ಮಿಸ್ಸಿಂಗ್ ಆಗಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಗಿರಿರಾಜ್ ಕೊನೆಗೂ ಪತ್ತೆ
ಶಿವಮೊಗ್ಗ, ಅಕ್ಟೋಬರ್ 7: ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ ನಾಪತ್ತೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಕೊನೆಗೂ ಗಿರಿರಾಜ್ ಜೀವಂತವಾಗಿ ಪತ್ತೆಯಾಗಿದ್ದು, ಇದು ಪೊಲೀಸರ ತನಿಖೆಯ ದಿಕ್ಕು ಬದಲಿಸಿದೆ.
ಸೆ.28ರ ಬೆಳಿಗ್ಗೆ ಐಎಎಸ್ ಅಧಿಕಾರಿಗಳ ವಿರುದ್ಧ ಆರೋಪವೆಸಗಿ ಆತ್ಮಹತ್ಯೆ ಮಾಡಕೊಳ್ಳುತ್ತೇನೆಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಗಿರಿರಾಜ್ ಕೊನೆಗೂ ಜೀವಂತವಾಗಿ ಸಿಕ್ಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಕಟ್ಟೆಯೊಂದರ ಮೇಲೆ ಸುಸ್ತಾಗಿ ಮಲಗಿದ್ದ ಗಿರಿರಾಜ್ರನ್ನು ದೇವಸ್ಥಾನ ಆಡಳಿತ ಮಂಡಳಿಯೋರ್ವರು ಗುರುತು ಹಿಡಿದು ಮೊಬೈಲ್ ಆನ್ ಮಾಡಿದಂತೆ ಮೊಬೈಲ್ ಟ್ರೇಸ್ ಔಟ್ ಆಗಿದೆ.

ನಂತರ ಗಿರಿರಾಜ್ರನ್ನು ಉಪಚರಿಸಿ ಧರ್ಮಸ್ಥಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಗಿರಿರಾಜ್ ಜೀವಂತವಾಗಿ ಸಿಗುವ ಮೂಲಕ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳಲ್ಲಿ ಸಂತಸ ಮೂಡಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಇಲಾಖೆಯ ಮೂವರು ಸಿಬ್ಬಂದಿಗಳು ಹಾಗೂ ಪೊಲೀಸರು ಈಗ ಧರ್ಮಸ್ಥಳಕ್ಕೆ ಹೋಗಿದ್ದಾರೆ. ಆದರೆ, ಗಿರಿರಾಜ್ ಮಾಡಿರುವ ಆರೋಪಗಳು ಗಂಭೀರವಾಗಿರುವುದರಿಂದ ಇಲಾಖೆ ಹೇಗೆ ನಡೆದುಕೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಪ್ರಕರಣವೇನು?
ಗಿರಿರಾಜ್ ನಾಪತ್ತೆಯಾಗುವ ಮೊದಲು ತಮ್ಮ ಸಾವಿಗೆ ಹಿರಿಯ ಅಧಿಕಾರಿಗಳು ಕಾರಣ ಎಂದು ವಾಟ್ಸಪ್ ಸಂದೇಶದಲ್ಲಿ ತಿಳಿಸಿದ್ದರು. ಯಾವುದೇ ಕಾಮಗಾರಿಗೆ 2018ರಿಂದ ಈಚೆಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಪಿಡಿ ಖಾತೆಯಲ್ಲಿ ಇರುವ ಹಣವನ್ನು ಕಾಮಗಾರಿಗಳಿಗೆ ಬಳಕೆ ಮಾಡುವಂತೆ ಶಾಸಕರ ಒತ್ತಾಯವಿದೆ.
ಆದರೆ ಈ ಹಣವನ್ನು ಹೇಗೆ ಬಳಕೆ ಮಾಡಬೇಕು? ಎಂದು ಸರ್ಕಾರಕ್ಕೆ ಪತ್ರ ಬರೆದರೂ ಉತ್ತರವಿಲ್ಲ ಎಂದು ವಾಟ್ಸಪ್ ಮೆಸೇಜ್ನಲ್ಲಿ ತಿಳಿಸಿದ್ದರು. ಹಿರಿಯ ಅಧಿಕಾರಿಗಳು ನಾಲ್ಕೈದು ವಿಭಾಗದ ಜವಾಬ್ದಾರಿ ನೀಡಿ ಕೆಲಸದ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಮನನೊಂದು ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಗಿರಿರಾಜ್ ಸಂದೇಶದಲ್ಲಿ ಹೇಳಿದ್ದರು.
ನಾಪತ್ತೆ ಎಂದು ದೂರು;
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಉದ್ಯೋಗಿ ಗಿರಿರಾಜ್ ಪತ್ನಿ ಜ್ಯೋತಿ ಜಯನಗರ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ತಮ್ಮ ಪತಿ ಗಿರಿರಾಜ್ ಬಸವನಗುಡಿಯ ಮನೆಯಿಂದ ಹೋದವರು ಮರಳಿ ಬಂದಿಲ್ಲ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಹುಡಕಿಕೊಡುವಂತೆ ಗಿರಿರಾಜ್ ಪತ್ನಿ ದೂರಿನಲ್ಲಿ ಮನವಿ ಮಾಡಿದ್ದರು.
ದೂರಿನಲ್ಲಿ ಹಿರಿಯ ಅಧಿಕಾರಿಗಳ ಒತ್ತಡ ಬಗ್ಗೆಯಾಗಲಿ, ವಾಟ್ಸಪ್ ಮೆಸೇಜಿನಲ್ಲಿ ಗಿರಿರಾಜ್ ಪ್ರಸ್ತಾಪಿಸಿದ ವಿಚಾರವಾಗಲಿ ಉಲ್ಲೇಖಿಸಿರಲಿಲ್ಲ. ಗಿರಿರಾಜ್ ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು.
ಭದ್ರಾವತಿ ತಾಲೂಕು ಬಾರಂದೂರು ಗ್ರಾಮ ಮತ್ತು ಶಿವನಿ ಸಮೀಪದಲ್ಲಿ ಸಿಗ್ನಲ್ ಸಿಕ್ಕಿತ್ತು. ಈ ಭಾಗದಲ್ಲಿ ಭದ್ರಾ ನದಿಯ ನಾಲೆ ಇದೆ. ಹಾಗಾಗಿ ಅಲ್ಲಿ ಶೋಧ ಕಾರ್ಯ ನಡೆಸಿದ್ದರು.












Click it and Unblock the Notifications