ಶಿವಣ್ಣ ಮೂರನೇ ಕಣ್ಣು ತೆರೆದರೆ ಏನು ಆಗಲ್ಲ : ಕು.ಬಂಗಾರಪ್ಪ
ಶಿವಮೊಗ್ಗ, ಮಾ. 22 : ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಧಾನಗೊಂಡಿರುವ ದಿ.ಎಸ್.ಬಂಗಾರಪ್ಪ ಪುತ್ರ ಕುಮಾರ್ ಬಂಗಾರಪ್ಪ ನಟ ಶಿವರಾಜ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವಣ್ಣ ಮೂರನೇ ಕಣ್ಣು ತೆರೆದರೆ ಏನೂ ಆಗುವುದಿಲ್ಲ ಎಂದು ಹೇಳಿರುವ ಅವರು, ಶಿವಣ್ಣ ಡಾ.ರಾಜ್ ಅಭಿಮಾನಿಗಳ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.
ಶನಿವಾರ ಶಿವಮೊಗ್ಗದಲ್ಲಿ ಬೆಂಬಲಿಗರ ಸಭೆ ನಡೆಸಿದ ಕುಮಾರ್ ಬಂಗಾರಪ್ಪ ಭಾವ ಶಿವರಾಜ್ ಕುಮಾರ್ ಮತ್ತು ಸಹೋದರ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಡಾ.ರಾಜ್ ಕುಟುಂಬವನ್ನು ರಾಜಕೀಯಕ್ಕೆ ಕರೆತಂದು ಶಿವಣ್ಣ ದೊಡ್ಡ ತಪ್ಪು ಮಾಡಿದ್ದಾರೆ. ಇದರಿಂದ ಅವರ ಕುಟುಂದಬದ ಘನತೆ ಕುಸಿಯುತ್ತದೆ. ಇದರಿಂದಾಗಿ ಶಿವಣ್ಣ ಡಾ.ರಾಜ್ ಅಭಿಮಾನಿಗಳ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಮಧು ಬಂಗಾರಪ್ಪ ತಾಯಿಯ ಹೆಸರು ಹೇಳಿಕೊಂಡು ಮೊಸಳೆ ಕಣ್ಣೀರು ಸುರಿಸಿ ರಾಜಕೀಯ ಮಾಡುತ್ತಿದ್ದಾರೆ. ಅವರಿಂದಾಗಿ ಶಿವಣ್ಣ ಗೀತಾ ಶಿವರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದಾರೆ. ಶಿವಣ್ಣ ಮೂರನೇ ಕಣ್ಣು ಬಿಟ್ಟರೆ ಹಾಗಾಗುತ್ತದೆ, ಹೀಗಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ಶಿವಣ್ಣನ ಆಟ ಏನೂ ನಡೆಯುವುದಿಲ್ಲ. ಮಧು ಬಂಗಾರಪ್ಪ ಅವರನ್ನು ಕ್ಷೇತ್ರದ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು.
ಶಿವಣ್ಣ ನನ್ನ ಭಾವ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ, ಮಧು ಬಂಗಾರಪ್ಪ ಅವರ ಮಾತಿಗೆ ಮರುಳಾಗಿ ಅವರು ಗೀತಾ ಶಿವರಾಜ್ ಕುಮಾರ್ ಅವರನ್ನು ಚುನಾವಣೆಗೆ ಕರೆತಂದಿದ್ದಾರೆ. ಇದರಿಂದ ಅವರ ಕುಟುಂಬದ ಘನತೆಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.
ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ : ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ 26ರ ವರೆಗೆ ಕಾಯುತ್ತೇನೆ ಪಕ್ಷದಿಂದ ಟಿಕೆಟ್ ದೊರೆಯುವ ವಿಶ್ವಾಸವಿದೆ. ಪಕ್ಷ ಟಿಕೆಟ್ ನೀಡದಿದ್ದರೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಬೆಂಬಲಿಗರ ಸಮ್ಮಖದಲ್ಲಿ ಕುಮಾರ್ ಬಂಗಾರಪ್ಪ ಘೋಷಿಸಿದರು. ಇಂದು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದು, ಪಕ್ಷದ ಟಿಕೆಟ್ ದೊರೆಯದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಅವರು ಹೇಳಿದರು. [ಶಿವಮೊಗ್ಗದಲ್ಲಿ ಬಂಗಾರಪ್ಪ, ಯಡಿಯೂರಪ್ಪ ಫ್ಯಾಮಿಲಿ ಫೈಟ್]
ಕುಮಾರ್ ಬಂಗಾರಪ್ಪ ಅವರ ನಿರ್ಧಾರದಿಂದ ಜಿಲ್ಲೆಯ ಚುನಾವಣಾ ಕಣದ ಚಿತ್ರಣವೇ ಬದಲಾಗಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪರ್ಧೆಗೆ ಇಳಿದಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಮಂಜುನಾಥ ಭಂಡಾರಿ ಸ್ಪರ್ಧೆಗೆ ಇಳಿದಿದ್ದು, ಕುಮಾರ್ ಬಂಗಾರಪ್ಪ ಸ್ಪರ್ಧಿಸಿದರೆ ಬಂಗಾರಪ್ಪ ಬೆಂಬಲಿಗರ ಮತಗಳು ವಿಭಜನೆಯಾಗುವ ಆತಂಕವಿದೆ.












Click it and Unblock the Notifications