ಶಿಕಾರಿಪುರದಲ್ಲಿ ಸಿದ್ದರಾಮಯ್ಯ ಪ್ರಚಾರ : 'ಮಿಸ್ಟರ್ ಯಡಿಯೂರಪ್ಪ' ಇತ್ತ ನೋಡಿ!
Recommended Video

ಶಿವಮೊಗ್ಗ, ಮೇ 04 : ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಚುನಾವಣೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ತವರು ನೆಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಣಕಹಳೆ ಊದಿದರು. ಭಾಷಣದ ಉದ್ದಕ್ಕೂ 'ಮಿಸ್ಟರ್ ಯಡ್ಡಿಯೂರಪ್ಪ' ಎಂದು ಕರೆಯುವ ಮೂಲಕ ಕುಟುಕಿದರು.
ಶುಕ್ರವಾರ ಸಿದ್ದರಾಮಯ್ಯ ಶಿಕಾರಿಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿ ಜಿ.ಬಿ.ಮಾಲತೇಶ್ ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು. ಯಡಿಯೂರಪ್ಪ ವಿರುದ್ಧ ತವರು ನೆಲದಲ್ಲಿ ಗುಡುಗಿದರು.
ಭಾಷಣದ ಉದ್ದಕ್ಕೂ ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಅಣಕಿಸಿದರು. ತಾವು ನೀಡಿರುವ ಸರ್ಕಾರಿ ಕಾರ್ಯಕ್ರಮಗಳು, ಭಾಗ್ಯಗಳು ಜನರ ಮನಸ್ಸಿಗೆ ತಟ್ಟುವಂತೆ ನೋಡಿಕೊಂಡರು. ಸಮಾವೇಶಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

'ಬೃಹತ್ ಸಂಖ್ಯೆಯಲ್ಲಿ ಬಂದಿರುವ ನಿಮ್ಮನ್ನು ಕಂಡರೆ ಯಡಿಯೂರಪ್ಪ ವಿರುದ್ಧ ನಿಮ್ಮ ಆಕ್ರೋಶವಿದೆ ಎಂದು ಸಹಜವಾಗಿಯೇ ಅನ್ನಿಸುತ್ತದೆ. ಅದನ್ನು ಮತಗಳಾಗಿ ಪರಿವರ್ತಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಾಲತೇಶ್ ಗೆಲ್ಲಿಸಿ' ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು
* ಮಿಸ್ಟರ್ ಯಡ್ಡಿಯೂರಪ್ಪ ಶಿಕಾರಿಪುರಕ್ಕೆ ಅಗೌರವ ತಂದಿದ್ದಾರೆ. ಇಂತಹ ಭ್ರಷ್ಟ ಮಾಜಿ ಮುಖ್ಯಮಂತ್ರಿಯನ್ನು ಸೋಲಿಸುವ ಮೂಲಕ ರಾಜಕೀಯ ನಿವೃತ್ತಿ ಕೊಡಿಸಿ ಎಂದು ಜನರಲ್ಲಿ ಮನವಿ ಮಾಡಿದರು.
* ಮುಖ್ಯಮಂತ್ರಿಯಾಗಿದ್ದಾಗ ಜೈಲು ಸೇರಿದ ಯಡಿಯೂರಪ್ಪ ಶಿಕಾರಿಪುರದ ಜನರ ಮರ್ಯಾದೆ ತೆಗೆದಿದ್ದಾರೆ. ಅವರನ್ನು ಮತ್ತೆ ಅಧಿಕಾರಕ್ಕೆ ತರುತ್ತೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
* ಬೂಕನಕೆರೆಯಿಂದ ಬಂದಾಗ ಎಷ್ಟು ಆಸ್ತಿ ಇತ್ತು?. ಈಗ ಬಿಎಸ್ ವೈ ಆಸ್ತಿ ಎಷ್ಟು ಆಗಿದೆ? ಇದನ್ನು ಯಡಿಯೂರಪ್ಪ ಸ್ಪಷ್ಟಪಡಿಸಲಿ ಎಂದು ಸವಾಲು ಎಸೆದರು.
* ನನ್ನ ಮೇಲೆ ಮತ್ತು ನನ್ನ ಸರ್ಕಾರದ ಮೇಲೆ ಗೂಬೆ ಕೂರಿಸ್ತೀರಾ ಮಿಸ್ಟರ್ ಯಡ್ಡಿಯೂರಪ್ಪ. ನಿಮ್ಮ ಕ್ಷೇತ್ರದತ್ತ ಒಮ್ಮೆ ನೋಡಿ ಎಂದು ಗುಡುಗಿದರು.
* ಮೋದಿ ಕರ್ನಾಟಕಕ್ಕೆ ನೂರು ಬಾರಿ ಬಂದು ಹೋದರು ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಬಿಎಸ್ ವೈ ಅವರ ಅಪ್ಪನಾಣೆ ಅವರು ಮುಖ್ಯಮಂತ್ರಿಯಾಗಲ್ಲ ಎಂದು ಭವಿಷ್ಯ ನುಡಿದರು.
* ಮಿಸ್ಟರ್ ಯಡ್ಡಿಯೂರಪ್ಪ ಅಧಿಕಾರದಲ್ಲಿದ್ದಾಗ ರೈತ ಸಾಲ ಮನ್ನ ಮಾಡಿ ಎಂದು ಉಗ್ರಪ್ಪ ಕೇಳಿದಾಗ ಸರ್ಕಾರದ ಬಳಿ ನೋಟ್ ಪ್ರಿಂಟಿಂಗ್ ಮಿಷನ್ ಇಲ್ಲ ಎಂದು ಹೇಳಿದ್ದರು. ಈಗ 1000 ಕೋಟಿ ಹಣ ರೈತ ಸಾಲ ಮನ್ನಾ ಮಾಡ್ತೀನಿ ಎಂದು ಹೇಳುತ್ತಾರೆ. ನಾಚಿಕೆ ಆಗಬೇಕು ಎಂದು ಟೀಕಿಸಿದರು.












Click it and Unblock the Notifications