ಮೃತ ವಿದ್ಯಾರ್ಥಿನಿ ಆಶಿಕಾ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ವಿತರಣೆ
ತೀರ್ಥಹಳ್ಳಿ, ಜುಲೈ.10: ಸೋಮವಾರ ಸಂಜೆ ಮಳೆಯ ಹೊಡೆತಕ್ಕೆ ನೀರುಪಾಲಾದ ವಿದ್ಯಾರ್ಥಿನಿ ಆಶಿಕಾ ಮನೆಗೆ ಇಂದು ಮಂಗಳವಾರ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಭೇಟಿ ನೀಡಿ, ಆಶಿಕಾ ತಾಯಿಗೆ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಆಶಿಕಾ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿಗಳು, ಸರ್ಕಾರದ ವತಿಯಿಂದ ಆಹಾರ ಪದಾರ್ಥಗಳು, ಬಟ್ಟೆ ನೀಡಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಮಂಗಳೂರು: ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ವಿತರಣೆ
ಆ ನಂತರ ಬಾಲಕಿಯು ಕಾಲು ಜಾರಿ ಬಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಖುದ್ದು ಸ್ಥಳ ಪರಿಶೀಲನೆ ನಡೆಸಿದರು. ತಾತ್ಕಾಲಿಕವಾಗಿ ಮುಂಜಾಗ್ರತವಾಗಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಇವರುಗಳಿಗೆ ಸೂಚಿಸಿದರು.
ಬಾಲಕಿ ಶಾಲೆಗೆ ತೆರಳುತಿದ್ದ ಮಾರ್ಗದ ಕಾಲು ದಾರಿಯಲ್ಲಿ ತೆರಳಿ ಸ್ಥಳ ಪರಿಶೀಲನೆ ನಡೆಸಿ, ಶಾಲೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಲಾಯಿತು.
ಪರಿಶೀಲನೆ ವೇಳೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ತಹಶೀಲ್ದಾರ್ ತೀರ್ಥಹಳ್ಳಿ , ಪಂಚಾಯತ್ ರಾಜ್ ಇಂಜಿನಿಯರಿಂಗ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು..
ಸೋಮವಾರ ಸಂಜೆ ಮಳೆಯ ಹೊಡೆತಕ್ಕೆ ನೀರುಪಾಲಾದ ಆಶಿಕಾ ಮೃತದೇಹ ಇಂದು ಮಂಗಳವಾರ ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂದಾಳಬೈಲು ಸಮೀಪದ ದೊಡ್ಲಿ ಮನೆ ಗ್ರಾಮದ ಬಳಿ ಪತ್ತೆಯಾಗಿದೆ.
ಘಟನಾ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಆಶಿಕಾ ಮೃತ ದೇಹ ಪತ್ತೆಯಾಗಿದೆ. ಆಶಿಕಾ ಗುಡ್ಡೇಕೇರಿ ಸರ್ಕಾರಿ ಫ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು.
ಸೋಮವಾರ ಸಂಜೆಯಿಂದಲೇ ಅಗ್ನಿಶಾಮಕ, ಪೊಲೀಸರು, ಸ್ಥಳೀಯರು ಕಾರ್ಯಾಚರಣೆ ಮಾಡಿದ್ದರು. ಆದರೆ ವಿದ್ಯಾರ್ಥಿನಿ ಆಶಿಕಾ ಪತ್ತೆಯಾಗಿರಲಿಲ್ಲ.
ಇಂದು ಮಂಗಳವಾರ ಬೆಳಗ್ಗೆ ಘಟನಾ ಸ್ಥಳದಿಂದ ಒಂದು ಕಿ.ಮೀ. ದೂರದಲ್ಲಿ ಆಶಿಕಾ ಮೃತದೇಹ ಪತ್ತೆಯಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶವ ಪತ್ತೆಕಾರ್ಯದಲ್ಲಿ ತಹಶೀಲ್ದಾರ್ ಆನಂದಪ್ಪ ನಾಯಕ್, ಆರ್ ಐ ಸುಧೀರ್, ಪೊಲೀಸ್ ಇಲಾಖೆ ಹಾಗೂ ಗ್ರಾಮಸ್ಥರು ಶ್ರಮಿಸಿದ್ದರು. ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.