ನಷ್ಟದಲ್ಲಿ ಗಜಾನನ ಸಂಸ್ಥೆ, ಬಸ್ ಸಂಚಾರ ಸ್ಥಗಿತ?
ಶಿವಮೊಗ್ಗ, ನವೆಂಬರ್ 15 : 'ಭಟ್ರೇ ಐದೂವರೆಯ ಗಜಾನನ ಬಸ್ ಹೋಯಿತಾ?'. ಹೌದು.. ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ಮಲೆನಾಡು ಭಾಗದಲ್ಲಿ ಗಜಾನನ ಬಸ್ ಜನರೊಂದಿಗೆ ಬೆರೆತು ಹೋಗಿದೆ. ಸದ್ಯ, ಬಸ್ ಸಂಚಾರ ನಿಲ್ಲುವ ಸೂಚನೆ ಸಿಕ್ಕಿದೆ.
S.G.M.T.Co.Ltd, ಅಥವ ಗಜಾನನ ಟ್ರಾವೆಲ್ಸ್ ಮಲೆನಾಡ ಜನರ ಜೀವನಾಡಿ. ಈಗ ನಷ್ಟವಾಗುತ್ತಿರುವ ಹಿನ್ನಲೆಯಲ್ಲಿ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
1944ರಲ್ಲಿ ಆರಂಭವಾದ ಗಜಾನನ ಟ್ರಾವೆಲ್ಸ್ ಬಸ್ಸುಗಳು ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಮಂಗಳೂರು, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಸಂಚಾರ ನಡೆಸುತ್ತದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳ ಜನರಿಗೆ ಗಜಾನನ ಚಿರಪರಿಚಿತ.

ಕೆಲವೇ ಬಸ್ ಮತ್ತು ಬೆರಳೆಣಿಕೆ ಸಿಬ್ಬಂದಿಗಳೊಂದಿಗೆ ಆರಂಭವಾದ ಗಜಾನನ ಟ್ರಾವೆಲ್ಸ್ 140 ಬಸ್ಗಳನ್ನು ಹೊಂದಿ 700 ಕಾರ್ಮಿಕರು ಕೆಲಸ ಮಾಡುವ ಮಟ್ಟಕ್ಕೆ ಬೆಳದಿತ್ತು. ಆದರೆ, ಕೆಲವು ವರ್ಷಗಳಿಂದ ಸಂಸ್ಥೆ ನಷ್ಟದಲ್ಲಿದೆ.
ಪ್ರಸ್ತುತ 100 ಬಸ್ಗಳು ಮಾತ್ರ ಉಳಿದುಕೊಂಡಿವೆ, 300 ಸಿಬ್ಬಂದಿಗಳಿದ್ದಾರೆ. ನಷ್ಟವಾಗುತ್ತಿದೆ ಎಂದು ಹೇಳಿರುವ ಸಂಸ್ಥೆ ಕಾರ್ಮಿಕರ ಜೊತೆ ಮಾತುಕತೆ ನಡೆಸಿ, ಬಸ್ ಸಂಚಾರ ನಿಲ್ಲಿಸುವ ಕುರಿತು ಚಿಂತನೆ ನಡೆಸುತ್ತಿದೆ.
ಜನವರಿಯಲ್ಲಿ ಸಂಸ್ಥೆಗೆ 75 ವರ್ಷ ತುಂಬುತ್ತದೆ. ಇಷ್ಟು ವರ್ಷಗಳ ಕಾಲ ಜನರ ಜೀವನಾಡಿಯಾಗಿದ್ದ ಸಂಸ್ಥೆ ಮುಚ್ಚುವ ಹಂತಕ್ಕೆ ಬಂದಿರುವುದು ಬೇಸರದ ವಿಚಾರ. ಆಡಳಿತ ಮಂಡಳಿ ಬಸ್ ಸಂಚಾರ ನಿಲ್ಲಿಸುವ ಕುರಿತು ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ.
ಗಜಾನನ ಸಂಸ್ಥೆಯ ಮುಖ್ಯಸ್ಥ ವಿಲಾಸ ನಾಯಕ ಅವರು ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, 'ಕೋಟ್ಯಾಂತರ ರೂಪಾಯಿ ನಷ್ಟದಲ್ಲಿರುವ ಸಂಸ್ಥೆಯನ್ನು ಮುಚ್ಚುವುದೇ? ಅಥವ ನಡೆಸುವುದೇ? ಎಂದು ನೌಕರರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಹೇಳಿದ್ದಾರೆ.












Click it and Unblock the Notifications