ಶಿವಮೊಗ್ಗ; ಊರಿಗೆ ಬೇಲಿ, ಊರಲ್ಲಿ ಯಾರೂ ಉಳಿಯೋಲ್ಲ!
ಶಿವಮೊಗ್ಗ, ಫೆಬ್ರವರಿ 10: ಮೂರು ವರ್ಷಕ್ಕೊಮ್ಮೆ ಗ್ರಾಮಸ್ಥರೆಲ್ಲಾ ಊರು ಬಿಡುತ್ತಾರೆ. ಇಡೀ ಗ್ರಾಮಕ್ಕೆ ಬೇಲಿ ಹಾಕುತ್ತಾರೆ. ದನಕರು, ನಾಯಿ, ಕೋಳಿಗಳನ್ನು ಕೂಡ ಊರಿನಲ್ಲಿ ಬಿಡದೇ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಸಂಜೆಯ ತನಕ ಊರಿನಲ್ಲಿ ಯಾರೂ ಇರುವುದಿಲ್ಲ.
ಹೌದು, ಇದು ಹೊರಬೀಡು ಜಾತ್ರೆಯ ವಿಶೇಷ. ಶಿವಮೊಗ್ಗ ತಾಲೂಕು ಮಂಡಘಟ್ಟ ಗ್ರಾಮದಲ್ಲಿ ಈ ಜಾತ್ರೆ ನಡೆಯಲಿದೆ. ಗ್ರಾಮಸ್ಥರು ಇಡೀ ದಿನ ಊರಾಚೆಗೆ ಇದ್ದು ಒಟ್ಟಿಗೆ ಬೆರೆತು, ಊಟ ಮಾಡಿ ಸಾಮಾರಸ್ಯದಿಂದ ಹಬ್ಬ ಆಚರಿಸುತ್ತಾರೆ. ಫೆಬ್ರವರಿ 9ರ ಮಂಗಳವಾರ ಹೊರಬೀಡು ಜಾತ್ರೆ ನಡೆಯಿತು.
ಮಂಡಘಟ್ಟ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಹೊರಬೀಡು ಜಾತ್ರೆ ಆಚರಣೆ ನಡೆಯುತ್ತದೆ. ಈ ಜಾತ್ರೋತ್ಸವದಂದು ಸೂರ್ಯೋದಯಕ್ಕೆ ಮೊದಲು ಜನರೆಲ್ಲರೂ ಊರು ಬಿಡುತ್ತಾರೆ. ದನ, ನಾಯಿ, ಕೋಳಿಗಳನ್ನು ಕರೆದುಕೊಂಡು ಹೋಗುತ್ತಾರೆ.
ಸಂಜೆ ಸೂರ್ಯ ಮುಳುಗಿದ ಮೇಲೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮಕ್ಕೆ ವಾಪಸ್ ಆಗುತ್ತಾರೆ. ಈ ಸಮಯದಲ್ಲಿ ಗ್ರಾಮಕ್ಕೆ ಯಾರೂ ಸಹ ಕಾಲಿಡುವಂತಿಲ್ಲ.

ಪ್ರಾಣಿಗಳು ಸಹ ಊರಲ್ಲಿ ಇರಲ್ಲ
ಹೊರಬೀಡು ಜಾತ್ರೆಯ ಸಂದರ್ಭದಲ್ಲಿ ಜನರು ಮಾತ್ರ ಊರು ಬಿಡುವುದಿಲ್ಲ. ಆ ಸಂದರ್ಭದಲ್ಲಿ ಯಾವುದೇ ಜೀವಿಯೂ ಊರಿನಲ್ಲಿ ಇರಬಾರದು ಅನ್ನುವ ಕಾರಣಕ್ಕೆ, ದನಕರು, ನಾಯಿ, ಕೋಳಿಗಳನ್ನು ಕೂಡ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಇಡೀ ದಿನ ಊರಿನಿಂದ ಹೊರಗಿರುತ್ತಾರೆ. ಊರಿಗೆ ಯಾರೂ ಕಾಲಿಡುವುದಿಲ್ಲ.

ಊರಿಗೇ ಬೇಲಿ ಹಾಕುತ್ತಾರೆ
ಹೊರಬೀಡು ಸಂದರ್ಭದಲ್ಲಿ ಯಾರೊಬ್ಬರೂ ಊರೊಳಗೆ ಕಾಲಿಡಬಾರದು ಎಂಬ ಕಾರಣಕ್ಕೆ ಇಡೀ ಊರಿಗೆ ಬೇಲಿ ಹಾಕುತ್ತಾರೆ. ಗಾಡಿಗಳನ್ನು ಅಡ್ಡ ನಿಲ್ಲಿಸಿ ರಸ್ತೆಗಳನ್ನು ಬಂದ್ ಮಾಡುತ್ತಾರೆ. ಸೂರ್ಯ ಮುಳುಗಿದ ಬಳಿಕ ಜನರು ತಮ್ಮ ಜಾನುವಾರುಗಳ ಜೊತೆ ಊರಿಗೆ ವಾಪಸ್ ಆಗುತ್ತಾರೆ.

ಇಡೀ ದಿನ ಎಲ್ಲಿರ್ತಾರೆ ಜನರು?
ಹೊರಬೀಡು ಜಾತ್ರೆ ಆಚರಣೆ ಹಿನ್ನೆಲೆ ಜನರು ಊರ ಹೊರಗೆ ಗದ್ದೆ ಬಯಲಿನಲ್ಲಿ ಟೆಂಟ್, ಗುಡಿಸಲುಗಳನ್ನು ನಿರ್ಮಿಸುತ್ತಾರೆ. ಇಡೀ ದಿನ ಜನರು ಅಲ್ಲಿಯೇ ಉಳಿದುಕೊಳ್ಳುತ್ತಾರೆ.
"ಈ ಹಿಂದೆ ಕಾಯಿಲೆಗಳು ಬಂದಾಗ ಪೂರ್ವಿಕರು ಊರು ತೊರೆದು ಕಾಡಿನಲ್ಲಿ ದಿನ ಕಳೆಯುತ್ತಿದ್ದರು. ಆ ಆಚರಣೆಯೇ ಹೊರಬೀಡು ಆಚರಣೆಯಾಗಿದೆ. ಈ ಉತ್ಸವ ಮಾಡುವುದರಿಂದ ದೇವಿಯು ಜನರಿಗೆ ಒಳ್ಳೆಯ ಆರೋಗ್ಯ ಕೊಡುತ್ತಾಳೆ, ಎಲ್ಲರನ್ನೂ ರಕ್ಷಣೆ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಹೊರಬೀಡು ಆಚರಣೆ ವೇಳೆ ದೇವಿಯ ಮೂರ್ತಿ ಸಿದ್ಧಪಡಿಸಿ ಪೂಜೆ ಸಲ್ಲಿಸುತ್ತೇವೆ ಎನ್ನುತ್ತಾರೆ" ಗ್ರಾಮದ ಹಿರಿಯರಾದ ನಂಜಪ್ಪ ಗೌಡ.

ಮೂರ್ತಿ ನಿರ್ಮಿಸಿ ವಿಶೇಷ ಪೂಜೆ
ಗದ್ದೆ ಬಯಲಿನಲ್ಲಿ ಉಳಿದ ವೇಳೆ ಗ್ರಾಮ ದೇವಿಯ ಮಣ್ಣಿನ ಮೂರ್ತಿಯನ್ನು ಸಿದ್ಧಪಡಿಲಸಾಗುತ್ತದೆ. ಸಂಜೆ ವೇಳೆಗೆ ಆ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಗ್ರಾಮಸ್ಥರೆಲ್ಲ ಒಟ್ಟಿಗೆ ಸೇರಿ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಗ್ರಾಮವನ್ನು ಪ್ರವೇಶಿಸುತ್ತಾರೆ.
ಹೊರಬೀಡು ಜಾತ್ರೋತ್ಸವದ ವೇಳೆ ಗ್ರಾಮಸ್ಥರೆಲ್ಲ ಒಟ್ಟಿಗೆ ಬೆರೆತು, ಊಟ ಮಾಡಿ, ಸೌಹಾರ್ದತೆಯನ್ನು ಪ್ರದರ್ಶಿಸುತ್ತಾರೆ. ಗ್ರಾಮದಲ್ಲಿ ಶಾಂತಿ ನೆಲೆಸಲು ಇದು ಕಾರಣವಾಗುತ್ತದೆ.












Click it and Unblock the Notifications