'ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಬಂದಿರುವುದು ಚಿತ್ರದ ಪ್ರಚಾರಕ್ಕಲ್ಲ'
ಶಿವಮೊಗ್ಗ, ಏಪ್ರಿಲ್ 11: ನಟ ಶಿವರಾಜ್ ಕುಮಾರ್ ತಮ್ಮ ಅಭಿನಯದ ಕವಚ' ಚಿತ್ರದ ಪ್ರಚಾರ ಹೆಸರಿನಲ್ಲಿ ಕವಚ ಹಾಕಿಕೊಂಡು ರಾಜಕೀಯ ಮಾಡಲು ಶಿವಮೊಗ್ಗಕ್ಕೆ ಬಂದಿದ್ದಾರೆ. ಅವರಿಗೆ ರಾಜಕೀಯ ಮಾಡುವ ಆಸೆ ಇದ್ದರೆ ಧರಿಸಿರುವ ಕವಚ ತೆಗೆದಿಟ್ಟು ರಾಜಕೀಯ ಮಾಡಲಿ. ಅದು ಬಿಟ್ಟು ಚಿತ್ರವನ್ನು ಮುಂದಿಟ್ಟುಕೊಂಡು ಅದರ ಪ್ರಚಾರ ಮಾಡುತ್ತೇನೆಂದು ರಾಜಕೀಯ ಪ್ರಚಾರ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಹಾಗೂ ಸೊರಬ ಕ್ಷೇತ್ರ ಶಾಸಕ ಕುಮಾರ್ ಬಂಗಾರಪ್ಪ ಟೀಕಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಜ್ ಕುಮಾರ್ ಹಾಗೂ ಸಹೋದರಿ ಗೀತಾ ಶಿವರಾಜ್ ಕುಮಾರ್ ವಿರುದ್ಧ ಹರಿಹಾಯ್ದ ಕುಮಾರ್ ಬಂಗಾರಪ್ಪ, ಚುನಾವಣೆ ಸಮೀಪಿಸುತ್ತಿದ್ದಂತೆ ಇವರಿಬ್ಬರು ಕ್ಷೇತ್ರದಲ್ಲಿ ಪ್ರತ್ಯಕ್ಷರಾಗುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಮನೆ ಮಾಡುತ್ತೇನೆ, ಜನರ ಸೇವೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಆನಂತರ ಅವರು ಕ್ಷೇತ್ರದಲ್ಲಿ ಕಾಣಸಿಗಲಿಲ್ಲ. ಇದೀಗ ಮಧು ಬಂಗಾರಪ್ಪ ಪರ ಪ್ರಚಾರಕ್ಕೆ ಆಗಮಿಸಿದ್ದಾರೆ ಎಂದು ದೂರಿದರು.
'ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ'
ರಾಜಕೀಯದಲ್ಲಿ ದ್ವೇಷವಿಟ್ಟುಕೊಂಡು ಮಾತನಾಡಬಾರದು ಎಂದು ಚಿತ್ರನಟ ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ. ಒಮ್ಮೆ ಮಂಡ್ಯಕ್ಕೆ ಹೋಗಿ ಅಲ್ಲಿನ ರಾಜಕೀಯ ನೋಡಲಿ. ಆಗ ಯಾರು ದ್ವೇಷ ಮಾಡುತ್ತಿದ್ದಾರೆ ಎಂಬುದು ಶಿವರಾಜ್ ಕುಮಾರ್ಗೆ ಅರಿವಾಗುತ್ತದೆ ಎಂದು ತಿರುಗೇಟು ನೀಡಿದರು.
ಮತದಾರರು ಮತ್ತೆ ಮತ್ತೆ ಸೋಲಿಸಬೇಕು
ತಾವು ಸೋತರು ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿರುವುದಾಗಿ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಅವರು ಚುನಾವಣೆಯಲ್ಲಿ ಸೋತರೂ ಪವರ್ ಫುಲ್ ಇದ್ದಾರೆ ಎಂದಾದರೆ ಅವರನ್ನು ಮತದಾರರು ಮತ್ತೆ ಮತ್ತೆ ಸೋಲಿಸಬೇಕು ಎಂದು ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಕಂಡ ಕಂಡವರನ್ನೆಲ್ಲಾ ಅಪ್ಪ, ಅಣ್ಣ ಅನ್ನೋ ಮಧು: ಕುಮಾರ್ ಬಂಗಾರಪ್ಪ ವಾಗ್ದಾಳಿ..!
ಚುನಾವಣಾ ಅಸ್ತ್ರವಾಗಿ ಮಂಗನ ಕಾಯಿಲೆ
ಮಂಗನ ಕಾಯಿಲೆಯನ್ನೂ ಚುನಾವಣಾ ಅಸ್ತ್ರವನ್ನಾಗಿ ಮಧು ಬಂಗಾರಪ್ಪ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದ ಕುಮಾರ್ ಬಂಗಾರಪ್ಪ, ಕಾಯಿಲೆಯಿಂದ ಮೃತಪಟ್ಟವರ ಹೆಸರಿನಲ್ಲಿ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇಂಜಿನಿಯರಿಂಗ್ ಪದವಿ ಏಕೆ ಬೇಕು?
ಬಂಗಾರಪ್ಪ ಅವರ ಸ್ಮಾರಕ ಕುರಿತಂತೆ ಮಾತನಾಡಿದ ಕುಮಾರ್ ಬಂಗಾರಪ್ಪ, ಸ್ಮಾರಕ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಮಕ್ಕಳು ಇಂಜಿನಿಯರಿಂಗ್ ಪದವಿ ಪೂರೈಸಿದ ಬಳಿಕ ಸ್ಮಾರಕ ನಿರ್ಮಿಸುತ್ತಾರೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಇಂಜಿನಿಯರಿಂಗ್ ಪದವಿ ಏಕೆ ಬೇಕು? ಒಂದು ವೇಳೆ ಪದವಿ ಪೂರೆಸದಿದ್ದರೆ ಸ್ಮಾರಕ ನಿರ್ಮಾಣ ಆಗುವುದಿಲ್ಲವೇ? ಎಂದು ಕುಮಾರ್ ಬಂಗಾರಪ್ಪ ಪ್ರಶ್ನಿಸಿದರು.
24 ಗಂಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡ್ತಾರೆ
ನನ್ನ ಮಕ್ಕಳಾದ ಅರ್ಜುನ್ ಹಾಗೂ ಲಾವಣ್ಯ ಬಂಗಾರಪ್ಪ ಇಬ್ಬರೂ ಇಂಜಿನಿಯರಿಂಗ್ ಪದವಿ ಮಾಡುತ್ತಿದ್ದಾರೆ. ಅವರು ಕೂಡ ಬಂಗಾರಪ್ಪನವರ ಮೊಮ್ಮಕ್ಕಳೇ. ಮನಸ್ಸು ಮಾಡಿದರೆ 24 ಗಂಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತಾರೆ. ಆದರೆ ಇದು ರಾಜಕೀಯ ಪ್ರಶ್ನೆಯಲ್ಲ. ಸ್ಮಾರಕ ನಿರ್ಮಾಣ ಮಾಡುತ್ತಿರುವುದು ಬಂಗಾರಪ್ಪನವರಿಗೆ ನೀಡುತ್ತಿರುವ ಗೌರವ ಎಂದು ಕುಮಾರ್ ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.