ಶಿವಮೊಗ್ಗದಲ್ಲಿ ಮಳೆ ಅಬ್ಬರ; ಶಾಲಾ ಕಾಲೇಜುಗಳಿಗೆ ರಜೆ
ಶಿವಮೊಗ್ಗ, ಆಗಸ್ಟ್ 6: ಮಲೆನಾಡಿನಲ್ಲಿ ಇದೀಗ ಬಿಡುವು ಕೊಡದೆ ಮಳೆ ಸುರಿಯುತ್ತಿದೆ. ಇಷ್ಟು ದಿನ ಮಳೆ ಇಲ್ಲದೆ ಕಂಗಾಲಾಗಿದ್ದ ಮಲೆನಾಡಿನಲ್ಲಿ ಕಳೆದ ಎರಡು ಮೂರು ದಿನಗಳಿಂದಲೂ ನಿರಂತರ ಮಳೆಯಾಗುತ್ತಿದೆ.
ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಎ ದಯಾನಂದ ಆದೇಶ ಹೊರಡಿಸಿದ್ದಾರೆ.
ಮಳೆ: ಕರಾವಳಿಯಲ್ಲಿ ಆರೆಂಜ್ ಅಲರ್ಟ್, ಹಲವು ಕಡೆ ಶಾಲೆಗಳಿಗೆ ರಜೆ
ತೀರ್ಥಹಳ್ಳಿಯ ರಾಮಮಂಟಪ ಭರ್ತಿಯಾಗಿದ್ದು, ಸೇತುವೆ ಮೇಲೆ ನೀರು ಹರಿಯುವ ಮಟ್ಟಕ್ಕೆ ತಲುಪಿದೆ. ಸೊರಬ ಹಾಗೂ ಶಿಕಾರಿಪುರ, ಭದ್ರಾವತಿ ನಗರಗಳಲ್ಲೂ ಉತ್ತಮ ಮಳೆಯಾಗುತ್ತಿದ್ದು, ರೈತರ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.
ರಸ್ತೆಗಳಲ್ಲಿ ಮರಗಳು ಧರೆಗೆ ಉರುಳುತ್ತಿದ್ದು, ಕೆಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಎಲ್ಲಾ ತಾಲೂಕು ಕಚೇರಿಗಳಲ್ಲಿ 24/7 ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ.
ಶಿಕಾರಿಪುರ ತಾಲೂಕಿನ ಅಂಜನಾಪುರ ಮತ್ತು ಅಂಬ್ಲಿಗೊಳ್ಳ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಕೋಡಿ ಬೀಳುವುದು ಬಾಕಿ ಇದೆ. ಕೆಲವೆಡೆ ಹೊಲ ಗದ್ದೆಗಳು ಜಲಾವೃತವಾಗುತ್ತಿವೆ.