'ಮಧು ಬಂಗಾರಪ್ಪ ನನ್ನ ಮೊಮ್ಮಗ ಇದ್ದ ಹಾಗೆ, ಅವರ ಗೆಲುವಿಗೂ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ'
ಶಿವಮೊಗ್ಗ, ಮಾರ್ಚ್ 17:ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಧುಬಂಗಾರಪ್ಪರ ಗೆಲುವಿಗೆ ಕಾಗೋಡು ತಿಮ್ಮಪ್ಪನವರೊಂದಿಗೆ ಚರ್ಚಿಸಿ ಶಕ್ತಿ ಮೀರಿ ಶ್ರಮಿಸಲಾಗುತ್ತದೆ ಎಂದು ಜೆಡಿಎಸ್ ಮುಖಂಡ ದೇವೇಗೌಡ ಹೇಳಿದ್ದಾರೆ.
ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಮೊಮ್ಮಕ್ಕಳ ಗೆಲುವಿಗೆ ಹೇಗೆ ಶಕ್ತಿ ಮೀರಿ ಶ್ರಮಿಸಲಾಗುತ್ತಿದೆ ಎಂದು ಪ್ರಚಾರವಾಗುತ್ತಿದೆಯೋ, ಹಾಗೆಯೇ ಮಧು ಬಂಗಾರಪ್ಪನವರೂ ಸಹ ನನ್ನ ಮೊಮ್ಮಗ ಇದ್ದ ಹಾಗೆ. ಅವರ ಗೆಲುವಿಗೂ ಶಕ್ತಿ ಮೀರಿ ಶ್ರಮವಹಿಸಲಾಗುತ್ತದೆ ಎಂದರು.
ಬಿಎಸ್ ವೈ-ಡಿಕೆಶಿ ದೋಸ್ತಿ ಬೇರೆ, ಚುನಾವಣಾ ಅಖಾಡ ಬೇರೆ:ಮಧು ಬಂಗಾರಪ್ಪ
ಸಚಿವ ದೇಶಪಾಂಡೆ ಇಂದು ಬೆಳಿಗ್ಗೆ ನನ್ನನ್ನು ಭೇಟಿಯಾಗಿದ್ದರು. ಆದರೆ ಅವರ ಮಗ ಕಾರವಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂಬುದರ ಬಗ್ಗೆ ನನ್ನ ಬಳಿ ಮಾತನಾಡಿಲ್ಲವೆಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ನಂತರ ಸೀಟು ಹಂಚಿಕೆ ವಿಚಾರಗಳಲ್ಲಿ ಹುಟ್ಟಿಕೊಂಡಿರುವ ಗೊಂದಲಗಳೆಲ್ಲಾ ನಿವಾರಣೆ ಆಯಿತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಗೊಂದಲಗಳು ಇರೋದು ಮಾಧ್ಯಮಗಳಲ್ಲಿಯೇ ಹೊರತು ನಮ್ಮಗಳ ನಡುವೆ ಇಲ್ಲ ಎಂದು ಉತ್ತರ ನೀಡಿದರು.
ಡಿಕೆಶಿ ಸೇರಿದಂತೆ ಪ್ರತಿಯೊಬ್ಬರೂ ಮಧುವಿನ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಈ ಬಾರಿ ಮಧು ಬಂಗಾರಪ್ಪನವರ ಗೆಲುವಿಗೆ ಡಿಕೆಶಿ ಜೊತೆಗೆ ಎಲ್ಲರೂ ಕ್ಷೇತ್ರಕ್ಕೆ ಬಂದು ಶಕ್ತಿ ಮೀರಿ ಶ್ರಮಿಸಲಿದ್ದಾರೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.