೆಪಿಗೆ ದೂರು ಸಲ್ಲಿಸಿದ್ದಾರೆ" ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.












Click it and Unblock the Notifications