ಬಿಜೆಪಿ ಸರ್ಕಾರ ರಚನೆ ಬಗ್ಗೆ ರವಿ ಕುಮಾರ್ ಹೇಳಿದ್ದೇನು?
ಶಿವಮೊಗ್ಗ, ಜುಲೈ 01 : 'ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಬಿಜೆಪಿ ಮಧ್ಯಂತರ ಚುನಾವಣೆ ಬಯಸುವುದಿಲ್ಲ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ಸೋಮವಾರ ಶಿವಮೊಗ್ಗದಲ್ಲಿ ಮಾತನಾಡಿದ ರವಿ ಕುಮಾರ್ ಅವರು, 'ಭಾರತೀಯ ಜನತಾ ಪಾರ್ಟಿ ಮಧ್ಯಂತರ ಚುನಾವಣೆಯನ್ನು ಬಯಸದ ಪಕ್ಷ. ಮೊನ್ನೆ ತಾನೇ ಲೋಕಸಭಾ ಚುನಾವಣೆ ನಡೆದಿದೆ. 12-13 ತಿಂಗಳ ಕೆಳಗೆ ಚುನಾವಣೆ ನಡೆದಿದೆ' ಎಂದರು.
'ಮಧ್ಯಂತರ ಚುನಾವಣೆ ನಡೆದರೆ ರಾಜ್ಯದ ಖಜಾನೆಗೆ ಮತ್ತೊಮ್ಮೆ ಹೊರೆ ಆಗುತ್ತದೆ. ದೇಶದ ಖಜಾನೆಗೆ ಹೊರೆಯಾಗಲಿದೆ. ಚುನಾವಣೆ ನಡೆಸುವುದು ಮಾತ್ರ ಕೆಲಸವಲ್ಲ. ಹಾಗಾಗಿ ಮತ್ತೊಮ್ಮೆ ಚುನಾವಣೆಯನ್ನು ಬಿಜೆಪಿ ಬಯಸುವುದಿಲ್ಲ' ಎಂದು ತಿಳಿಸಿದರು.

'ಯಾವ ಯಾವ ಶಾಸಕರು ರಾಜೀನಾಮೆ ನೀಡುತ್ತಾರೋ ನೀಡಲಿ. ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದರೆ ಬಿಜೆಪಿ ಸರ್ಕಾರ ರಚನೆ ಮಾಡಲು, ಆಡಳಿತ ನಡೆಸಲು ಮುಂದಾಗುತ್ತದೆ' ಎಂದು ರವಿಕುಮಾರ್ ಸ್ಪಷ್ಟಪಡಿಸಿದರು.
ಸೋಮವಾರ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕರ್ನಾಟಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಲಿದೆಯೇ? ಎಂಬ ಅನುಮಾನ ಉಂಟಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿದ್ದು ಅಲ್ಲಿಂದಲೇ ರಾಜ್ಯದ ಬೆಳವಣಿಗೆ ಕುರಿತು ಟ್ವೀಟ್ ಮಾಡಿದ್ದಾರೆ. 'ಅಮೇರಿಕದ ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದೆ. ರಾಜ್ಯದ ಎಲ್ಲ ವಿದ್ಯಮಾನಗಳನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ BJP ಯ ಪ್ರಯತ್ನ 'ನಿರಂತರ ಹಗಲುಗನಸು' ಎಂದು ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ.












Click it and Unblock the Notifications