ಶಿವಮೊಗ್ಗದಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ
ಶಿವಮೊಗ್ಗ, ಮೇ 19: ಲಾಕ್ ಡೌನ್ ಸಡಿಲಿಕೆ ಬಳಿಕ ರಾಜ್ಯಾದ್ಯಂತ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಅಂತರ್ ಜಿಲ್ಲಾ ಸಂಚಾರ ಸೇವೆಯನ್ನು ಆರಂಭಿಸಲಾಗಿದೆ. ಇಂದಿನಿಂದ ಲಾಕ್ ಡೌನ್ 4.0 ಆರಂಭಗೊಂಡ ಬೆನ್ನಲ್ಲೇ ಕೆಎಸ್ಆರ್ಟಿಸಿ ಸಂಸ್ಥೆ ಬಸ್ ಸೇವೆಯನ್ನೂ ಆರಂಭಿಸಿದೆ.
ಶಿವಮೊಗ್ಗ ವಿಭಾಗದಿಂದ ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಹೋಗಲು ಒಟ್ಟು 50 ಬಸ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಬೆಂಗಳೂರಿಗೆ ಹೆಚ್ಚಿನ ಬಸ್ ಬಿಡಲಾಗಿದೆ. ಬೆಂಗಳೂರಿಗೆ ಇದುವರೆಗೂ 6 ಬಸ್ ಗಳನ್ನು ಬಿಡಲಾಗಿದೆ. ಅದರಂತೆ ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಕೇಂದ್ರ ವಿಭಾಗಕ್ಕೆ ತಲಾ ಒಂದೊಂದು ಕೆಎಸ್ಆರ್ಟಿಸಿ ಬಸ್ ಗಳನ್ನು ಬಿಡಲಾಗಿದೆ.
ಗ್ರಾ.ಪಂ.ಚುನಾವಣೆ ಮುಂದೂಡಿಕೆಗೆ ಶಿವಮೊಗ್ಗ ಗ್ರಾ.ಪಂ.ಸದಸ್ಯರ ವಿರೋಧ
ಪ್ರಯಾಣಿಕರಿಗೆ, ಬಸ್ ಗಳಿಗೆ ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಹಾಕಲಾಗುತ್ತಿದೆ. ಮಾಸ್ಕ್ ಧರಿಸುವ ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು, ಒಂದು ಬಸ್ ನಲ್ಲಿ ಕೇವಲ 30 ಜನರಿಗೆ ಮಾತ್ರ ಅವಕಾಶವಿದೆ.
ಬೆಳಿಗ್ಗೆ 7 ರಿಂದ ಸಾಯಂಕಾಲ 7 ರ ವರೆಗೆ ಬಸ್ ಓಡಾಟ ಇರಲಿದ್ದು, ಹೆಚ್ಚಿನ ಬೇಡಿಕೆ ಇದ್ದ ಊರ ಕಡೆ ಬಸ್ ಬಿಡುವುದಾಗಿ ಕೆಎಸ್ಆರ್ಟಿಸಿ ವಿಭಾಗೀಯ ಸಂಚಾರಿ ಅಧಿಕಾರಿ ಸತೀಶ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿಗೆ ಹೋಗುವ 30 ಜನರು ತುಂಬಿದಲ್ಲಿ ಅವರನ್ನು ನೇರವಾಗಿ ಬೆಂಗಳೂರು ನಗರಕ್ಕೆ ಬಿಡಲಾಗುತ್ತದೆ. ಮಧ್ಯದಲ್ಲಿ ಬೀರೂರು, ಕಡೂರು, ಅರಸೀಕರೆ ಎಲ್ಲಿಯೂ ಸ್ಟಾಪ್ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕಡೂರು, ಬೀರೂರು ಗಳಿಗೂ ಪ್ರತ್ಯೇಕ ಬಸ್ ಗಳ ಸಂಚಾರವನ್ನು ಮಾಡಿಕೊಂಡಿದ್ದೇವೆ. ಆನ್ ಲೈನ್ ನಲ್ಲಿ ಟಿಕೆಟ್ ಪಡೆಯುವ ಅವಕಾಶವಿದ್ದರೂ ಸಹ ಬಸ್ ಗಳಲ್ಲೂ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.