ಶಿವಮೊಗ್ಗ : ಅಕ್ರಮ ಕಲ್ಲು ಗಣಿಗಾರಿಕೆ ಮಾಡಿದರೆ ಗಡಿಪಾರು
ಶಿವಮೊಗ್ಗ, ಆಗಸ್ಟ್ 29 : "ಜಿಲ್ಲೆಯಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆಯನ್ನು ಹಲವು ಬಾರಿ ದಾಳಿ ನಡೆಸಿ ಸ್ಥಗಿತಗೊಳಿಸಿದ್ದರೂ, ಮತ್ತೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ವ್ಯಕ್ತಿಗಳ ವಿರುದ್ಧ ಗಡಿಪಾರು ಸೇರಿದಂತೆ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮರಳು ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹಲವು ಸೂಚನೆಗಳನ್ನು ನೀಡಿದ್ದಾರೆ. "ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ವಲಯಗಳಲ್ಲಿ ಕ್ರಶರ್, ಕ್ವಾರಿ ಸೇರಿದಂತೆ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು" ಎಂದು ಸೂಚನೆ ನೀಡಿದರು.
"ಅಕ್ರಮ ಗಣಿಗಾರಿಕೆ ಕ್ವಾರಿಗಳ ಮೇಲೆ ದಾಳಿ ನಡೆಸಿ ಕ್ರಮಗಳನ್ನು ಕೈಗೊಂಡಿದ್ದರೂ, ಹಲವು ಮಂದಿ ಅದೇ ಕೃತ್ಯವನ್ನು ಮುಂದುವರೆಸಿರುವುದು ಗಮನಕ್ಕೆ ಬಂದಿದೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಭಾರೀ ಪ್ರಮಾಣದ ದಂಡ ವಿಧಿಸುವುದು ಮಾತ್ರವಲ್ಲದೆ ಗಡಿಪಾರು ಮಾಡಲು ಪ್ರಸ್ತಾವನೆಗಳನ್ನು ಸಲ್ಲಿಸಬೇಕು" ಎಂದರು.

"ಜಿಲ್ಲೆಯ ಮರಳನ್ನು ಬೇರೆ ಜಿಲ್ಲೆಗಳಿಗೆ ಸಾಗಾಟ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ. ಈಗಾಗಲೇ ಜಪ್ತಿ ಮಾಡಲಾಗಿರುವ ಮರಳು, ಜಂಬಟಿಗೆ ಇತ್ಯಾದಿಗಳನ್ನು ಸರ್ಕಾರದ ನಿರ್ಮಾಣ ಏಜೆನ್ಸಿಗಳಿಗೆ ಬಳಕೆಗಾಗಿ ನೀಡಬಹುದಾಗಿದೆ. ಸರ್ಕಾರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ನಿರ್ಮಿಸುವ ಫಲಾನುಭವಿಗಳಿಗೆ ಸಹ ಅಂತಹ ಮರಳನ್ನು ನೀಡಬಹುದಾಗಿದೆ" ಎಂದು ಸ್ಪಷ್ಟಪಡಿಸಿದರು.
ಮರಳು ಕೊರತೆ ಇಲ್ಲ: ಸರ್ಕಾರದ ವಿವಿಧ ಯೋಜನೆಗಳ ಅನುಷ್ಟಾನಕ್ಕೆ ಮರಳಿನ ಕೊರತೆ ಇರುವುದಿಲ್ಲ. ಕೆಲವು ಇಲಾಖೆಗಳಿಗೆ ಪ್ರತ್ಯೇಕ ಮರಳಿನ ಬ್ಲಾಕ್ಗಳನ್ನು ಗುರುತಿಸಿ ನೀಡಲಾಗಿದ್ದು, ಖಾಸಗಿ ಮರಳಿನ ಬ್ಲಾಕ್ಗಳಲ್ಲಿ ಸಹ ಸರ್ಕಾರಿ ಇಲಾಖೆಗಳಿಗೆ ಕೋಟಾ ನಿಗದಿಪಡಿಸಲಾಗಿದೆ. ಈ ಮರಳನ್ನು ಇಲಾಖೆಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.












Click it and Unblock the Notifications