ದುಸ್ಥಿತಿಯಲಿದ್ದ ಶಿಕಾರಿಪುರದ ಬಹದೂರ್ ಖಾನ್ ಬಾವಿ ಈಗ ಸಂಪೂರ್ಣ ಸ್ವಚ್ಛ
ಶಿವಮೊಗ್ಗ, ಜೂನ್ .25: ಯುವಬ್ರಿಗೇಡ್ ವತಿಯಿಂದ ಶಿಕಾರಿಪುರದ ಇತಿಹಾಸ ಪ್ರಸಿದ್ಧ ಬಹದೂರ್ ಖಾನ್ ಬಾವಿಯನ್ನು ಸ್ವಚ್ಛಗೊಳಿಸಲಾಯಿತು.
ಪಟ್ಟಣದ ತೋಟಗಾರಿಕೆ ಇಲಾಖೆಯ ಆವರಣದಲ್ಲಿರುವ ಬಹದ್ದೂರ್ ಖಾನ್ ಬಾವಿ ಸಂಪೂರ್ಣ ದುಸ್ಥಿತಿಯಲಿದ್ದು, ಈ ಕೆಲಸವನ್ನು ಕೈಗೆತ್ತಿಕೊಂಡ ಪಟ್ಟಣದ ಯುವಾ ಬ್ರಿಗೇಡ್ ತಂಡ ಬಾವಿಯನ್ನು ಸ್ಚಚ್ಛಗೊಳಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ್, ಯುವ ಬ್ರಿಗೇಡ್ ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಜೀವಜಲ ಎಂಬ ಜಲದ ಮಹತ್ವ ಸಾರುವ ಹಾಗೂ ಪಾರಂಪರಿಕಾಗಿ ಕಲ್ಮಷಗೊಂಡಿರುವ ಕಲ್ಯಾಣಿಗಳನ್ನು ಮತ್ತು ನದಿಗಳ ಪಾವಿತ್ರತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಈ ನಿಟ್ಟಿನಲ್ಲಿ 150 ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ. ನೇತ್ರಾವತಿ, ಅಘನಾಶಿನಿ ಕಾವೇರಿ ಮುಂತಾದ ನದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ. ಯಾವುದೇ ಜಾತಿ ಮತ ಪಂಥ ಧರ್ಮಗಳನ್ನು ನೋಡದೆ ಮನುಕುಲದ ಒಳಿತಿಗಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ತಾಲೂಕು ಸಂಚಾಲಕ ರಘು ನಿರ್ಮಿತ್ ಮಾತನಾಡಿ, ಈ ಬಾವಿಗೆ ತನ್ನದೇ ಆದ ಇತಿಹಾಸವಿದೆ . ಇದನ್ನು ನಾವು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಬಹದೂರ್ ಖಾನ್ ಎಂಬುವವರು ಆಗ ನಿರಂತರ ಬರಗಾಲ ಬಂದಿದ್ದರಿಂದ ಕಂದಾಯವನ್ನು ಬ್ರಿಟಿಷರಿಗೆ ತಲುಪಿಸದೇ ಕುಡಿಯುವ ನೀರಿಗಾಗಿ ಈ ಬಾವಿ ಕಟ್ಟಿಸಿದರಂತೆ.
ಬ್ರಿಟಿಷರು ಕಂದಾಯಕ್ಕೆ ಒತ್ತಾಯ ಮಾಡಿದಾಗ ಕಂದಾಯ ಕಟ್ಟಲು ಹಣವಿಲ್ಲದೇ ಅವನು ಮತ್ತು ಅವನ ಸಂಸಾರ ಆತ್ಮಹತ್ಯೆ ಮಾಡಿಕೊಂಡಿತೆಂಬ ಪ್ರತೀತಿಯಿದೆ ಈ ಬಾವಿ ತ್ಯಾಗದ ಮತ್ತು ಸೇವೆಯ ಪ್ರತೀಕವಾಗಿದೆ ಎಲ್ಲರೂ ಒಂದಾಗಿ ಇಂತಹ ಅಪರೂಪದ ಜಲಸಂಗ್ರಹಗಳನ್ನು ಉಳಿಸಿಕೊಳ್ಳಬೇಕು.
ಇದು ಅರೇಬಿಕ್ ಶೈಲಿಯಲ್ಲಿದ್ದು, ವಿಶಿಷ್ಠವಾದ ರೀತಿಯಲ್ಲಿ ಇದನ್ನು ಕಟ್ಟಲಾಗಿದೆ. ಸೂಫಿ ಸಂತರ ಕಟ್ಟಡಗಳ ವಿನ್ಯಾಸ ಕಂಡು ಬರುತ್ತದೆ. ನಮ್ಮ ತಾಲೂಕಿನ ಸುತ್ತಮುತ್ತ ಇತಿಹಾಸ ಹಿನ್ನಲೆ ಇರುವ ಐತಿಹಾಸಿಕ ಸ್ಥಳಗಳಿವೆ. ಅದರಂತೆ ಇದು ಒಂದು ತ್ಯಾಗದ ಸಂಕೇತವಾಗಿದ್ದು, ಎಲ್ಲಾ ಸಮುದಾಯದವರು ಇದರ ರಕ್ಷಣೆಗೆ ಮುಂದಾಗಬೇಕಾಗಿದೆ.
ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ. ಸ್ವಚ್ಚತೆಗೆ ಯುವಾ ಬ್ರಿಗೇಡ್ ಮಾತ್ರವಲ್ಲ, ಪಟ್ಟಣದ ಎಲ್ಲಾ ನಾಗರೀಕರು ಸಹಕರಿಸಿದರೆ ಮಾತ್ರ ನಮ್ಮ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಯಲಿದೆ ಎಂದು ಬಾವಿಯ ಹಿರಿಮೆ ಸಾರಿದರು.
ಎಂ. ಅರ್ ರಘು, ಮಂಜುನಾಥ, ಸತೀಶ್ , ಹರ್ಷ, ಶಿವಕುಮಾರ್, ಭಾನುಪ್ರಕಾಶ್ , ಲೋಹಿತ್, ಅರುಣ್, ವಿಕಾಶ್, ಆಕಾಶ್, ಮಹೇಂದ್ರ, ಢಾಕೇಶ್, ಪ್ರಕಾಶ್ ಇದ್ದರು.












Click it and Unblock the Notifications