Breaking: ಶಿವಮೊಗ್ಗದಲ್ಲಿ ಮಳೆ ಆರ್ಭಟ: ರೈತರಿಗೆ ಆತಂಕ
ಶಿವಮೊಗ್ಗ, ಜುಲೈ, 30: ಶಿವಮೊಗ್ಗದಲ್ಲಿ ಬೆಳಂಬೆಳಗ್ಗೆ ಭಾರೀ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ವರುಣನ ಆರ್ಭಟಕ್ಕೆ ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸತತ ಎರಡು ಗಂಟೆಗಳ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಕಕ್ಕಿರಿದು ಸುರಿದ ಮಳೆಯಿಂದಾಗಿ ಚರಂಡಿಗಳ ನೀರು ಮನೆಗಳಿಗೆ ನುಗ್ಗಿವೆ.
ಅಣ್ಣಾನಗರದ ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿ ಸ್ಥಳೀಯರು ಕೂಡಲೆ ಪಾಲಿಕೆ ಕಾರ್ಪೊರೇಟರ್, ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಯಾರು ಕೂಡ ಜನರ ನೆರವಿಗೆ ಬಂದಿಲ್ಲ. ಆತಂಕಕೊಳಗಾಗಿದ್ದ ಸ್ಥಳೀಯರು ನೆರವಿಗೆ ಬರದ ಅಧಿಕಾಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮನೆಗೆ ನುಗ್ಗಿದ ಯುಜಿಡಿ ನೀರು:
ಸಾಗರ ರಸ್ತೆಯಲ್ಲಿ ಶ್ರೀರಾಮನಗರದಲ್ಲೂ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಹಲವು ವಸ್ತುಗಳು ಹಾನಿಗೀಡಾಗಿವೆ. ಭಾರಿ ಮಳೆಯಿಂದಾಗಿ ಒಳ ಚರಂಡಿಯ ನೀರು ಶೌಚಾಲಯದ ಮೂಲಕ ಮನೆಗೆ ನುಗ್ಗಿದೆ. ಮನೆಗಳಲ್ಲಿ ಏಕಾಏಕಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಕೆಟ್ಟ ವಾಸನೆ ಬರಲು ಶುರುವಾಗಿದೆ. ಮನೆಯಲ್ಲಿ ಮಲಗಿದ್ದವರು ದುರ್ವಾಸನೆ ತಡೆಯಲಾಗದೆ ಮನೆಯಿಂದ ಹೊರಗೆ ಬಂದು ಮಳೆಯಲ್ಲೇ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾನಗರ ಪಾಲಿಕೆಯ ಯುಜಿಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದರ ಪರಿಣಾಮ ಚರಂಡಿ ನೀರು ಮನೆಗೆ ನುಗ್ಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.

ಮಳೆ ಹಾನಿ:
ಮಳೆ ನಿರಂತರವಾಗಿದ್ದು, ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ವಿವಿಧೆಡೆ ಭಾರೀ ಹಾನಿ ಉಂಟಾಗಿದೆ. ಹೊಳೆಹೊನ್ನೂರು ಭಾಗದಲ್ಲಿ ಹಲವು ಕಡೆ ಅಡಕೆ ಮರ ಮತ್ತು ತೆಂಗಿನ ಮರಗಳು ಧರೆಗುರುಳುತ್ತಿವೆ. ಮೈದೊಳಲು ಗ್ರಾಮದ ಕುಬೇಂದ್ರಪ್ಪ ಎಂಬವವರ ಮನೆ ಮೇಲೆ ತೆಂಗಿನ ಮರ ಮುರಿದು ಬಿದ್ದಿದ್ದು, ಅವರ ಮನೆಗೆ ಹಾನಿಯಾಗಿದೆ. ಹೀಗೆ ಮೈದೊಳಲು, ಮಲ್ಲಿಗೆನಹಳ್ಳಿ, ಹನುಮಂತಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮರಗಳು ಧರೆಗುರುಳಿ ಬೃಹತ್ ಮಟ್ಟದಲ್ಲಿ ಹಾನಿಯಾಗಿವೆ.

ರಸ್ತೆ ಮೇಲೆ ಹರಿದ ಭದ್ರೆ:
ಮಲ್ಲಾಪುರ ಗ್ರಾಮದ ಸಮೀಪ ಎಸ್.1 ನಾಲೆಯು ತುಂಬಿದ್ದು, ನೀರು ರಸ್ತೆಗೆ ನುಗ್ಗಿದೆ. ಭದ್ರಾ ನಾಲೆ ತುಂಬಿ ಹರಿಯುತ್ತಿದ್ದು, ಅಲ್ಲಿನ ಸುತ್ತಮುತ್ತಲಿನ ಜನರಿಗೆ ಆತಂಕ ಶುರುವಾಗಿದೆ. ನೀರು ಸಂಪೂರ್ಣವಾಗಿ ರಸ್ತೆ ಮತ್ತು ಪಕ್ಕದ ತೋಟ, ಗದ್ದೆಗಳಿಗೆ ನುಗ್ಗುತ್ತಿದೆ. ಇದರಿಂದ ರಸ್ತೆಗಳು ಕೂಡ ಹಾನಿಗೀಡಾಗುತ್ತಿವೆ. ಬೆಳೆಗಳು ಜಲಾವೃತವಾಗುತ್ತಿದ್ದು, ರೈತರು ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.
ಅಗರದಳ್ಳಿ ಗ್ರಾಮದ ಎಕೆ ಕಾಲೋನಿಯಲ್ಲಿ ನೆರೆ ಪರಿಸ್ಥಿತಿ ಸೃಷ್ಟಿಯಾಗಿ, ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿದೆ. ಅಲ್ಲಿನ ಜನರು ಆತಂಕದಲ್ಲೇ ರಾತ್ರಿ ಕಳೆಯುವಂತಾಗಿದೆ. ಇನ್ನು ಭದ್ರಾವತಿಯ ಒಳಾಂಗಣ ಕ್ರೀಡಾಂಗಣದ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.

ಕಳೆದ ಒಂದು ವಾರದಿಂದ ತಗ್ಗಿದ್ದ ಮಳೆ, ಈಗ ಮತ್ತೆ ಆರ್ಭಟ ಶುರು ಮಾಡಿದೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶದ ಜನರಿಗೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.












Click it and Unblock the Notifications