ಆನೆ ದಂತ ನಾಪತ್ತೆ : ಶಿವಮೊಗ್ಗ ಎಸ್ಪಿ ಕಚೇರಿಗೆ ಎಡಿಜಿಪಿ ಭೇಟಿ
ಶಿವಮೊಗ್ಗ, ನವೆಂಬರ್ 30 : ಎಡಿಜಿಪಿ ಕಮಲ್ ಪಂತ್ ಅವರು ಇಂದು ಶಿವಮೊಗ್ಗ ಎಸ್ಪಿ ಕಚೇರಿಗೆ ಭೇಟಿ ನೀಡಿದರು. ಎಸ್ಪಿ ಕಚೇರಿಯಲ್ಲಿದ್ದ ಆನೆ ದಂತ ನಾಪತ್ತೆಯಾದ ಪ್ರಕರಣ ಭಾರೀ ಸಂಚಲನ ಮೂಡಿಸಿದೆ.
ಗುರುವಾರ ಕಮಲ್ ಪಂತ್ ಎಸ್ಪಿ ಕಚೇರಿಗೆ ಭೇಟಿ ನೀಡಿ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಜೊತೆ ಮಾತುಕತೆ ನಡೆಸಿದರು. ದಂತ ನಾಪತ್ತೆಯಾಗಿರುವ ಪ್ರಕರಣದ ಬಗ್ಗೆ ಯಾವ ಮಟ್ಟದಲ್ಲಿ ತನಿಖೆ ನಡೆಸಬೇಕು? ಎಂದು ಚರ್ಚಿಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕಮಲ್ ಪಂತ್ ಅವರು, 'ದಂತ ಹುಡುಕುವ ಪ್ರಯತ್ನ ಎಸ್ಪಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಸಿಓಡಿ ತನಿಖೆ ನಡೆಸುವ ಕುರಿತು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ' ಎಂದು ಹೇಳಿದರು.

ಭಾರೀ ಚರ್ಚೆ : ಶಿವಮೊಗ್ಗ ಎಸ್ಪಿ ಕಚೇರಿಯಿಂದ ಆನೆ ದಂತ ನಾಪತ್ತೆಯಾದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. 2011ರ ಫೆಬ್ರವರಿ ತನಕ ಕಚೇರಿಯಲ್ಲಿದ್ದ ದಂತ, ನಂತರ ಕಾಣೆಯಾಗಿದೆ. ಕೆಲವು ದಿನಗಳ ಹಿಂದೆ ಈ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ಎಸ್ಪಿ ಅಭಿನವ್ ಖರೆ ಅವರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಎಸ್ಪಿ ನೇತೃತ್ವದಲ್ಲಿ ಹುಡುಕಾಟ ನಡೆಸಿದರೂ ದಂತ ಪತ್ತೆಯಾಗಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.












Click it and Unblock the Notifications